-ಪ್ರಮುಖ ರೈಲುಗಳು ನಿಲ್ಲದಿರುವುದು ಜಿಲ್ಲೆಗೆ ಘೋರ ಅನ್ಯಾಯ: ಉಮೇಶ್ ಕೆ. ಮುದ್ನಾಳ ಆರೋಪ
ಕನ್ನಡಪ್ರಭ ವಾರ್ತೆ ಯಾದಗಿರಿ
ಕರ್ನಾಟಕ ಭಾಗದ ಪ್ರಮುಖ ರೈಲು ನಿಲ್ದಾಣಗಳ ಪೈಕಿ ಅಧಿಕ ಆದಾಯ ಕೊಡುವ ಯಾದಗಿರಿ ಜಿಲ್ಲೆಯಲ್ಲಿ ಪ್ರಮುಖ ರೈಲುಗಳು ನಿಲ್ಲದಿರುವುದು ಜಿಲ್ಲೆಗೆ ಘೋರ ಅನ್ಯಾಯವಾಗಿದೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ್ ಕೆ. ಮುದ್ನಾಳ ಆರೋಪಿಸಿದ್ದಾರೆ.ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸ್ಥಗಿತಗೊಳಿಸಲಾಗಿರುವ ಕಲಬುರಗಿ-ಗುಂತಕಲ್, ಬಿಜಾಪುರ- ರಾಯಚೂರು ಮಾರ್ಗದ ಪ್ಯಾಸೆಂಜರ್ ರೈಲು ಸಂಚಾರವನ್ನು ಆರಂಭಿಸಬೇಕು. ಇದರಿಂದಾಗಿ ಬಡವರು, ಮಧ್ಯಮ ವರ್ಗದ ಸಾವಿರಾರು ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ ಎಂದರು.
ರೈಲ್ವೆ ಇಲಾಖೆಗೆ ಅಧಿಕ ಆದಾಯ ಕೊಡುವ ಮೂಲಕ ಹೆಸರಾಗಿರುವ ಯಾದಗಿರಿ ಜಿಲ್ಲೆಯಲ್ಲಿ ರಾಜಕೋಟ್ ಎಕ್ಸಪ್ರೆಸ್, ಸೊಲ್ಲಾಪುರ ಗುಂತಕಲ್, ಗೋರಖ್ ಪುರ ಎಕ್ಸಪ್ರೆಸ್ , ರಾಜಧಾನಿ ಎಕ್ಸಪ್ರೆಸ್, ಅಮೀದಾಬಾದ್ ಸುಪರ್ ಫಾಸ್ಟ್, ಸಾಯಿನಗರ-ಶಿರಡಿ ಸುಪರ್ ಫಾಸ್ಟ್, ಸೊಲ್ಲಾಪುರ ಗುಂತಕಲ್ ಸೇರಿದಂತೆ ಇನ್ನಿತರ ರೈಲು ನಿಲುಗಡೆಗೆ ಅವಕಾಶ ನೀಡಬೇಕು ಹಾಗೂ ಯಾದಗಿರಿ ರೈಲ್ವೆ ನಿಲ್ದಾಣಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.ಈಗಾಗಲೇ ಜಿಲ್ಲಾ ಪ್ರವಾಸದಲ್ಲಿರುವ ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರು ಜಿಲ್ಲೆಯ ರೈಲ್ವೆ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಬಗೆಹರಿಸುವ ಕೆಲಸ ಮಾಡಬೇಕು. ಸಚಿವರ ಭೇಟಿ ಕಟಾಚಾರಕ್ಕೆ ಸೀಮಿತವಾಗಬಾರದು ಎಂದರು.
ಬಾಬು ಖಾನ್, ಜಮಾಲ್ ಬಿಳ್ಹಾರ್, ಶರಣು ನಾರಾಯಣ್ ಪೇಟ್, ಹಣಮಂತ ಅರಕೇರಾ , ಪ್ರವೀಣ್, ಜಿ. ವೆಂಕಟೇಶ್, ನಾಗಪ್ಪ ಪೋತುಲ್ ಸೇರಿದಂತೆ ಇತರರಿದ್ದರು.------