ಸಮಾಜ ಪರಿವರ್ತನ ಸಂಘದಿಂದ ಜಿಲ್ಲಾಧಿಕಾರಿ ಸಿ.ಎನ್. ಮೀನಾ ನಾಗರಾಜ್ಗೆ ಮನವಿ
ಮಾಣಿಕ್ಯಧಾರಕ್ಕೆ ಸಾಗುವ ರಸ್ತೆಯು ತೀವ್ರ ಹದಗೆಟ್ಟಿದೆ, ಈ ರಸ್ತೆಯನ್ನು ಕೂಡಲೇ ದುರಸ್ತಿಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಸಮಾಜ ಪರಿವರ್ತನ ಸಂಘದ ಮುಖಂಡರು ಜಿಲ್ಲಾಧಿಕಾರಿ ಸಿ.ಎನ್. ಮೀನಾ ನಾಗರಾಜ್ ಅವರಿಗೆ ಒತ್ತಾಯಿಸಿದ್ದಾರೆ.
ಈ ಸಂಬಂಧ ಮಂಗಳವಾರ ಮನವಿ ಸಲ್ಲಿಸಿ ಮಾತನಾಡಿದ ಸಂಘದ ಅಧ್ಯಕ್ಷ ಆರ್. ಶ್ರೀನಿವಾಸ್, ಗಿರಿಪ್ರದೇಶದ ಮಾಣಿಕ್ಯಧಾರಕ್ಕೆ ಸಾಗುವ ರಸ್ತೆ ಬಹಳಷ್ಟು ಹದಗೆಟ್ಟ ಹಿನ್ನೆಲೆಯಲ್ಲಿ ಈಚೆಗೆ ಬಸ್ವೊಂದು ಉರುಳಿ ಓರ್ವ ಬಾಲಕ ಮೃತಪಟ್ಟಿದ್ದಾನೆ. ಸುಮಾರು 25 ಮಂದಿ ಗಾಯಾಳುಗಳಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ರಸ್ತೆಯನ್ನು ಅಚ್ಚುಕಟ್ಟುಗೊಳಿಸಿದರೆ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ ಎಂದರು.ಶ್ರೀ ಗುರುದತ್ತಾತ್ರೇಯಸ್ವಾಮಿ ಬಾಬಾಬುಡನ್ ದರ್ಗಾದಿಂದ ಮಾಣಿಕ್ಯಧಾರಕ್ಕೆ ಮೂರು ಕಿ.ಮೀ.ಗಳ ಅಂತರವಿದೆ. ಈ ಪೈಕಿ ಒಂದು ಕಿ.ಮೀ.ಗೆ ಮಾತ್ರ ಕಾಂಕ್ರೀಟೀಕರಣ ಮಾಡಿರುವುದಿಲ್ಲ. ಈ ಅಂತರ ದಲ್ಲಿ ತೀವ್ರ ತರದ ಗುಂಡಿಗಳಿದ್ದು ಈಚೆಗೆ ನಡೆದ ಬಸ್ ಅಪಘಾತಕ್ಕೆ ಈ ರಸ್ತೆಯೇ ಪ್ರಮುಖ ಕಾರಣವಾಗಿದೆ ಎಂದು ಹೇಳಿದರು.
ಸಂಘದ ಸಂಘಟನಾ ಕಾರ್ಯದರ್ಶಿ ಜಗದೀಶ್ ಕೋಟೆ ಮಾತನಾಡಿ, ಪ್ರವಾಸಿಗರನ್ನು ಭದ್ರತೆ ಇಲ್ಲದೇ ಕರೆದೊಯ್ಯುವ ಜೀಪ್ಗಳಿಗೆ ಕಡಿವಾಣ ಹಾಕುವ ಮೂಲಕ ಗುಣಮಟ್ಟದ ವಾಹನಗಳನ್ನು ಪ್ರವಾಸಿಗರು ಕೊಂಡೊಯ್ಯಲು ಕ್ರಮವಹಿಸಬೇಕು. ದರ್ಗಾದಿಂದ ಮಾಣಿಕ್ಯಧಾರದ ರಸ್ತೆಯ ಪಕ್ಕದಲ್ಲಿ ಪ್ರಪಾತಗಳಿದ್ದು ಕೂಡಲೇ ಇಲ್ಲಿ ಬ್ಯಾರಿಕೇಡ್ ಅಳವಡಿಸಬೇಕು ಎಂದರು.