ಬೇರೆಡೆಗೆ ಬೀದಿ ನಾಯಿಗಳ ಸಾಗಿಸಲು ಆಗ್ರಹ

KannadaprabhaNewsNetwork | Published : Mar 13, 2024 2:01 AM

ಸಾರಾಂಶ

ಪುರಸಭೆ ವ್ಯಾಪ್ತಿಯಲ್ಲಿ ಬರುವ ಚವಡಿಹಾಳ ರಸ್ತೆಯ ಪುರಸಭೆಯ ಘನತ್ಯಾಜ್ಯ ವಸ್ತುಗಳ ಸಂಗ್ರಹದ ಸುತ್ತ-ಮುತ್ತಲು ಇರುವ ಜನವಸತಿ ಪ್ರದೇಶಗಳಿಗೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಇದರಿಂದ ಹಲವು ಕುರಿ, ಮೇಕೆಗಳು ಬಲಿಯಾಗಿದ್ದು, ವಸತಿ ಪ್ರದೇಶದ ಜನರು ಭಯಭೀತರಾಗಿದ್ದಾರೆ. ಕೂಡಲೇ ಬೀದಿ ನಾಯಿಗಳನ್ನು ಬೇರೆಡೆಗೆ ಸಾಗಿಸಬೇಕು ಎಂದು ಆಗ್ರಹಿಸಿ ಸಾರ್ವಜನಿಕರು ಪಟ್ಟಣದ ಪುರಸಭೆಯ ಮುಂದೆ ನಾಯಿಗಳ ದಾಳಿಯಿಂದ ಸಾವನಪ್ಪಿದ ಕುರಿ, ಮೇಕೆಗಳನ್ನು ಪುರಸಭೆ ಆವರಣದ ಮುಂದಿಟ್ಟು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಇಂಡಿ

ಪುರಸಭೆ ವ್ಯಾಪ್ತಿಯಲ್ಲಿ ಬರುವ ಚವಡಿಹಾಳ ರಸ್ತೆಯ ಪುರಸಭೆಯ ಘನತ್ಯಾಜ್ಯ ವಸ್ತುಗಳ ಸಂಗ್ರಹದ ಸುತ್ತ-ಮುತ್ತಲು ಇರುವ ಜನವಸತಿ ಪ್ರದೇಶಗಳಿಗೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಇದರಿಂದ ಹಲವು ಕುರಿ, ಮೇಕೆಗಳು ಬಲಿಯಾಗಿದ್ದು, ವಸತಿ ಪ್ರದೇಶದ ಜನರು ಭಯಭೀತರಾಗಿದ್ದಾರೆ. ಕೂಡಲೇ ಬೀದಿ ನಾಯಿಗಳನ್ನು ಬೇರೆಡೆಗೆ ಸಾಗಿಸಬೇಕು ಎಂದು ಆಗ್ರಹಿಸಿ ಸಾರ್ವಜನಿಕರು ಪಟ್ಟಣದ ಪುರಸಭೆಯ ಮುಂದೆ ನಾಯಿಗಳ ದಾಳಿಯಿಂದ ಸಾವನಪ್ಪಿದ ಕುರಿ, ಮೇಕೆಗಳನ್ನು ಪುರಸಭೆ ಆವರಣದ ಮುಂದಿಟ್ಟು ಪ್ರತಿಭಟನೆ ನಡೆಸಿದರು.

ಕಳೆದ 6 ತಿಂಗಳ ಹಿಂದೆ ಇದೇ ಬೀದಿ ನಾಯಿಗಳು ಐದಾರು ಕುರಿ, ಮೇಕೆಗಳಿಗೆ ಕಚ್ಚಿ ಸಾವುಪಡಿಸಿದ್ದವು. ಈ ಕುರಿತು ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಯಾವುದೇ ಪ್ರಯೋಜನವಾಗದೇ ಇರುವುದರಿಂದ ಮತ್ತೇ ನಾಯಿ ದಾಳಿಗೆ 3 ಕುರಿ, ಮೇಕೆಗಳು ಸಾವನಪ್ಪಿವೆ. ಪುರಸಭೆಯ ಘನತ್ಯಾಜ್ಯ ವಸ್ತುಗಳ ಸಂಗ್ರಹಾಲಯದಲ್ಲಿ ಪಟ್ಟಣದಲ್ಲಿ ಸಾವನಪ್ಪಿದ್ದ ಹಂದಿ ಇತರೆ ಪ್ರಾಣಿಗಳನ್ನು ತಂದು ಇಲ್ಲಿಯೇ ಬಿಸಾಕುತ್ತಿರುವುದರಿಂದ ಬೀದಿ ನಾಯಿಗಳು ಇಲ್ಲಿ ಬಿಸಾಕಿದ ಹಂದಿಗಳನ್ನು ತಿಂದು ಕೊಬ್ಬಿದ ಗೂಳಿಯಂತೆ ಬೆಳೆದು ಬಿಟ್ಟಿವೆ. ಹೀಗಾಗಿ ಜನರ ಭಯ ನಾಯಿಗಳಿಗೆ ಇಲ್ಲವಾದುದ್ದರಿಂದ ಜನರ ಮುಂದೆಯೇ ಕುರಿ, ಮೇಕೆಗಳನ್ನು ಕಚ್ಚಿ ತಿನ್ನುತ್ತಿವೆ. ಹೀಗಾದರೇ ಮನೆಯಲ್ಲಿ ಸಣ್ಣ ಮಕ್ಕಳು ಇರುವುದರಿಂದ ಅವರ ಪ್ರಾಣಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಇದೆ. ಇಷ್ಟಾದರೂ ಸಹ ಪುರಸಭೆ ಅಧಿಕಾರಿಗಳು ನಾಯಿಗಳಿಗೆ ಬೇರೆಡೆಗೆ ಸಾಗಿಸುವ ಪ್ರಯತ್ನ ಮಾಡುತ್ತಿಲ್ಲ ಎಂದು ವಸತಿ ಪ್ರದೇಶದ ಸಾರ್ವಜನಿಕರು ಆರೋಪಿಸಿದರು.

ಕೂಡಲೇ ಬೀದಿ ಚವಡಿಹಾಳ ರಸ್ತೆಯ ಪುರಸಭೆಯ ಘನತ್ಯಾಜ್ಯ ವಸ್ತು ಸಂಗ್ರಹಲಾಯದ ಬಳಿ ಇರುವ ಬೀದಿ ನಾಯಿಗಳನ್ನು ಬೇರೆಡೆಗೆ ಸಾಗಿಸಬೇಕು. ಇಲ್ಲವಾದರೆ ನಾಯಿಗಳು ಘನತ್ಯಾಜ್ಯ ವಸ್ತು ಸಂಗ್ರಹಾಲಯದ ಒಳಗೆ ಹೋಗಿ ಸತ್ತ ಹಂದಿ, ಪ್ರಾಣಿಗಳನ್ನು ತಿನ್ನದಂತೆ ಕ್ರಮಕೈಗೊಳ್ಳಬೇಕು. ಕ್ರಮಕೈಗೊಳ್ಳಲು ವಿಳಂಬ ಮಾಡಿದರೇ ಘನತ್ಯಾಜ್ಯ ವಸ್ತು ಸಂಗ್ರಹಾಲಯಕ್ಕೆ ಬೀಗ ಹಾಕುವುದರ ಜೊತೆಗೆ ಪುರಸಭೆಯ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುತ್ತದೆ. ಇನ್ನೂ ಮುಂದೆ ಬೀದಿ ನಾಯಿಗಳಿಂದ ಕುರಿ, ಮೇಕೆಗಳಿಗಾಗಲಿ, ಜನರಿಗಾಗಲಿ ತೊಂದರೆಯಾದರೇ ಅದಕ್ಕೆ ಪುರಸಭೆಯೇ ನೇರ ಹೊಣೆಯನ್ನಾಗಿ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನಂತರ ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ ಅವರಿಗೆ ಮನವಿ ಸಲ್ಲಿಸಿದರು. ಪ್ರಶಾಂತ ಲಾಳಸಂಗಿ, ಅಶೋಕ ಅಕಲಾದಿ, ರಾಚು ಬಡಿಗೇರ, ಮಲ್ಲಿಕಾರ್ಜುನ ಗುಡ್ಲ, ಶ್ರೀಶೈಲ ಪೂಜಾರಿ, ಮಹೇಶ ಹೂಗಾರ ಮೊದಲಾದವರು ಇದ್ದರು.

Share this article