ಶ್ರೀಕೆಂಚರಾಯ ಸ್ವಾಮಿ ದೇವಾಲಯಕ್ಕೆ ಸೇರಿದ 40 ಎಕರೆ ಜಾಗ ಉಳಿಸಲು ಆಗ್ರಹ

KannadaprabhaNewsNetwork | Published : Jun 5, 2025 2:10 AM
ಕಡೂರು, ಅಯ್ಯನಕೆರೆ ತಪ್ಪಲಿನಲ್ಲಿರುವ ಶ್ರೀಕೆಂಚರಾಯ ಸ್ವಾಮಿ ದೇವಾಲಯಕ್ಕೆ ಸೇರಿದ 40 ಎಕರೆ ಜಾಗವನ್ನು ಸರ್ವೇ ಮಾಡಿಸಿ ತಂತಿ ಬೇಲಿ ಹಾಕಿ ದೇವಾಲಯದ ಸುಪರ್ದಿಗೆ ವಹಿಸಿ ಎಂದು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಸದಸ್ಯ ಮಿಥುನ್ ಗೌಡ ಆಗ್ರಹಿಸಿದರು.

ಉಪ ತಹಸೀಲ್ದಾರ್ ಗೆ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಸದಸ್ಯ ಮಿಥುನ್ ಗೌಡ ಮನವಿ

ಕನ್ನಡಪ್ರಭ ವಾರ್ತೆ, ಕಡೂರು. ಅಯ್ಯನಕೆರೆ ತಪ್ಪಲಿನಲ್ಲಿರುವ ಶ್ರೀಕೆಂಚರಾಯ ಸ್ವಾಮಿ ದೇವಾಲಯಕ್ಕೆ ಸೇರಿದ 40 ಎಕರೆ ಜಾಗವನ್ನು ಸರ್ವೇ ಮಾಡಿಸಿ ತಂತಿ ಬೇಲಿ ಹಾಕಿ ದೇವಾಲಯದ ಸುಪರ್ದಿಗೆ ವಹಿಸಿ ಎಂದು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಸದಸ್ಯ ಮಿಥುನ್ ಗೌಡ ಆಗ್ರಹಿಸಿದರು. ಮಂಗಳವಾರ ತಾಲೂಕಿನ ಸಖರಾಯಪಟ್ಟಣದ ನಾಡಕಚೇರಿಯ ಉಪ ತಹಸೀಲ್ದಾರ್ ಲೋಕೇಶನಾಯ್ಕರಿಗೆ ದೇವಾಲಯದ ಜಮೀನು ಉಳಿಸಿಕೊಡುವಂತೆ ಮನವಿ ಸಲ್ಲಿಸಿ ಮಾತನಾಡಿದರು. ಈ ಹಿಂದೆ ಹಸ್ತಿನಾಪುರ ಸರ್ವೇ ನಂ. 1/1 ರಲ್ಲಿ 40 ಎಕರೆ ಜಮೀನನ್ನು ಜಿಲ್ಲಾಧಿಕಾರಿಗಳು ಮೀಸಲಿಟ್ಟಿರುತ್ತಾರೆ. ಅದರಲ್ಲಿ 2 ಎಕರೆ ಜಾಗವನ್ನು ಪ್ರಭಾವಿ ವ್ಯಕ್ತಿಗಳು ನಕಲಿ ದಾಖಲೆ ಸೃಷ್ಠಿಸಿ ಭೂ ಕಬಳಿಕೆ ಮಾಡಲು ಮುಂದಾಗಿರುವುದು ಸಾರ್ವಜನಿಕರಿಗೆ ತಿಳಿದಿದೆ. ಆದ್ದರಿಂದ ತಹಸೀಲ್ದಾರ್ ಮತ್ತು ಜಿಲ್ಲಾಧಿ ಕಾರಿಗಳು ಇತ್ತ ಕಡೆ ಗಮನಹರಿಸಿ ಜಾಗವನ್ನು ದೇವಾಲಯಕ್ಕೆ ಉಳಿಸಿಕೊಟ್ಟು ಸರ್ವೇ ಮಾಡಿಸಿ ತಂತಿ ಬೇಲಿ ಹಾಕಿಸಲು ಕ್ರಮ ಕೈಗೊಳ್ಳಬೇಕು ಎಂದರು.

ಭಜರಂಗದಳದ ಸಂಚಾಲಕ ಸಂಜಯ್ ಮಾತನಾಡಿ, ಸಖರಾಯಪಟ್ಟಣದಲ್ಲಿ ಇತ್ತೀಚಿನ ದಿನಗಳಲ್ಲಿ ಸರಕಾರಿ ಕಟ್ಟಡ ಗಳನ್ನು ನಿರ್ಮಿಸಲು ಜಾಗವೇ ಇಲ್ಲದಂತಾಗಿದೆ. ಪ್ರತೀ ಜನವರಿಯಲ್ಲಿ ಶ್ರೀ ಶಕುನ ರಂಗನಾಥಸ್ವಾಮಿ ಜಾತ್ರೆಗೆ ಸಾವಿರಾರು ಭಕ್ತರು ಪರ ಊರುಗಳಿಂದ ಬರುತ್ತಾರೆ. ಇಲ್ಲಿ ಪೂಜೆ ಮುಗಿಸಿ ಶ್ರೀಕೆಂಚರಾಯಸ್ವಾಮಿಗೆ ಭೇಟಿ ಕೊಡುತ್ತಾರೆ. ಅವರಿಗೆ ಅಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಲು ಈ ಜಾಗ ಸಾಕಾಗುವುದಿಲ್ಲ. ಅಂತಹುದರಲ್ಲಿ ಇರುವ ಜಾಗವನ್ನೇ ಕಡಿಮೆ ಮಾಡಿದರೆ ಹೇಗೆ? ಇದರ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನಹರಿಸಬೇಕು. ಇದಕ್ಕೆ ತಪ್ಪಿದಲ್ಲಿ ಹೋರಾಟ ಮಾಡುವುದು ಅನಿವಾರ್ಯ ಎಂದರು. ಇದೇ ಸಂದರ್ಭದಲ್ಲಿ ಗ್ರಾಪಂ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಗ್ರಾಮಸ್ಥರಾದ ನಂದೀಶ್, ವಿನಯ್, ಅಜಯ್, ಹೃತಿಕ್, ನಾಗಭೂಷಣ್, ಪುನೀತ್, ನಾಗರಾಜು, ಶಿವಮೂರ್ತಿ, ಬಿಜೆಪಿ ಮತ್ತು ಭಜರಂಗದಳದ ಪದಾಧಿಕಾರಿಗಳು ಇದ್ದರು.--

3ಕೆಕೆಡಿಯು3

ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ಮಂಗಳವಾರ ಭಜರಂಗದಳ ಹಾಗೂ ಬಿಜೆಪಿಯಿಂದ ಶ್ರೀಕೆಂಚರಾಯಸ್ವಾಮಿ ದೇವಾಲಯದ ಜಾಗ ಉಳಿಸುವಂತೆ ಉಪತಹಸೀಲ್ದಾರ್ ಗೆ ಮನವಿ ಸಲ್ಲಿಸಲಾಯಿತು.