ರಾಣಿಬೆನ್ನೂರು ತಾಲೂಕನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸಲು ಆಗ್ರಹಿಸಿ ನಗರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಚಂದ್ರಶೇಖರ ಬಣ) ನೇತೃತ್ವದಲ್ಲಿ ರೈತರು ಸೋಮವಾರ ತಹಸೀಲ್ದಾರ್ ಆರ್.ಎಚ್. ಭಾಗವಾನ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ರಾಣಿಬೆನ್ನೂರು: ತಾಲೂಕನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸಲು ಆಗ್ರಹಿಸಿ ನಗರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಚಂದ್ರಶೇಖರ ಬಣ) ನೇತೃತ್ವದಲ್ಲಿ ರೈತರು ಸೋಮವಾರ ತಹಸೀಲ್ದಾರ್ ಆರ್.ಎಚ್. ಭಾಗವಾನ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಮಯದಲ್ಲಿ ತಾಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ ಪಾಟೀಲ ಮಾತನಾಡಿ, ತಾಲೂಕು ಮಲೆನಾಡಿನಿಂದ ಹೊರತಾದ ಬಯಲು ಪ್ರದೇಶವಾಗಿದ್ದು, ಸಹಜವಾಗಿ ಇಲ್ಲಿ ಮಳೆ ಪ್ರಮಾಣ ಕಡಿಮೆ. ಅದರಲ್ಲಿಯೂ ಎರೆ ಜಮೀನಿನ (ಕಪ್ಪು ಭೂಮಿ) ಬೆಳೆಗಳಂತೂ ಸಾಕಷ್ಟು ತೇವಾಂಶವಿಲ್ಲದೇ ಬಾಡುತ್ತಿವೆ. ಇಳುವರಿಯಂತೂ ಸಂಪೂರ್ಣ ನೆಲ ಕಚ್ಚಿದೆ. ತಾಲೂಕಿನಲ್ಲಿ ಮುಂಗಾರಿನಿಂದ ಬರಿ ತುಂತುರು ಮಳೆ ಆಗುತ್ತಿದೆ. ಮಳೆಯಿಂದ ಬೆಳೆ ಬೆಳೆದಿದ್ದರೂ ಇಳುವರಿ ಸಂಪೂರ್ಣ ಕುಸಿಯುವ ಸಾಧ್ಯತೆ ಇದೆ. ತಡವಾಗಿ ಬಿತ್ತನೆ ಮಾಡಿದ ರೈತರ ಹೊಲಗಳಿಗಂತೂ ಸದ್ಯಕ್ಕೆ ದೊಡ್ಡ ಮಳೆಯ ಅವಶ್ಯಕತೆಯಿದೆ. ಆದರೆ ಕಳೆದ ಒಂದು ವಾರದಿಂದ ಮಳೆ ಪ್ರಮಾಣ ಕಡಿಮೆಯಾಗುತ್ತಿದ್ದು ರೈತರನ್ನು ಚಿಂತೆಗೀಡು ಮಾಡಿದೆ. ಕಳೆದೆರಡು ವರ್ಷಗಳಿಂದ ಈ ಭಾಗದಲ್ಲಿ ದೊಡ್ಬಮಳೆ ಬಿದ್ದಿಲ್ಲ. ಕೆರೆಕಟ್ಟೆ ತುಂಬಿ ಹಳ್ಳಕೊಳ್ಳ ತುಂಬಿ ಹರಿದಿಲ್ಲ.ಇದೇ ಸ್ಥಿತಿ ಮುಂದುವರೆದರೆ, ಅಂತರ್ಜಲ ಮಟ್ಟ ಕುಸಿದು ಕುಡಿಯುವ ನೀರಿಗೂ ಅಭಾವ ಸೃಷ್ಪಿಯಾಗುವ ಸಾಧ್ಯತೆ ಇದೆ. ಆದ್ದರಿಂದ ಸರ್ಕಾರ ಕೂಡಲೇ ತಾಲೂಕನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದರು.
ಸಂತೋಷ ಅಣಜಿ, ಮಾಲತೇಶ ಪಾಟೀಲ, ಗಂಗಾಧರ ಪಶುಪತಿಹಾಳ, ಭರತ ಪಿ, ಬಸವರಾಜ ಬನ್ನಿಮಟ್ಟಿ, ಚನಬಸಪ್ಪ ನಾಡಾರ, ಚನ್ನಬಸಪ್ಪ ನಾಡಾರ, ಸಂಜೀವ ಪಾಟೀಲ, ಶಿವರಾಜ ನೆಗಳೂರು, ಸೋಮನಗೌಡ ಪಾಟೀಲ, ನಾಗರಾಜ ಕೆರೆಯಣ್ಣನವರ ಸೇರಿದಂತೆ ಕೂನಬೇವು, ಯಕಲಾಸಪುರ, ರಾಹುತನಕಟ್ಟಿ, ಪತ್ತೇಪುರ, ಹನುಮಾಪುರ, ಹೆಡಿಯಾಲ, ಜೋಯಿಸರಹರಳಹಳ್ಳಿ, ಯತ್ನಳ್ಳಿ ಸೇರಿದಂತೆ ತಾಲೂಕಿನ ಹಲವು ಗ್ರಾಮಗಳ ರೈತರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.