ನವಲಿ: ನವಲಿ ಹೋಬಳಿಯ ಬುನ್ನಟ್ಟಿ ಗ್ರಾಮದಲ್ಲಿ 2026-27ನೇ ಸಾಲಿನ ಮುಂಗಾರು ಹಂಗಾಮಿನ ಬೀಜೋಪಚಾರ ಆಂದೋಲನಾ ಮತ್ತು ಸಮತೋಲಿತ ರಸಗೊಬ್ಬರಗಳ ಬಳಕೆ ಕುರಿತು ರೈತರಿಗೆ ತರಬೇತಿ ಕೈಗೊಳ್ಳಲಾಯಿತು. ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಬೀಜಗಳ ಉಪಚಾರ, ಶೀಲಿಂಧ್ರನಾಶಕ, ಜೈವಿಕಗೊಬ್ಬರ ಇವುಗಳನ್ನು ಬಳಸುವ ಕುರಿತು ರೈತರೊಂದಿಗೆ ಚರ್ಚಿಸಲಾಯಿತು. ರಾಸಾಯನಿಕ ರಸಗೊಬ್ಬರಗಳಾದ ಯೂರಿಯಾ, ಡಿಎಪಿ ಬಳಕೆಯನ್ನು ಮಿತಗೊಳಿಸುವ ವಿಧಾನಗಳನ್ನು ರೈತರಿಗೆ ತಿಳಿಸಲಾಯಿತು. ಹರಳು ಡಿಎಪಿ ಬದಲಾಗಿ ನ್ಯಾನೋ ಡಿಎಪಿಯನ್ನು ಬೀಜ ಬಿತ್ತನೆ ಸಮಯದಲ್ಲಿ ಹೇಗೆ ಬಳಸಬೇಕು ಎಂದು ಕೃಷಿ ಅಧಿಕಾರಿಗಳು ಹೇಳಿದರು.
ಕೃಷಿ ಅಧಿಕಾರಿ ನಾಗರಾಜ ಕೊಟಗಿ ಮಾತನಾಡಿ, ಬಿತ್ತನೆ ಸಮಯದಲ್ಲಿ ಹರಳು ಡಿಎಪಿ ಬದಲಾಗಿ ನ್ಯಾನೋ ಡಿಎಪಿ ಬಳಸಿದಲ್ಲಿ ರೈತರು ಎಕರೆಗೆ ₹600ರಿಂದ ₹700 ಉಳಿಸಬಹುದು. ಹರಳು ಯೂರಿಯಾ ಬದಲಾಗಿ ನ್ಯಾನೋ ಯೂರಿಯಾ ಬಳಸಬೇಕು. ನ್ಯಾನೋ ಯೂರಿಯಾ ಹರಳು ಯೂರಿಯಾಕ್ಕಿಂತ ಪರಿಣಾಮಕಾರಿಯಾಗಿದ್ದು, ಇದನ್ನು ಬಳಸಿದ್ದಲ್ಲಿ ರೈತರ ಆರ್ಥಿಕತೆ ಸುಧಾರಿಸುವುದಲ್ಲದೆ, ಮಣ್ಣಿನ ಆರೋಗ್ಯ ಮತ್ತು ಅದರ ಸತ್ವಗುಣಗಳನ್ನು ಸಂರಕ್ಷಣೆ ಮಾಡಬಹುದು. ಪರೋಕ್ಷವಾಗಿ ಪರಿಸರ ಮಾಲಿನ್ಯ ತಡೆಗಟ್ಟಿದಂತಾಗುತ್ತದೆ, ನೀರು ಮತ್ತು ಮಣ್ಣಿನ ಸಂರಕ್ಷಣೆ ಮಾಡಿದಂತಾಗುತ್ತದೆ ಎಂದು ಹೇಳಿದರು.
ರೈತ ತರಬೇತಿ ಕಾರ್ಯಕ್ರಮದಲ್ಲಿ ರೈತ ಸಂಪರ್ಕ ಕೇಂದ್ರದ ಸಿಬ್ಬಂದಿ ಪ್ರದೀಪಕುಮಾರ, ಗಿರೀಶಕುಮಾರ, ಯಂಕಪ್ಪ ಹಾಗೂ ಬುನ್ನಟ್ಟಿ ಗ್ರಾಮದ ರೈತ ಮುಖಂಡರಾದ ಮಲ್ಲಪ್ಪ ಕನಕಗಿರಿ, ಪಂಪನಗೌಡ, ಮಲ್ಲೇಶಪ್ಪ, ಮಾಂತಪ್ಪ ಇದ್ಲಾಪುರ, ಬಾಲನಗೌಡ, ದೇವೇಂದ್ರಗೌಡ, ನಾಗಪ್ಪ, ಸಿದ್ದನಗೌಡ, ಹನುಮನಗೌಡ, ಭೀಮನಗೌಡ, ಚನ್ನಪ್ಪ, ಆದೆಪ್ಪ, ದೇವೇಂದ್ರಪ್ಪ ಮತ್ತು ರಮೇಶ ಇದ್ದರು.