ಕುಮಟಾ: ತಾಲೂಕಿನ ಕಲಭಾಗ ಪಂಚಾಯಿತಿ ವ್ಯಾಪ್ತಿಯ ಹಂತಿಮಠದ ಜನತಾ ಪ್ಲಾಟ್ನ ಮನೆಗಳಿಗೆ ಇ ಸ್ವತ್ತು ಸಮಸ್ಯೆಯಿಂದ ಕಟ್ಟಡಗಳು ಶಿಥಿಲವಾದರೂ ಕನಿಷ್ಠ ದುರಸ್ತಿಗೂ ಪಂಚಾಯಿತಿ ಅನುಮತಿ ಸಿಗುತ್ತಿಲ್ಲ. ಈ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿ ಸ್ಥಳೀಯ ನಿವಾಸಿಗಳು ಜಿಲ್ಲಾ ಅಂಗವಿಕಲರ ಮತ್ತು ಪಾಲಕರ ಒಕ್ಕೂಟದ ನೇತೃತ್ವದಲ್ಲಿ ''''ಪುಟ್ಟಪುಟ್ಟ ನಡೆ ಪಂಚಾಯಿತಿ ಕಡೆ'''' ಶೀರ್ಷಿಕೆಯಡಿ ಕಲಭಾಗ ಪಂಚಾಯಿತಿ ಕಾರ್ಯಾಲಯಕ್ಕೆ ಕಾಲ್ನಡಿಗೆಯಲ್ಲಿ ತೆರಳಿ ಮನವಿ ಸಲ್ಲಿಸಿದರು.
ಆದರೆ ಇ ಸ್ವತ್ತು ಆಗದಿರುವುದರಿಂದ ಪಂಚಾಯಿತಿಯಿಂದ ದುರಸ್ತಿ ಅಥವಾ ಮರುನಿರ್ಮಾಣಕ್ಕೆ ಅನುಮತಿ ಸಿಗುತ್ತಿಲ್ಲ. ಈ ಬಗ್ಗೆ ಹಲವು ಬಾರಿ ಗ್ರಾಮಲೆಕ್ಕಾಧಿಕಾರಿ, ತಹಸೀಲ್ದಾರ್, ಉಪವಿಭಾಗಾಧಿಕಾರಿಗೂ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಆರ್ಟಿಸಿ, ಪಿಟಿ ಸೆಟ್, ಪಟ್ಟಾ, ಮ್ಯುಟೇಷನ್ ಎಂಟ್ರಿ, ಮನೆ ಟ್ಯಾಕ್ಸ್ ಪಾವತಿಪ್ರತಿ, ವಿದ್ಯುತ್ ಬಿಲ್ ಎಲ್ಲ ಇದ್ದರೂ ತಹಸೀಲ್ದಾರರು ನೀಡುವ ಗ್ರಾಮಠಾಣಾ ನಕ್ಷೆಯ ದಾಖಲೆ ಇಲ್ಲದಿರುವುದರಿಂದ ಇಸ್ವತ್ತು ತಂತ್ರಾಂಶದಲ್ಲಿ ನೋಂದಣಿಯಾಗುತ್ತಿಲ್ಲ. ಪ್ಲಾಟ್ನ ಸರ್ವೆ ಮಾಡಿದ್ದರೂ ಅಧಿಕೃತ ಆದೇಶವಾಗಿಲ್ಲ.
ಇಲ್ಲಿ ವಾಸವಿರುವ ಕುಟುಂಬಗಳು ೫೦ ವರ್ಷವಾದರೂ ಸಮರ್ಪಕ ದಾಖಲೆಯಿಲ್ಲದೇ ಸಮಸ್ಯೆ ಎದುರಿಸುತ್ತಿದ್ದಾರೆ. ಆದ್ದರಿಂದ ಅಧಿಕಾರಿಗಳು ಈ ಬಗ್ಗೆ ಚರ್ಚಿಸಿ ಸೂಕ್ತ ನಿರ್ಣಯ ಕೈಗೊಂಡು ಹಂತಿಮಠ ಜನತಾ ಪ್ಲಾಟ್ ನಿವಾಸಿಗಳ ಬಹುಕಾಲದ ಸಮಸ್ಯೆ ಬಗೆಹರಿಸಬೇಕು ಎಂದು ಮನವಿಯಲ್ಲಿ ವಿನಂತಿಸಲಾಗಿದೆ.ಈ ವೇಳೆ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಜಿಲ್ಲಾಧ್ಯಕ್ಷ ಮತ್ತು ಜನತಾಪ್ಲಾಟ್ ನಿವಾಸಿ ಪ್ರವೀಣಕುಮಾರ ಶೆಟ್ಟಿ, ಪ್ರೇಮಾ ಆರ್. ಶೆಟ್ಟಿ, ಅರುಣ ಶೇಟ, ದಯಾನಂದ ನಾಯ್ಕ, ಈಶ್ವರ ನಾಯ್ಕ, ಜಾನಕಿ ನಾಯ್ಕ, ರಮಾನಂದ ಶೆಟ್ಟಿ, ತಿಮ್ಮಯ್ಯ ಪಟಗಾರ, ಪಾರ್ವತಿ ಗಾವಡಿ ಇತರರು ಇದ್ದರು.