ಸದ್ಯ ರಾಜ್ಯ ಸರ್ಕಾರವು ವಿಮುಕ್ತ ದೇವದಾಸಿ ಮಹಿಳೆಯರ ಮೂರು ತಲೆಮಾರಿನ ಸಮೀಕ್ಷೆ ನಡೆಸುತ್ತಿದೆ.
ಕಂಪ್ಲಿ: ವಿಮುಕ್ತ ದೇವದಾಸಿ ಮಹಿಳೆಯರ ಮಕ್ಕಳಿಗೆ ವಂಶವೃಕ್ಷ ನೀಡುವಂತೆ ಒತ್ತಾಯಿಸಿ ರಾಜ್ಯ ದೇವದಾಸಿ ಮಹಿಳೆಯರ ಮಕ್ಕಳ ಹೋರಾಟ ಸಮಿತಿಯ ತಾಲೂಕು ಪದಾಧಿಕಾರಿಗಳು ಬುಧವಾರ ತಹಸೀಲ್ದಾರ್ ಜೂಗಲ ಮಂಜುನಾಯಕಗೆ ಮನವಿ ಸಲ್ಲಿಸಿದರು.
ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಜಿಲ್ಲಾ ಕಾರ್ಯದರ್ಶಿ ಎ.ಸ್ವಾಮಿ ಮಾತನಾಡಿ, ಸದ್ಯ ರಾಜ್ಯ ಸರ್ಕಾರವು ವಿಮುಕ್ತ ದೇವದಾಸಿ ಮಹಿಳೆಯರ ಮೂರು ತಲೆಮಾರಿನ ಸಮೀಕ್ಷೆ ನಡೆಸುತ್ತಿದೆ. ಆದರೆ ಮರಣ ಹೊಂದಿದ ದೇವದಾಸಿ ಮಹಿಳೆಯರ ಮಕ್ಕಳಿಗೆ ತಾಯಿಯ ವಂಶವೃಕ್ಷ ದೊರೆಯದಿರುವುದು ದೊಡ್ಡ ತೊಂದರೆಯಾಗಿದೆ. ವಂಶವೃಕ್ಷಕ್ಕಾಗಿ ಅರ್ಜಿ ಹಾಕಿದಾಗ ಮರಣ ಪ್ರಮಾಣಪತ್ರ ಅಥವಾ ಆಧಾರ್ ಕಾರ್ಡ್ ದಾಖಲೆಗಳ ಕೊರತೆ ಎಂಬ ನೆಪ ಹೇಳಿ ಅರ್ಜಿ ತಿರಸ್ಕರಿಸಲಾಗುತ್ತಿದೆ. ವಾಸ್ತವವಾಗಿ ಅನೇಕ ದೇವದಾಸಿ ಮಹಿಳೆಯರು ಮರಣ ಹೊಂದಿದ್ದು, ಅವರ ಮರಣ ಪ್ರಮಾಣ ಪತ್ರಗಳು ಲಭ್ಯವಿಲ್ಲ. ನ್ಯಾಯಾಲಯದ ಮೂಲಕ ದಾಖಲೆ ತರುವಂತಾದರೆ ಸಾವಿರಾರು ರುಪಾಯಿ ವೆಚ್ಚ ಆಗುತ್ತದೆ. ಆರ್ಥಿಕ ಸ್ಥಿತಿ ದುರ್ಬಲವಾಗಿರುವ ವಿಮುಕ್ತ ಮಹಿಳೆಯರ ಕುಟುಂಬಗಳಿಗೆ ಇದು ಅಸಾಧ್ಯ. ಮರಣ ಹೊಂದಿದ ದೇವದಾಸಿ ಮಹಿಳೆಯರ ಪ್ರಮಾಣ ಪತ್ರದ ಆಧಾರದ ಮೇಲೆ ವಂಶವೃಕ್ಷ ನೀಡುವಂತಾಗಬೇಕು. ಇದರಿಂದ ಅವರ ಮಕ್ಕಳು ಸರ್ಕಾರದ ವಿವಿಧ ಸೌಲಭ್ಯಗಳು ಹಾಗೂ ಹಕ್ಕುಗಳ ಪ್ರಯೋಜನ ಪಡೆಯಲು ಸಾಧ್ಯವಾಗುತ್ತದೆ ಮನವಿ ಮಾಡಿದರು.
ಸಭೆಯಲ್ಲಿ ಸಂಘದ ಪದಾಧಿಕಾರಿಗಳಾದ ಎಸ್.ನೀಲಪ್ಪ, ರಾಮಪ್ಪ, ರಾಜಶೇಖರ, ಬಡಗಿ ಮಾರುತಿ, ಮಾರೆಣ್ಣ, ಬಿ.ರಾಮ, ಚಂದ್ರಶೇಖರ, ಸಿ.ಹನುಮಂತ, ಸಿ.ಬಸವರಾಜ, ಎಚ್.ವೀರೇಶ, ಕಾಳಪ್ಪ, ಗಾದಿಲಿಂಗಪ್ಪ, ಯಂಕಮ್ಮ, ತಿಪ್ಪಮ್ಮ, ಯಶೋಧ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.