ಹಾನಗಲ್ಲ: ಹೊಲದಲ್ಲಿ ವಿದ್ಯುತ್ ತಂತಿ ತಗುಲಿ ಸಾವಿಗೆ ಕಾರಣರಾದ ಆರೋಪಿಗಳನ್ನು ಬಂಧಿಸಲು ಒತ್ತಾಯಿಸಿ ಜಿಲ್ಲಾ ಚಲವಾದಿ ಮಹಾಸಭಾ ಸೇರಿದಂತೆ ವಿವಿಧ ದಲಿತ ಸಂಘಟನೆಗಳ ಮುಖಂಡರು ಮಂಗಳವಾರ ತಹಸೀಲ್ದಾರ್ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು.ತಾಲೂಕಿನ ಇನಾಂನೀರಲಗಿ ಗ್ರಾಮದ ಅಣ್ಣಪ್ಪ ಪಡವೇಶಪ್ಪ ಕ್ಯಾಸನೂರ ಎಂಬ ವ್ಯಕ್ತಿ ಗಣೇಶ ಹಬ್ಬದ ಸಲುವಾಗಿ ತಳಿರುತೋರಣ ತರಲು ಹೊಲಕ್ಕೆ ಹೋದಾಗ ಹೊಲದ ಮಾಲೀಕರು ಅವೈಜ್ಞಾನಿಕವಾಗಿ ಬೇಲಿಗೆ ಅಳವಡಿಸಿದ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದನು. ಅಂದೇ ಮೃತನ ಸಂಬಂಧಿಕರು ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. 15 ದಿನಗಳಾದರೂ ಆರೋಪಿಗಳನ್ನು ಬಂಧಿಸದೇ ಇದ್ದ ಕಾರಣ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಚಲುವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ಮಲ್ಲೇಶಪ್ಪ ಮಡ್ಲೇರ ಮಾತನಾಡಿ, ದಲಿತರ ಮೇಲೆ ಆದ ತೊಂದರೆಗಳಿಗೆ ಇಲಾಖೆಗಳು ಹಾಗೂ ಸರ್ಕಾರ ಸ್ಪಂದಿಸಿ ಸಮಸ್ಯೆ ಪರಿಹರಿಸಬೇಕು. ಇಲ್ಲದಿದ್ದರೆ ದಲಿತರ ಮೇಲಾಗುವ ಅನ್ಯಾಯಕ್ಕೆ ಕೊನೆ ಇಲ್ಲದಂತಾಗುತ್ತದೆ.
ತಾಲೂಕಿನ ಇನಾಂನೀರಲಗಿ ಗ್ರಾಮದಲ್ಲಿ ಅಣ್ಣಪ್ಪ ಕ್ಯಾಸನೂರ ಎಂಬ ವ್ಯಕ್ತಿ ಅವೈಜ್ಞಾನಿಕ ವಿದ್ಯುತ್ ತಂತಿ ಅಳವಡಿಸಿದ ಸ್ಥಳದಲ್ಲಿ ಮೃತಪಟ್ಟಿದ್ದಾನೆ. ಆದರೆ ಈವರೆಗೂ ತಂತಿ ಅಳವಡಿಸಿದವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ಪೊಲೀಸ್ ಹಾಗೂ ಕಂದಾಯ ಇಲಾಖೆಗಳ ನಿರ್ಲಕ್ಷ್ಯವಾಗಿದ್ದು, ಇದನ್ನು ಖಂಡಿಸುತ್ತೇವೆ. ಶೀಘ್ರ ತಪ್ಪಿತಸ್ಥರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು. ಅವೈಜ್ಞಾನಿಕ ವಿದ್ಯುತ್ ತಂತಿಯಿಂದ ಮೃತಪಟ್ಟ ವ್ಯಕ್ತಿಗೆ ನ್ಯಾಯ ಒದಗಿಸಬೇಕು. ಶೀಘ್ರ ನ್ಯಾಯ ಸಿಗದಿದ್ದರೆ ಮತ್ತೆ ಹೋರಾಟ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.ದಲಿತ ಮುಖಂಡ ರಾಮೂ ಯಳ್ಳೂರ, ಬಿ. ಮಂಜುನಾಥ, ಹನುಮಂತಪ್ಪ ಕೋಣನಕೊಪ್ಪ, ಮಂಜುನಾಥ ಕರ್ಜಗಿ, ಮಹೇಶ ಕ್ಯಾಸನೂರ, ನಿಂಗಪ್ಪ ಕಾಳೇರ ಹಾಗೂ ಜೆಡಿಎಸ್ ತಾಲೂಕಾಧ್ಯಕ್ಷ ರಾಮುನಗೌಡ ಪಾಟೀಲ ಮೊಲಾದವರು ಮಾತನಾಡಿ, ಅವೈಜ್ಞಾನಿಕವಾಗಿ ಹೊಲದ ಬೇಲಿಗೆ ವಿದ್ಯುತ್ ತಂತಿ ಅಳವಡಿಸಿ ಒಬ್ಬರ ಸಾವಿಗೆ ಕಾರಣರಾದವರನ್ನು ಇದುವರೆಗೂ ಬಂಧಿಸದೇ ಇರುವುದು ಬೇಸರ ತಂದಿದೆ. ಕೂಡಲೆ ಪೊಲೀಸ್ ಇಲಾಖೆ ಹಾಗೂ ಹೆಸ್ಕಾಂ ಇಲಾಖೆ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಪ್ರತಿಭಟನಾಕಾರರು ಹಾಗೂ ಅಧಿಕಾರಿಗಳ ನಡುವೆ ವಾದ- ವಿವಾದಗಳು ನಡೆದು ಕೊನೆಗೆ ಅಧಿಕಾರಿಗಳು ನ್ಯಾಯ ಒದಗಿಸುವ ಭರವಸೆ ನೀಡಿದ ಮೇಲೆ ಪ್ರತಿಭಟನೆ ನಿಲ್ಲಿಸಿ ಶಿರಸ್ತೇದಾರರಿಗೆ ಮನವಿ ಸಲ್ಲಿಸಲಾಯಿತು.ವಿದ್ಯುತ್ ಪ್ರವಹಿಸಿ ಯುವಕ ಸಾವುಹಾವೇರಿ: ಯುವಕನೋರ್ವ ನಿರ್ಮಾಣ ಹಂತದ ಕಟ್ಟಡದ ಗೋಡೆಗೆ ನೀರು ಹೊಡೆಯುವಾಗ ಆಕಸ್ಮಿಕವಾಗಿ ಕರೆಂಟ್ ಶಾಕ್ ಹೊಡೆದು ಮೃತಪಟ್ಟಿರುವ ಘಟನೆ ಸ್ಥಳೀಯ ಉದಯನಗರದಲ್ಲಿ ನಡೆದಿದೆ.
ಸ್ಥಳೀಯ ಉದಯನಗರ ನಿವಾಸಿ ಮಂಜುನಾಥ ದೊಡ್ಡಗೌಡ್ರ(18) ಮೃತ ದುರ್ದೈವಿ. ಈತ ಹಾವೇರಿಯ ಉದಯನಗರ ಗಣಪತಿ ದೇವಸ್ಥಾನ ಬಳಿ ನಿರ್ಮಾಣ ಮಾಡುತ್ತಿರುವ ಮನೆಯ ಮೇಲ್ಮಹಡಿ ಗೋಡೆಗೆ ನೀರು ಹೊಡೆಯುವಾಗ ಆಕಸ್ಮಿಕವಾಗಿ ಕರೆಂಟ್ ಶಾಕ್ ಹೊಡೆದ ಪರಿಣಾಮ ಬಿದ್ದಿದ್ದಾನೆ. ಚಿಕಿತ್ಸೆಗೆಂದು ಜಿಲ್ಲಾಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿದ್ದನ್ನು ಖಚಿತಪಡಿಸಿರುವುದಾಗಿ ಮೃತನ ತಂದೆ ಶಂಭುಲಿಂಗಪ್ಪ ದೊಡ್ಡಗೌಡ್ರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.