ಆದರ್ಶ ವಿದ್ಯಾಲಯಕ್ಕೆ ಸಾರಿಗೆ ವ್ಯವಸ್ಥೆ ಕಲ್ಪಿಸಲು ಒತ್ತಾಯ

KannadaprabhaNewsNetwork |  
Published : Jun 16, 2026, 02:30 AM IST
ಹರಪನಹಳ್ಳಿಯಲ್ಲಿ ಸರ್ಕಾರಿ ಆದರ್ಶ ವಿದ್ಯಾಲಯಕ್ಕೆ ಅಗತ್ಯ ಬಸ್ಸುಗಳನ್ನು ಬಿಡಬೇಕು ಎಂದು ಶಾಲಾಭಿವೃದ್ದಿ ಸಮಿತಿಯವರು, ಪೋಷಕರು, ಮುಖ್ಯ ಶಿಕ್ಷಕರು ಡಿಪೊ ವ್ಯವಸ್ಥಾಪಕರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. | Kannada Prabha

ಸಾರಾಂಶ

ಈ ಸರ್ಕಾರಿ ಶಾಲೆಯಲ್ಲಿ 6ರಿಂದ 10ನೇ ತರಗತಿವರೆಗೆ ಇದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 555 ವಿದ್ಯಾರ್ಥಿಗಳು ದಾಖಲಾಗಿದ್ದಾರೆ.

ಹರಪನಹಳ್ಳಿ: ನಗರದ ಹೊರವಲಯದಲ್ಲಿರುವ ಸರ್ಕಾರಿ ಆದರ್ಶ ವಿದ್ಯಾಲಯಕ್ಕೆ ಅಗತ್ಯ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಅಲ್ಲಿಯ ಶಾಲಾಭಿವೃದ್ಧಿ ಸಮಿತಿ ಹಾಗೂ ಪೋಷಕರು ಸ್ಥಳೀಯ ಡಿಪೋ ವ್ಯವಸ್ಥಾಪಕರಲ್ಲಿ ಮನವಿ ಮಾಡಿದ್ದಾರೆ.

ಈ ಸರ್ಕಾರಿ ಶಾಲೆಯಲ್ಲಿ 6ರಿಂದ 10ನೇ ತರಗತಿವರೆಗೆ ಇದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 555 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಈ ಎಲ್ಲ ವಿದ್ಯಾರ್ಥಿಗಳು ಪ್ರತಿದಿನ ಬಸ್ಸಿನಲ್ಲಿ ಶಾಲೆಗೆ ಬರುತ್ತಿದ್ದಾರೆ. ಈ ಮಕ್ಕಳಿಗೆ ಆಗುತ್ತಿರುವ ತೊಂದರೆಯಿಂದ ಇಲ್ಲಿಯ ಸಿವಿಲ್‌ ನ್ಯಾಯಾಧೀಶರು ಪ್ರತಿದಿನ 3 ಬಸ್‌ಗಳನ್ನು ಬಿಡಲು ಆದೇಶಿಸಿದ್ದರು. ಆ ಪ್ರಕಾರ ಹಿಂದಿನ ವರ್ಷ ಮೂರು ಬಸ್‌ಗಳು ಸಂಜೆ ಬರುತ್ತಿದ್ದವು. ಆದರೆ ಈಗ ಕೇವಲ ಒಂದು ಬಸ್‌ನ್ನು ಕಳಿಸಲಾಗುವುದು ಎಂದು ಡಿಪೋ ಮ್ಯಾನೇಜರ್‌ ತಿಳಿಸಿದ್ದಾರೆ.

555 ಮಕ್ಕಳು ವ್ಯಾಸಂಗ ಮಾಡುತ್ತಿರುವ ಶಾಲೆಗೆ ಕೇವಲ 1 ಬಸ್‌ ಸಾಕಾಗುವುದಿಲ್ಲ. ನ್ಯಾಯಾಧೀಶರ ಆದೇಶದಂತೆ ಸಂಜೆ 3 ಬಸ್‌ಗಳನ್ನು ಕಳಿಸಿ ಕೊಡಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

ನೀಲಗುಂದ, ಇಟ್ಟಿಗುಡಿ, ಕುಂಚೂರು, ಅರಸನಾಳು ಮಾರ್ಗವಾಗಿ ಹಲುವಾಗಲಿಗೆ ಸಂಚರಿಸುವ ಬಸ್‌ ನಮ್ಮ ಶಾಲೆ ಬಳಿ ಸಂಜೆ 4 ಗಂಟೆಗೆ ಹಾದು ಹೋಗುತ್ತದೆ. ಆದರೆ ಶಾಲೆ ಬಿಡುವುದು 4.20ಕ್ಕೆ. ಈ ಬಸ್ಸಿನ ಸಮಯವನ್ನು ಬದಲಾವಣೆ ಮಾಡಬೇಕು ಎಂದು ಮನವಿ ಮಾಡಿದರು.

ಹರಪನಹಳ್ಳಿಯಿಂದ ಹಡಗಲಿಗೆ ಹೋಗುವ ಬಹುತೇಕ ಬಸ್‌ಗಳು ಕೂಲಹಳ್ಳಿ ಕ್ರಾಸ್, ಬಂಡ್ರಿ, ಎರಡೆತ್ತಿನಹಳ್ಳಿ, ಕಾನಹಳ್ಳಿ ಗ್ರಾಮಗಳಿಗೆ ನಿಲುಗಡೆ ಮಾಡುವುದಿಲ್ಲ. ಈ ಮಾರ್ಗದಲ್ಲಿ 30ರಿಂದ 35 ವಿದ್ಯಾರ್ಥಿಗಳು ಶಾಲೆಗೆ ಬರುತ್ತಿದ್ದಾರೆ. ಮಕ್ಕಳ ಶೈಕ್ಷಣಿಕ ಅನುಕೂಲಕ್ಕಾಗಿ ಮೇಲೆ ತಿಳಿಸಿದ ಗ್ರಾಮಗಳಲ್ಲಿ ಬಹುತೇಕ ಬಸ್‌ಗಳ ನಿಲುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸಿದ್ದನಗೌಡ, ಮುಖ್ಯ ಶಿಕ್ಷಕ ಎಚ್.ಕೆ. ಚಂದ್ರಪ್ಪ ಸೇರಿದಂತೆ ಎಸ್‌ಡಿಎಂಸಿ ಸದಸ್ಯರು, ಪೋಷಕರು ಇಲ್ಲಿಯ ಸಾರಿಗೆ ಡಿಪೋ ವ್ಯವಸ್ಥಾಪಕರಲ್ಲಿ ಮನವಿ ಸಲ್ಲಿಸಿದ್ದಾರೆ.

ಹರಪನಹಳ್ಳಿಯಲ್ಲಿ ಸರ್ಕಾರಿ ಆದರ್ಶ ವಿದ್ಯಾಲಯಕ್ಕೆ ಅಗತ್ಯ ಬಸ್‌ ಬಿಡಬೇಕು ಎಂದು ಶಾಲಾಭಿವೃದ್ಧಿ ಸಮಿತಿಯವರು, ಪೋಷಕರು, ಮುಖ್ಯ ಶಿಕ್ಷಕರು ಡಿಪೋ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇನ್ನು ಮನುಷ್ಯರ ಸಂಖ್ಯೆಯಷ್ಟೇ ಎಐ ನೌಕರರ ನೇಮಕ
2 ವರ್ಷ ಅಲ್ಲ, 2028ರ ಬಳಿಕವೂ ಗ್ಯಾರಂಟಿ ಮುಂದುವರಿಕೆ: ಸಿದ್ದು