ಕುಷ್ಟಗಿ: ಶಿಕ್ಷಕರ ನೇಮಕಾತಿಗೆ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸುತ್ತಿರುವ ತಾಲೂಕಿನ ಉದ್ಯೋಗಾಕಾಂಕ್ಷಿಗಳು ಜಾತಿ ಮತ್ತು ಆದಾಯ ಪ್ರಮಾಣಪತ್ರ ವಿತರಣಾ ತಂತ್ರಾಂಶದಲ್ಲಿನ ತಾಂತ್ರಿಕ ದೋಷ ಸರಿಪಡಿಸಿ, ಸರಿಯಾದ ಪ್ರಮಾಣಪತ್ರ ವಿತರಿಸುವಂತೆ ಸೋಮವಾರ ತಹಸೀಲ್ದಾರ್ ಅಶೋಕ ಶಿಗ್ಗಾಂವಿ ಅವರಿಗೆ ಮನವಿ ಸಲ್ಲಿಸಿದರು.
ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣಪತ್ರದ ಉದ್ದೇಶಕ್ಕೂ ಮಹತ್ವವಿದೆ. ‘ವಿದ್ಯಾಭ್ಯಾಸ’ ಉದ್ದೇಶದ ಪ್ರಮಾಣಪತ್ರವನ್ನು ನೇಮಕಾತಿಗೆ ಪರಿಗಣಿಸದಿರುವ ಸಾಧ್ಯತೆ ಇರುವುದರಿಂದ ಅಭ್ಯರ್ಥಿಗಳು ಆತಂಕಗೊಂಡಿದ್ದಾರೆ. ತಂತ್ರಾಂಶದ ದೋಷದಿಂದಾಗಿ ತಮ್ಮ ತಪ್ಪಿಲ್ಲದಿದ್ದರೂ ನೇಮಕಾತಿ ಅರ್ಜಿ ತಿರಸ್ಕೃತವಾಗಬಹುದು ಎಂಬ ಭೀತಿ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಕೆಲವು ಅಭ್ಯರ್ಥಿಗಳು ತಮ್ಮ ಹಳೆಯ ಪ್ರಮಾಣಪತ್ರಗಳನ್ನು ರದ್ದುಪಡಿಸಿ, ಶಿಕ್ಷಕರ ನೇಮಕಾತಿಗೆ ಅಗತ್ಯವಿರುವ ‘ನೌಕರಿ’ ಉದ್ದೇಶದ ಪ್ರಮಾಣಪತ್ರಕ್ಕಾಗಿ ಹೊಸದಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಹೊಸದಾಗಿ ಅರ್ಜಿ ಸಲ್ಲಿಸಿದ ನಂತರವೂ ಪ್ರಮಾಣಪತ್ರದಲ್ಲಿ ‘ವಿದ್ಯಾಭ್ಯಾಸ’ ಎಂದೇ ನಮೂದಾಗುತ್ತಿರುವುದರಿಂದ ಸಮಸ್ಯೆ ಮುಂದುವರಿದಿದೆ.ತಾಲೂಕಿನ ಗ್ರಾಮೀಣ ಭಾಗದ ಅನೇಕ ಯುವಕರು ಹಲವು ವರ್ಷಗಳಿಂದ ಶಿಕ್ಷಕರ ನೇಮಕಾತಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಪ್ರಮಾಣಪತ್ರದ ತಾಂತ್ರಿಕ ದೋಷದಿಂದ ಅರ್ಜಿ ಸಲ್ಲಿಸುವ ಅವಕಾಶವೇ ತಪ್ಪಿಹೋದರೆ ಅಭ್ಯರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗಲಿದೆ. ಆದ್ದರಿಂದ ಸಮಸ್ಯೆಯನ್ನು ತುರ್ತಾಗಿ ಬಗೆಹರಿಸಬೇಕು ಎಂದು ಮನವಿ ಮಾಡಿದರು.
ತಹಸೀಲ್ದಾರ್ ಅಶೋಕ ಶಿಗ್ಗಾಂವಿ ಮನವಿ ಸ್ವೀಕರಿಸಿದರು. ಶಿಕ್ಷಕರ ನೇಮಕಾತಿ ಆಕಾಂಕ್ಷಿಗಳಾದ ಛತ್ರಪ್ಪ ಮೇಗೂರು, ಸಂಗಪ್ಪ ಅಂಗಡಿ, ಶ್ರೀಕಾಂತ್ ಕಿರಗಿ, ಮಾನಪ್ಪ ಮದಲಗಟ್ಟಿ, ಮಲ್ಲೇಶ ನಿಡಗುಂದಿ, ಶ್ರೀಧರ ಚಳ್ಳಾರಿ, ರುದ್ರಗೌಡ ಬಿಜ್ಜಳ, ನಾಗರಾಜ ಬಂಡಿ ಉಪಸ್ಥಿತರಿದ್ದರು.