ಕನ್ನಡಪ್ರಭ ವಾರ್ತೆ ಹಾಸನ
ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ ಅವರು ಮುಸ್ಲಿಂ ಸಮಾಜವನ್ನು ಅವಹೇಳನ ಮಾಡಿದ್ದು, ಕೂಡಲೇ ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿಸಲು ಹಾಗೂ ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕೆಂದು ಆಗ್ರಹಿಸಿ ಬುಧವಾರ ಜಿಲ್ಲಾ ಅಲ್ಪಸಂಖ್ಯಾತರ ಹಿತರಕ್ಷಣಾ ವೇದಿಕೆಯಿಂದ ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ ಅವರಿಗೆ ಮನವಿ ಸಲ್ಲಿಸಲಾಯಿತು.ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಮುಸ್ಲಿಂ ಧಾರ್ಮಿಕ ಆಸ್ತಿ ಹಿತರಕ್ಷಣಾ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಅಮೀರ್ ಅಹಮದ್ ಮಾಧ್ಯಮದೊಂದಿಗೆ ಮಾತನಾಡಿ, ಶಾಸಕ ರಮೇಶ್ ಬಂಡಿಸಿದ್ದೇಗೌಡರವರು ಸಾರ್ವಜನಿಕವಾಗಿ ಬಹಿರಂಗವಾಗಿ ಮುಸಲ್ಮಾನ್ ಸಮಾಜದವರಿಗೆ ಬಗರ್ಹುಕುಂ ಯೋಜನೆಯಡಿ ಕೆಲವು ಮುಸ್ಲಿಂ ಸಮಾಜದವರು ಸಂಬಂಧಪಟ್ಟವರ ಇಲಾಖೆ ಅಧಿಕಾರಿಗಳಲ್ಲಿ ದಾಖಲೆ ಮಾಡಿಕೊಡಲು ಅರ್ಜಿ ಸಲ್ಲಿಸದನ್ನು ಅಧಿಕಾರಿಗಳಿಗೆ ಪ್ರಶ್ನೆ ಮಾಡಿದ್ದಾರೆ. ಶಾಸಕರು ಬಹಿರಂಗವಾಗಿ "ಸಾಬರಿಗೆ ಬಗರ್ಹುಕುಂ ಸರ್ಕಾರಿ ಜಮೀನಿಗೆ ಸಂಬಂಧಿಸಿ ಯಾರಾದರೂ ದಾಖಲೆ ಮಾಡಿಕೊಟ್ಟರೆ ಅಂತಹವರನ್ನು ನೇಣಿಗೆ ಹಾಕುತ್ತೇನೆಂದು " ಸಂವಿಧಾನ ವಿರೋಧಿ ಹಾಗೂ ಅಲ್ಪಸಂಖ್ಯಾತರ ವಿರೋಧಿ ಹೇಳಿಕೆಯಾಗಿದೆ.
ಇದು ಕೇವಲ ಹೇಳಿಕೆಯಲ್ಲಿ ಭಾರತದ ಸಂವಿಧಾನತ್ಮಕ ಮೌಲ್ಯಗಳ ಧರ್ಮನಿರಪೇಕ್ಷತೆಯ ವಿರುದ್ಧ ನೇರ ದಾಳಿಯಾಗಿದೆ ಎಂದು ದೂರಿದರು. ಇದನ್ನು ರಾಜ್ಯಾದ್ಯಂತ ಮುಸ್ಲಿಂ ಸಮುದಾಯ ತೀವ್ರವಾಗಿ ಖಂಡಿಸುತ್ತದೆ. ಶಾಸಕಾಂಗದ ಸ್ಥಾನದಲ್ಲಿರುವ ಶಾಸಕರೊಬ್ಬರು ದೇಶದ ಎಲ್ಲಾ ಧಾರ್ಮಿಕ ಭಾಷಾ ಮತ್ತು ಪ್ರಾದೇಶಿಕ ಅಥವಾ ಜಾತಿ ಪಂಗಡಗಳ ಭೇದ ಭಾವದಿಂದ ಅತೀತವಾಗಿ ಭಾರತದ ಎಲ್ಲಾ ಜನತೆಯಲ್ಲಿ ಸಾಮರಸ್ಯವನ್ನು ಮತ್ತು ಸಮಾನ ಭ್ರಾತೃತ್ವವನ್ನು ಬೆಳೆಸುವ ಬದಲು, ಸಾಮರಸ್ಯ ಹದಗೆಡಿಸುವ ಹಾಗೂ ಸಮಾಜದಲ್ಲಿ ಅಶಾಂತಿ ಸೃಷ್ಟಿಸು ವ ಅವಾಚ್ಯ ಪದಗಳನ್ನು ಪ್ರಯೋಗ ಮಾಡಿ ಅಧಿಕಾರಿ ವೃಂದದವರಲ್ಲಿ ಪ್ರಚೋದನೆಯನ್ನು ಹುಟ್ಟುಹಾಕುವುದರೊಂದಿಗೆ ಸಮುದಾಯದ ಸ್ವಾಭಿಮಾನಕ್ಕೆ ಧಕ್ಕೆ ತಂದಿರುವ ಹಾಗೂ ಈ ದೇಶದ ಕಟ್ಟಕಡೆಯ ಪ್ರಜೆಯೂ ಸಹ ಈ ದೇಶದ ಆಸ್ತಿ ಎಂದು ಪರಿಗಣಿಸದಿರುವುದರ ವಿರುದ್ಧ ಖಂಡಿಸಿ, ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತಿಗಳು ಹಾಗೂ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರು ಕೊಡಲೆ ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕರಾದ ರಮೇಶ್ ಬಂಡಿಸಿದ್ದೇಗೌಡರನ್ನು ಪಕ್ಷದಿಂದ ಉಚ್ಚಾಟಿಸಿಬೇಕು ಎಂದು ಒತ್ತಾಯಿಸಿ ಕೂಡಲೇ ಶಾಸಕ ಸ್ಥಾನದಿಂದ ಅನರ್ಹ ಗೊಳಿಸಬೇಕೆಂದು ಈ ಮೂಲಕ ತಮ್ಮಲ್ಲಿ ಮನವಿ ಮಾಡುತ್ತಿದ್ದೇವೆ ಎಂದರು. ನಮ್ಮ ಈ ಮನವಿಯನ್ನು ಗಂಭೀರವಾಗಿ ಪರಿಗಣಿಸದೇ ಇದ್ದಲ್ಲಿ ರಾಜ್ಯಾದ್ಯಂತ ಪ್ರಜಾಪ್ರಭುತ್ವದಲ್ಲಿ ಪ್ರಜೆಯೇ ಮಾಲೀಕ ಎಂಬ ಧ್ಯೇಯೋದ್ದೇಶದ ಅಡಿಯಲ್ಲಿ ಪ್ರಜಾಸತ್ತಾತ್ಮಕವಾಗಿ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಕೆಯನ್ನು ನೀಡಿದರು.ಇದೇ ವೇಳೆ ಜಿಲ್ಲಾ ಅಲ್ಪಸಂಖ್ಯಾತರ ಹಿತರಕ್ಷಣಾ ವೇದಿಕೆಯ ಅಕ್ಮಲ್ ಜಾವಿದ್, ಚಾಂದ್ ಪಾಷಾ, ವಜಾದ್, ಯೂನಸ್ ಪಾಷಾ ಇತರರು ಉಪಸ್ಥಿತರಿದ್ದರು.