ಹೊಸಪೇಟೆ: ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಸತತವಾಗಿ ಸಂಭವಿಸುತ್ತಿರುವ ಅಪಘಾತಗಳನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಬೇಕು. ಕುಂಟುತ್ತ ಸಾಗಿರುವ ಹೆದ್ದಾರಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿ ಕರುನಾಡ ಕಲಿಗಳ ಕ್ರಿಯಾಶೀಲ ಸಮಿತಿ ಸದಸ್ಯರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಬಿಎಂಎಂ ಕಾರ್ಖಾನೆಯ ಮುಂಭಾಗದಲ್ಲಿ ಹೆದ್ದಾರಿ ಕಾಮಗಾರಿ ಕೆಲ ತಿಂಗಳಿಂದ ಆಮೆಗತಿಯಲ್ಲಿ ನಡೆಯುತ್ತಿರುವುದು ಅಪಘಾಯಗಳಿಗೆ ಕಾರಣವಾಗುತ್ತಿದೆ. ಅರೆಬರೆ ಕಾಮಗಾರಿ ಮತ್ತು ಲಾರಿಗಳ ಅತಿವೇಗದಿಂದಾಗಿ ಅಮಾಯಕ ಸಾರ್ವಜನಿಕರ ಜೀವಗಳು ರಸ್ತೆಯಲ್ಲಿ ಬಲಿಯಾಗುತ್ತಿವೆ. ಕಾಮಗಾರಿಯನ್ನು ಹಗಲಿರುಳಾದರೂ ನಿರ್ವಹಿಸಿ, ಆದಷ್ಟು ಬೇಗ ಪೂರ್ಣಗೊಳಿಸಬೇಕು. ಕೂಡಲೇ ಜಿಲ್ಲಾಡಳಿತ ಮತ್ತು ಹೆದ್ದಾರಿ ಪ್ರಾಧಿಕಾರ ಎಚ್ಚೆತ್ತುಕೊಂಡು ಸಿಸಿಟಿವಿ ಅಳವಡಿಕೆ ಹಾಗೂ ವೇಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಪ್ರತಿಭಟನೆ ನಡೆಸುವುದಾಗಿ ಕರುನಾಡ ಕಲಿಗಳ ಕ್ರಿಯಾ ಸಮಿತಿ ಮನವಿಯಲ್ಲಿ ಎಚ್ಚರಿಸಿದೆ.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಪಿ.ವೆಂಕಟೇಶ, ಉಪಾಧ್ಯಕ್ಷ ಗುಜ್ಜಲ ಗಣೇಶ್, ಪ್ರಧಾನ ಕಾರ್ಯದರ್ಶಿ ಎಂ.ದಾದಾ ಖಲಂದರ್, ಸಹ ಕಾರ್ಯದರ್ಶಿ ಮಂಜುನಾಥ, ಪ್ರಮುಖರಾದ ಎಸ್. ವಾದಿರಾಜ್, ರಾಮು, ಎಚ್.ಟಿ. ಶ್ಯಾಮ್ ಪಾಲ್, ರಜಾಕ್ ನಬಿಸಾಬ್, ಬಿ.ರಾಮ್, ಎಚ್.ಈರಣ್ಣ, ಸಿ.ಮರಿಸ್ವಾಮಿ, ಗುಂಡಿ ರಮೇಶ್, ಮೆಟ್ರಿ ಶ್ರೀನಿವಾಸ ವಕೀಲರು, ಬಿ.ಪಂಪಾಪತಿ ನಾಯಕ, ರಾಘವೇಂದ್ರ ಕಟ್ಟಿಮನಿ, ಎ.ಶೇಖರಪ್ಪ, ಎ.ಮರಿಯಪ್ಪ, ಎಸ್.ಖಾದರವಲಿ ಭಾಗವಹಿಸಿದ್ದರು.