ಪ್ರತಿಭಟನಾ ಮೆರವಣಿಗೆ । ಮುಂಡಗೋಡ ಅರಣ್ಯ ಇಲಾಖೆ ಕಚೇರಿ ಮುತ್ತಿಗೆಗೆ ಯತ್ನ
ಜಿಲ್ಲಾದ್ಯಂತ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಅರಣ್ಯವಾಸಿಗಳ ಮೇಲೆ, ೧೯೯೮ರಲ್ಲಿ ಅಂದರೇ, ೨೭ ವರ್ಷಗಳ ಹಿಂದೆ ದಾಖಲಿಸಿದ ಕ್ರಿಮಿನಲ್ ಪ್ರಕರಣದ ಆಧಾರದ ಮೇಲೆ ಇತ್ತೀಚಿಗೆ ಅರಣ್ಯ ಇಲಾಖೆಯು ಜರುಗಿಸುತ್ತಿರುವ ತಾಂತ್ರಿಕ ದೋಷದಿಂದ ಕೂಡಿದ ಒಕ್ಕಲೆಬ್ಬಿಸುವ ಪ್ರಕ್ರಿಯೆ ನೀತಿ ಮತ್ತು ಆದೇಶಕ್ಕೆ ಆಕ್ರೋಶಗೊಂಡ ಬೃಹತ್ ಸಂಖ್ಯೆಯ ಅರಣ್ಯವಾಸಿಗಳು ಮುಂಡಗೋಡ ಅರಣ್ಯ ಇಲಾಖೆ ಕಚೇರಿ ಮುತ್ತಿಗೆಗೆ ಬುಧವಾರ ಯತ್ನಿಸಿದರು.
ಪಟ್ಟಣದ ಪ್ರವಾಸಿ ಮಂದಿರದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಅರಣ್ಯ ಇಲಾಖೆ ಕಚೇರಿ ತಲುಪಿತು. ಬಳಿಕ ಅಧಿಕಾರಿಗಳು ಹಾಗೂ ಹೋರಾಟಗಾರರ ನಡುವೆ ಮಾತಿನ ಚಕಮಕಿ ನಡೆಯಿತು.ಸಮಾಲೋಚನಾ ಸಭೆ:
ಜಿಲ್ಲೆಯಾದ್ಯಂತ ಅನಾದಿಕಾಲದಿಂದ, ಅನಧಿಕೃತವಾಗಿ ವಾಸ್ತವ್ಯ ಮತ್ತು ಸಾಗುವಳಿ ಮಾಡಿರುವಂತ ಅರಣ್ಯವಾಸಿಗಳ ಮೇಲೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯ ಪ್ರಾಧಿಕಾರದಲ್ಲಿ ಅರಣ್ಯವಾಸಿಗಳಿಗೆ ಒಕ್ಕಲೆಬ್ಬಿಸುವ ವಿಚಾರಣೆಯ ಕಾನೂನಾತ್ಮಕ ನೋಟಿಸ್ ನೀಡುತ್ತಿರುವ ಹಿನ್ನೆಲೆ ಒಕ್ಕಲೆಬ್ಬಿಸುವ ಪ್ರಕ್ರಿಯೆಗೆ ಕಾನೂನು ಬಾಹಿರವಾಗಿ ಅರಣ್ಯವಾಸಿಗಳಿಗೆ ಮಾಹಿತಿ ನೀಡುವುದು ಮತ್ತು ಕಾನೂನು ವ್ಯತಿರಿಕ್ತವಾಗಿ ಅರಣ್ಯವಾಸಿಗಳಿಗೆ ಉಂಟಾಗುತ್ತಿರುವ ಸಮಸ್ಯೆಗಳ ಕುರಿತು ಹೋರಾಟಗಾರರ ಪ್ರಮುಖರು ವಿಶ್ಲೇಶಿಸಿದರು.ಕ್ರಿಮಿನಲ್ ಪ್ರಕರಣ ದಾಖಲಿಸಿ ೨೭ ವರ್ಷಗಳ ನಂತರ ಅರಣ್ಯ ಇಲಾಖೆಯು ಒಕ್ಕಲೆಬ್ಬಿಸುವ ಪ್ರಕ್ರಿಯೆಗೆ ಚಾಲನೆ ನೀಡುತ್ತಿರುವ ಕುರಿತು ಹಾಗೂ ಅರಣ್ಯ ಇಲಾಖೆ ವನವಾಸದಲ್ಲಿ ಇದ್ದಿರುವ ಕುರಿತು ಅರಣ್ಯ ಹಕ್ಕು ಕಾಯಿದೆ ಅರ್ಜಿ ವಿಚಾರಣೆ ಹಂತದಲ್ಲಿ ಒಕ್ಕಲೆಬ್ಬಿಸುವ ಪ್ರಕ್ರಿಯೆ ಜರುಗುಸುತ್ತಿರುವುದು ಪದೇ ಪದೇ ಸಾಗುವಳಿ ಅರಣ್ಯವಾಸಿಗಳಿಗೆ ಆತಂಕ ಉಂಟುಮಾಡುವ ಬಗ್ಗೆ ಅರಣ್ಯಾಧಿಕಾರಿಗಳಿಗೆ ಪ್ರಶ್ನೆ ಮಾಡಲಾಯಿತು.
ಒಂದಿನ ಬೇಲಿ ತೆಗೆಯುವುದು. ಇನ್ನೊಂದು ದಿನ ಸಾಗುವಳಿಗೆ ಆತಂಕ ಮಾಡುವುದು, ಮತ್ತೊಂದು ದಿನ ನೋಟಿಸ್ ಬರುವುದು, ಅರಣ್ಯವಾಸಿಗಳಿಗೆ ಇತ್ತೀಚಿಗೆ ದಿನನಿತ್ಯ ಕಿರಿಕಿರಿಯಾಗಿದೆ ನೆಮ್ಮದಿಯಿಲ್ಲ, ಯಾವಾಗ ಬಂದು ಕಿತ್ತುಹಾಕುತ್ತಾರೆ ಎನ್ನುವ ಭಯ. ದಿನದಿನ ಸಮಸ್ಯೆಗಳಿಂದ ಸಾಯಿಸುವ ಬದಲು ಒಂದೇ ಸಲ ಬಂದು ಕಿತ್ತಾಕಿ ಬಿಟ್ಟು ಸಾಯಿಸಿಬಿಡಿ ಎಂದು ಅರಣ್ಯವಾಸಿಗಳು ಅಳಲು ತೊಡಿಕೊಂಡರು.
ಈ ಸಂದರ್ಭ ವಲಯ ಅರಣ್ಯಾಧಿಕಾರಿ ಅಪ್ಪಾರಾವ್ ಕಲಶೆಟ್ಟಿ ಹಾಗೂ ವೀರೇಶ ಉಪಸ್ಥಿತರಿದ್ದರು. ಎಲ್ಲಾ ಲಿಂಗ ಮುಂಡಗೋಡ ಠಾಣೆ ಪಿ.ಎಸ್.ಐ ಕುನ್ನೂರ, ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.ತಾಲೂಕಾಧ್ಯಕ್ಷ ಶಿವಾನಂದ ಜೋಗಿ, ಸಂಚಾಲಕ ಗಣಪತಿ ನಾಯ್ಕ ಬೆಡಸಗಾಂವ್, ಮಂಜುನಾಥ ನಾಯ್ಕ, ಸ್ವಾಮಿ ಹಿರೇಮಠ, ನೀಲಕಂಠ ಜಿಲ್ನೂರು, ಮಲ್ಲಿಕಾರ್ಜುನ್ ಓಣಿಕೇರಿ, ಮುನೇಶ್ವರ ಹನುಮಾಪುರ, ಶಂಬು ಕಾತೂರು, ವೀರಭದ್ರ, ನಾಗಪ್ಪ ಬಾಚಣಿಕೆ, ಜಗದೀಶ್ ಕೊಡಂಬಿ, ಶೇಖಯ್ಯ ಹಿರೇಮಠ ಗುಂಜಾವತಿ, ನಾನಾಸಾಬ, ಪ್ರಶಾಂತ್ ಜೈನ್ ಬೆಡಸಗಾಂವ್, ಶಿವಾಜಿ, ದೇವೇಂದ, ಪರಮೇಶ್ವರ ಗೌಡ ಶಾನವಳ್ಳಿ, ಚಿದಬಂರ ನಾಯ್ಕ ಮುಂತಾದವರಿದ್ದರು.
ಅರಣ್ಯ ಇಲಾಖೆಯು ೧೯೯೮ರಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದು ಇರುತ್ತದೆ. ತದನಂತರ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಸಾಗುವಳಿ ಅರ್ಜಿ ವಿಚಾರಣೆ ಹಂತದಲ್ಲಿ ಒಕ್ಕಲೆಬ್ಬಿಸಬಾರದು ಎಂಬ ಕಾನೂನು ಮತ್ತು ಕೇಂದ್ರ ಸರ್ಕಾರದ ಅದೇಶ ಉಲ್ಲಂಘಿಸಿ ಅಲ್ಲದೇ, ೩ ಎಕರೆ ಸಾಗುವಳಿದಾರರಿಗೆ ರಕ್ಷಣೆ ನೀಡುವ ರಾಜ್ಯ ಸರ್ಕಾರದ ಸುತ್ತೋಲೆ ವ್ಯತಿರಿಕ್ತವಾಗಿ ನಿರ್ಲಕ್ಷಿಸುವುದನ್ನು ಅಧ್ಯಕ್ಷ ರವೀಂದ್ರ ನಾಯ್ಕ ಖಂಡಿಸಿದರು.