ಕನ್ನಡಪ್ರಭ ವಾರ್ತೆ ಭಾಲ್ಕಿಶರಣರು ನಡೆದಾಡಿದ ಭೂಮಿ ಬಸವಕಲ್ಯಾಣದಲ್ಲಿ ವಚನ ವಿಶ್ವವಿದ್ಯಾಲಯ ಸ್ಥಾಪನೆ ಮಾಡುವಂತೆ ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಮನವಿ ಮಾಡಿದ್ದಾರೆ.
ಕಲಬುರಗಿಯಲ್ಲಿ ವಚನ ಮಂಟಪ ಸ್ಥಾಪನೆಗೆ ಬಜೆಟ್ನಲ್ಲಿ ಘೋಷಣೆ ಮಾಡಿರುವುದು ಸ್ವಾಗತಾರ್ಹ. ಅದೇ ರೀತಿ ಬಸವಕಲ್ಯಾಣ ವಚನ ಉದಯವಾದ ನೆಲ. ಜಗತ್ತಿಗೆ ಪ್ರಜಾಪ್ರಭುತ್ವ ಕೊಟ್ಟಿದ್ದು ವಚನ ಸಾಹಿತ್ಯ, ಸರ್ವರಿಗೂ ಸಮಾನತೆ ಸಾರಿದ ಭೂಮಿಯಲ್ಲಿ ವಚನ ಸಾಹಿತ್ಯ ವಿಶ್ವವಿದ್ಯಾಲಯ ಸ್ಥಾಪಿಸುವುದರಿಂದ ಬಸವಾದಿ ಶರಣರ ತತ್ವಗಳು ಜಗದಗಲ ತಲುಪಿಸಲು ಸಹಕಾರಿ ಆಗುತ್ತದೆ. ವಚನ ಸಾಹಿತ್ಯ ಅಧ್ಯಯನ, ಸಂಶೋಧನೆ ನಡೆಸಲು ಅನುಕೂಲವಾಗುತ್ತದೆ.
ತಮಗೆ ಬಸವಾದಿ ಶರಣರ ತತ್ವಗಳ ಮೇಲೆ ಅಪಾರ ಅಭಿಮಾನ, ಗೌರವ ಇದೆ. ಹೀಗಾಗಿ ಸರ್ಕಾರದ ಗಮನ ಸೆಳೆದು ಬಸವಕಲ್ಯಾಣದಲ್ಲಿ ವಚನ ಸಾಹಿತ್ಯ ವಿಶ್ವವಿದ್ಯಾಲಯ ಸ್ಥಾಪಿಸಲು ಸೂಕ್ತ ಕ್ರಮ ಜರುಗಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ಪ್ರಮುಖರಾದ ಶಶಿಧರ ಕೋಸಂಬೆ, ಜಯರಾಜ ಖಂಡ್ರೆ, ಸಂಗಮೇಶ ಹುಣಜೆ ಮದಕಟ್ಟಿ, ರಾಜಕುಮಾರ ಬಿರಾದಾರ, ಸಂಜೀವಕುಮಾರ ಜುಮ್ಮಾ, ನವಲಿಂಗ ಪಾಟೀಲ್ ಇದ್ದರು.