ಅನುಮತಿ ಪಡೆಯದೆ ಅಕ್ರಮವಾಗಿ ಅಳವಡಿಕೆ । ಜನಜಾನುವಾರುಗಳ ಪ್ರಾಣದ ಜೊತೆಗೆ ಚೆಲ್ಲಾಟ
ಕನ್ನಡಪ್ರಭ ವಾರ್ತೆ ಕುಷ್ಟಗಿತಾಲೂಕಿನ ಹನುಮಸಾಗರ ಹೋಬಳಿ ವ್ಯಾಪ್ತಿಯ ಬೀಳಗಿ ಕೆರೆಯಲ್ಲಿ ಅಕ್ರಮವಾಗಿ ಹಾಕಿರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ಕಂಪನಿ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಈ ವಿದ್ಯುತ್ ಕಂಬಗಳ ಮೂಲಕ ಹನುಮಸಾಗರದ ವಿದ್ಯುತ್ ಸರಬರಾಜು ಕೇಂದ್ರಕ್ಕೆ ಪವನ ವಿದ್ಯುತ್ನ್ನು ಸರಬರಾಜು ಮಾಡಲು ಅಳವಡಿಸಿದ್ದು, ಇವುಗಳನ್ನು ಪ್ರಾಧಿಕಾರಗಳಲ್ಲಿ ಅನುಮತಿ ಪಡೆದುಕೊಳ್ಳದೆ ಅಕ್ರಮವಾಗಿ ಅಳವಡಿಸಿದ್ದಾರೆ.ಕೆರೆ ತುಂಬಿಸುವ ಯೋಜನೆಯಲ್ಲಿ ಆಯ್ಕೆಯಾದ ತಾಲೂಕಿನ ಹನುಮಸಾಗರ ಹೋಬಳಿ ವ್ಯಾಪ್ತಿಯ ಬೀಳಗಿ ಗ್ರಾಮದ ಸರ್ವೆ ನಂಬರ್ 88ರಲ್ಲಿರುವ ಈ ಕೆರೆಯು 25 ಎಕರೆ 9 ಗುಂಟೆಯಲ್ಲಿರುವ ಕೆರೆಯಲ್ಲಿ ನೀರು ತುಂಬಿಸುವ ಕಾರ್ಯವೂ ನಡೆದಿದೆ.
ಈ ಕೆರೆಯಲ್ಲಿ ಸಂಬಂಧಪಟ್ಟ ಪ್ರಾಧಿಕಾರದಿಂದ ಅನುಮತಿ ಪಡೆಯದೆ ಅಕ್ರಮವಾಗಿ 33 ಕೆ.ವಿ.ಓ.ಎಚ್.ಟಿ. ಟ್ರಾನ್ಸಮೀಷನ್ ಲೈನ್ನನ್ನು ಸಂಪರ್ಕಿಸಲು ಸುಮಾರು 11 ಕಂಬ ಅಳವಡಿಸುವ ಮೂಲಕ ಜನಜಾನುವಾರುಗಳ ಪ್ರಾಣದ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆ ಎನ್ನುತ್ತಾರೆ ಗ್ರಾಮಸ್ಥರು.ಗ್ರಾಮದ ಸಾರ್ವಜನಿಕರು ಕೆರೆಯ ನೀರನ್ನು ಕುಡಿಯಲು ಬಳಸುತ್ತಾರೆ. ಜೊತೆಗೆ ಈ ಕೆರೆಯ ಕೆಲವು ಭಾಗದಲ್ಲಿ ಮೀನುಗಾರಿಕೆ ಮಾಡುತ್ತಾರೆ. ಒಂದು ವೇಳೆ ಕೆರೆಯಲ್ಲಿ ಹಾಕಲಾಗಿರುವ ವಿದ್ಯುತ್ ಕಂಬಗಳ ಮೂಲಕ ವಿದ್ಯುತ್ ಪಸರಿಸಿದರೆ ತೊಂದರೆಯಾಗುತ್ತದೆ. ಸಾರ್ವಜನಿಕರ ಪ್ರಾಣದ ಜೊತೆ ಚೆಲ್ಲಾಟ ಆಡುತ್ತಿರುವ ಕಂಪನಿ ಮೇಲೆ ಕ್ರಮ ಜರುಗಿಸಬೇಕು ಎಂದು ಒತ್ತಾಯ ಕೇಳಿ ಬಂದಿದೆ.
ದೂರು ಸಲ್ಲಿಸಿದರೂ ಪ್ರಯೋಜನವಿಲ್ಲ:ಕೆರೆಯಲ್ಲಿ ಹಾಕಲಾಗಿರುವ ವಿದ್ಯುತ್ ಕಂಬ ತೆರವುಗೊಳಿಸುವಂತೆ ಹಲವು ಸಲ ಮೌಖಿಕ ಹಾಗೂ ಲಿಖಿತವಾಗಿ ಅರ್ಜಿ ಸಲ್ಲಿಸಿದರೂ ವಿದ್ಯುತ್ ಕಂಬಗಳನ್ನು ತೆರವುಗೊಳಿಸಲು ಮುಂದಾಗುತ್ತಿಲ್ಲ ಎಂಬುದು ರೈತರ ಆರೋಪವಾಗಿದೆ.
ಕೆರೆ ಹತ್ತಿರ ಹೋಗಲು ಭಯ:ಕೆರೆಯಲ್ಲಿ ವಿದ್ಯುತ್ ಕಂಬ ಇರುವುದರಿಂದ ರೈತರು ಹಾಗೂ ಸಾರ್ವಜನಿಕರು ನೀರು ಬಳಸಲು ಸಹಿತ ಹಿಂದೇಟು ಹಾಕುವಂತಹ ಸ್ಥಿತಿ ನಿರ್ಮಾಣವಾಗಿದೆ.