ಖಾಸಗಿ ಜಮೀನಿನಲ್ಲಿರುವ ಸರ್ಕಾರಿ ಮರಗಳ ಸರ್ವೆ ಕಾರ್ಯ ಸ್ಥಗಿತಗೊಳಿಸಲು ಆಗ್ರಹ

KannadaprabhaNewsNetwork |  
Published : May 07, 2024, 01:08 AM IST
ಸುದ್ದಿಗೋಷ್ಠಿ | Kannada Prabha

ಸಾರಾಂಶ

ಅರಣ್ಯ ಇಲಾಖೆ ವಿರುದ್ಧ ಜಿಲ್ಲಾ ವ್ಯಾಪಿ ಬೃಹತ್‌ ಹೋರಾಟ ರೂಪಿಸಲಾಗುವುದು ಎಂದು ಕೊಡಗು ಜಿಲ್ಲಾ ಬಿಜೆಪಿ ಹೇಳಿದೆ. ಗೊಂದಲ ಸೃಷ್ಟಿಸಿರುವ ಆದೇಶ ಹಿಂಪಡೆಯಲು ಆಗ್ರಹಿಸಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಜಿಲ್ಲೆಯ ಖಾಸಗಿ ಜಮೀನಿನಲ್ಲಿರುವ ಸರ್ಕಾರಿ ಮರಗಳ ಸರ್ವೆ ಕಾರ್ಯವನ್ನು ತಕ್ಷಣ ಸ್ಥಗಿತಗೊಳಿಸದಿದ್ದಲ್ಲಿ ಬೆಳೆಗಾರರ ಬೆಂಬಲದೊಂದಿಗೆ ಅರಣ್ಯ ಇಲಾಖೆ ವಿರುದ್ಧ ಜಿಲ್ಲಾ ವ್ಯಾಪಿ ಬೃಹತ್ ಹೋರಾಟವನ್ನು ರೂಪಿಸಲಾಗುವುದು ಎಂದು ಕೊಡಗು ಬಿಜೆಪಿ ಎಚ್ಚರಿಕೆ ನೀಡಿದೆ.

ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ಅರಣ್ಯ ಅಧಿಕಾರಿಗಳು ಖಾಸಗಿ ಜಮೀನಿನಲ್ಲಿರುವ ಸರ್ಕಾರಿ ಮರಗಳ ಪಟ್ಟಿ ಮಾಡಿ ಕಂದಾಯ ಇಲಾಖೆಗೆ ವರದಿ ಸಲ್ಲಿಸುವ ಪ್ರಕ್ರಿಯೆಯಲ್ಲಿ ತೊಡಗಿದೆ. ಜಿಲ್ಲೆಯ ಬೆಳೆಗಾರರಲ್ಲಿ ಗೊಂದಲ ಸೃಷ್ಟಿಸಿರುವ ಆದೇಶವನ್ನು ಸರ್ಕಾರ ತಕ್ಷಣ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯ ಬೆಳೆಗಾರರು ಪರಿಸರಕ್ಕೆ ಪೂರಕವಾಗಿ ಮರಗಳನ್ನು ಸಂರಕ್ಷಿಸಿಕೊಂಡು ಬಂದಿದ್ದಾರೆ. ಯಾವುದೇ ದುರುದ್ದೇಶಕ್ಕೆ ಮರಗಳ ಹನನ ಮಾಡಿಲ್ಲ. ಕೊಡಗಿನ ಜನರ ಪರಿಸರ ಕಾಳಜಿಯಿಂದ ಅರಣ್ಯ ಪ್ರದೇಶ ಮತ್ತು ದೇವರಕಾಡುಗಳು ಸಂರಕ್ಷಿಸಲ್ಪಟ್ಟಿವೆ. ತೋಟ ಮಾಡುವಾಗಲೂ ಮರಗಳನ್ನು ಕಡಿಯುತ್ತಿಲ್ಲ, ಬದಲಿಗೆ ಹಸಿರನ್ನು ಕಾಪಾಡಿಕೊಂಡು

ಬರಲಾಗುತ್ತಿದೆ. ಪರಿಸ್ಥಿತಿ ಹೀಗಿರುವಾಗ ಸರ್ಕಾರ ಏಕಾಏಕಿ ಖಾಸಗಿ ಜಮೀನಿನಲ್ಲಿರುವ ಮರಗಳ ಸರ್ವೆ ಕಾರ್ಯಕ್ಕೆ ಆದೇಶ ಮಾಡುವ ಮೂಲಕ ಬೆಳೆಗಾರರಲ್ಲಿ ಆತಂಕವನ್ನು ಸೃಷ್ಟಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯ ಜನರಿಗೆ ಅರಣ್ಯ ಸಂಪತ್ತನ್ನು ಹೇಗೆ ಸಂರಕ್ಷಿಸಬೇಕು ಎನ್ನುವುದು ತಿಳಿದಿದೆ. ಸರ್ಕಾರ ಹೊಸ ಕಾನೂನನ್ನು ಸೃಷ್ಟಿ ಮಾಡುವ ಅಗತ್ಯವಿಲ್ಲ. ಜಿಲ್ಲೆಯಲ್ಲಿ ಭೂಮಾಫಿಯಗಳಿಂದ ಭೂಪರಿವರ್ತನೆ ಮತ್ತು ಪ್ರಕೃತಿ ನಾಶವಾಗುತ್ತಿದೆಯೇ ಹೊರತು ಬೆಳೆಗಾರರಿಂದ ಪರಿಸರಕ್ಕೆ ಯಾವುದೇ ರೀತಿಯಲ್ಲಿ ತೊಂದರೆಯಾಗಿಲ್ಲ. ಸಿಸಿಎಫ್ ಹಾಗೂ ಡಿಸಿಎಫ್ ಅವರನ್ನು ಭೇಟಿ ಮಾಡಿದ ನಾವು ಸರ್ಕಾರದ ಆದೇಶದ ಕುರಿತು ಸ್ಪಷ್ಟನೆ ಕೇಳಿದೆವು. ಈ ಸಂದರ್ಭ ಅಧಿಕಾರಿಗಳು ತೋಟಗಳಲ್ಲಿರುವ ಸರ್ಕಾರಿ ಮರಗಳನ್ನು ಗುರುತು ಮಾಡಿ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸುತ್ತಿರುವುದಾಗಿ ಹೇಳಿದ್ದಾರೆ. ಈ ಬೆಳವಣಿಗೆ ಬೆಳೆಗಾರರಿಗೆ ವ್ಯತಿರಿಕ್ತವಾಗಿದ್ದು, ಗುರುತು ಮಾಡಿದ ಮರ ಪ್ರಾಕೃತಿಕ ವಿಕೋಪದಿಂದ ನೆಲಕಚ್ಚಿದರೆ ಅಥವಾ ಮರಗಳ್ಳರು ಕಳ್ಳತನ ಮಾಡಿದರೆ ಮರ ನಾಪತ್ತೆ ಪ್ರಕರಣ ತೋಟದ ಮಾಲೀಕರ ವಿರುದ್ಧ ದಾಖಲಾಗುವ ಆತಂಕವಿದೆ ಎಂದು ರವಿ ಕಾಳಪ್ಪ ಗಮನ ಸೆಳೆದರು.

ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಸರ್ಕಾರಕ್ಕೆ ಸಲಹೆ ನೀಡಿ ತಕ್ಷಣ ಆದೇಶವನ್ನು ಹಿಂದಕ್ಕೆ ಪಡೆಯಬೇಕು. ತಪ್ಪಿದಲ್ಲಿ ಜಿಲ್ಲೆಯ ಎಲ್ಲ ಬೆಳೆಗಾರರನ್ನು ಸೇರಿಸಿ ಅರಣ್ಯ ಇಲಾಖೆ ವಿರುದ್ಧ ಹೋರಾಟ ನಡೆಸುವುದಾಗಿ ತಿಳಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಪಿ.ಸುನಿಲ್ ಸುಬ್ರಮಣಿ ಮಾತನಾಡಿ, ಮುಂದಿನ 24 ಗಂಟೆಯೊಳಗೆ ಸರ್ಕಾರ

ಆದೇಶವನ್ನು ಹಿಂದಕ್ಕೆ ಪಡೆಯುವಂತೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಕ್ರಮ ಕೈಗೊಳ್ಳಬೇಕು ಎಂದು

ಒತ್ತಾಯಿಸಿದರು.

ಜಿಲ್ಲೆಯ ಜನರು ಪರಿಸರ ಪ್ರೇಮಿಗಳು, ಹಿರಿಯರು ಮರಗಿಡಗಳನ್ನು ಸಂರಕ್ಷಿಸಿಕೊಂಡು ಬಂದಿದ್ದಾರೆ, ಅರಣ್ಯ ಇಲಾಖೆಯಿಂದ ಪರಿಸರ ಸಂರಕ್ಷಣೆಯ ಪಾಠ ಕಲಿಯುವ ಅಗತ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ಜೈನಿ, ಚಲನ್ ಕುಮಾರ್, ವಿ.ಕೆ.ಲೋಕೇಶ್ ಹಾಗೂ ಜಿಲ್ಲಾ ವಕ್ತಾರ ಬಿ.ಕೆ.ಅರುಣ್ ಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!