ಆಧುನಿಕ ಪಾಳೆಗಾರರರಿಂದ ಪ್ರಜಾಪ್ರಭುತ್ವಕ್ಕೆ ಪೆಟ್ಟು

KannadaprabhaNewsNetwork |  
Published : Dec 21, 2025, 03:15 AM IST
20ಕೆಪಿಎಲ್21ಕೊಪ್ಪಳದ ಖಾಸಗಿ ಹೋಟಲ್‌ನಲ್ಲಿ ಅಹಿಂದ ಚಳುವಳಿ ಜಿಲ್ಲಾ ಸಂಚಾಲಕರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಅವರು ಮಾತನಾಡುತ್ತಿರುವುದು. | Kannada Prabha

ಸಾರಾಂಶ

ಹಿಂದೆ ಇದ್ದಂತೆ ಈಗಲೂ ಪಾಳೆಗಾರಿಕೆ ಇದೆ. ಹೀಗಾಗಿ, ಶೋಷಿತರು, ಧಮನಿತರ ಕಲ್ಯಾಣವಾಗುತ್ತಿಲ್ಲ. ಇದಕ್ಕಾಗಿ ಗುಂಡಿಗೆ ಗಟ್ಟಿ ಮಾಡಿಕೊಂಡು ಪ್ರಶ್ನೆ ಮಾಡುವ ಮನೋಭಾವನೆ ರೂಢಿಸಿಕೊಳ್ಳಬೇಕು

ಕೊಪ್ಪಳ: ಸ್ವಾರ್ಥ, ಸ್ವಜನಪಕ್ಷಪಾತ ಸೇರಿದಂತೆ ಆಧುನಿಕ ಪಾಳೆಗಾರರಿಂದ ಪ್ರಜಾಪ್ರಭುತ್ವಕ್ಕೆ ಪೆಟ್ಟು ಬಿದ್ದಿದ್ದು, ಇದನ್ನು ಮಟ್ಟ ಹಾಕಲು ಅಹಿಂದ ವರ್ಗ ಎದ್ದು ನಿಲ್ಲಬೇಕು, ಹೆಂಡ, ಹಣಕ್ಕಾಗಿ ಮತ ಹಾಕದೆ ಸ್ವಾಭೀಮಾನದಿಂದ ಮತ ಚಲಾಯಿಸಬೇಕು ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಹೇಳಿದ್ದಾರೆ.

ಕೊಪ್ಪಳ ನಗರದ ಖಾಸಗಿ ಹೋಟಲ್‌ನಲ್ಲಿ ಅಹಿಂದ ಚಳವಳಿ ಜಿಲ್ಲಾ ಸಂಚಾಲಕರ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಸ್ತುತ ರಾಜಕೀಯ ವ್ಯವಸ್ಥೆಯನ್ನು ಕಟುವಾಗಿ ಟೀಕಿಸಿದರು.

ಹಿಂದೆ ಇದ್ದಂತೆ ಈಗಲೂ ಪಾಳೆಗಾರಿಕೆ ಇದೆ. ಹೀಗಾಗಿ, ಶೋಷಿತರು, ಧಮನಿತರ ಕಲ್ಯಾಣವಾಗುತ್ತಿಲ್ಲ. ಇದಕ್ಕಾಗಿ ಗುಂಡಿಗೆ ಗಟ್ಟಿ ಮಾಡಿಕೊಂಡು ಪ್ರಶ್ನೆ ಮಾಡುವ ಮನೋಭಾವನೆ ರೂಢಿಸಿಕೊಳ್ಳಬೇಕು ಎಂದರು.

ಡಾ. ಬಿ.ಆರ್.ಅಂಬೇಡ್ಕರ್ ಮೂಲಭೂತ ಹಕ್ಕುಗಳನ್ನು ಸಂವಿಧಾನದಲ್ಲಿ ಸ್ಪಷ್ಟವಾಗಿ ಬರೆದಿದ್ದಾರೆ. ಆದರೆ ಸಂವಿಧಾನದ ಆಶಯಗಳು ೭೮ ವರ್ಷ ಕಳೆದರೂ ಸಂಪೂರ್ಣ ಜಾರಿಯಾಗಿಲ್ಲ. ನಮ್ಮ ಹಿಂದಿನ ನಾಯಕರು ಜನಪರ ಚಿಂತನೆ ಮಾಡುತ್ತಿದ್ದರು. ಆದರೆ ಇಂದಿನ ರಾಜಕೀಯ ವ್ಯವಸ್ಥೆ ಕೆಟ್ಟಿದ್ದು, ಸ್ವಾರ್ಥತೆ ಹೆಚ್ಚಾಗಿದೆ. ಜಾತಿ ಮತ್ತು ಹಣಬಲದಿಂದ ಕೆಲವು ರಾಜಕಾರಣಿಗಳು ಜನರ ಮೇಲೆ ಅಧಿಪತ್ಯ ಸಾಧಿಸುತ್ತಿದ್ದಾರೆ. ಸಂವಿಧಾನದ ಮೀಸಲಾತಿ ಲಾಭ ಕೆಲವೇ ಕೆಲವು ಕುಟುಂಬಗಳು ದೋಚಿಕೊಂಡಿವೆ ಎಂದರು.

ರಾಜ್ಯದಲ್ಲಿ ಎಸ್‌ಸಿ ಸಮುದಾಯ ಶೇ.೧೭.೧ ಎಸ್‌ಟಿ ಶೇ.೭, ಅಲ್ಪಸಂಖ್ಯಾತರು ಶೇ.೧೬ ಹಾಗೂ ಹಿಂದುಳಿದ ವರ್ಗದವರು ಶೇ.೩೨ರಷ್ಟು ಜನರಿದ್ದಾರೆ. ಇವರೆಲ್ಲರೂ ಒಗ್ಗಟ್ಟಾಗಿ ಸಂಘಟಿತರಾಗಬೇಕು. ಒಂದೆಡೆ ಮೀಸಲಾತಿ ಶೇ. ೫೦ ಮೀರಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದ್ದರೂ ಮತ್ತೊಂದು ತೀರ್ಪಿನಲ್ಲಿ ವಿಭಿನ್ನ ಅರ್ಥ ನೀಡಿದೆ. ಆದರೆ ಮೀಸಲಾತಿಯ ವಿಚಾರದಲ್ಲಿ ಶಾಸಕರಾದವರು ಅವಲೋಕನ ಮಾಡಬೇಕು. ಕೋರ್ಟ್‌ಗಳ ತೀರ್ಪು ಓದಿ ಅಧ್ಯಯನ ಮಾಡಬೇಕು. ಆದರೆ ಇಂದಿನ ಶಾಸಕರಿಗೆ ಸಂವಿಧಾನದ ಪರಿಪೂರ್ಣ ಮಾಹಿತಿ ಇಲ್ಲದಂತಾಗಿದೆ. ಈ ದೇಶದಲ್ಲಿ ಶಾಸಕರಿಗೆ ಕಾನೂನು ರೂಪಿಸುವ ಅಧಿಕಾರವಿದೆ. ಬಳಕೆ ಇಲ್ಲದ ಕಾನೂನು ತೆಗೆದು ಹಾಕುವ ಜವಾಬ್ದಾರಿಯೂ ಅವರ ಮೇಲಿದೆ. ಶಾಸಕರಿಗೆ ಸಂವಿಧಾನ ಗೊತ್ತಿರಬೇಕು. ವಿಧಾನಸಭೆ ಹಾಗೂ ಸಂಸತ್‌ನಲ್ಲಿ ಸಂವಿಧಾನ ತಿಳಿದವರು ತುಂಬ ವಿರಳ ಎಂದು ನೋವಿನಿಂದ ಹೇಳಿದರು.

ರಾಮಾಯಣ ಬರೆದವರು ವಾಲ್ಮೀಕಿ ಮಹರ್ಷಿ. ದೇಶದ ಪರಂಪರೆ, ಸಂಸ್ಕೃತಿಯನ್ನು ಬಿಂಬಿಸಿದ ಮಹಾನ್ ಋಷಿ ವಾಲ್ಮೀಕಿ. ಸಂವಿಧಾನ ಬರೆದವರು ಡಾ. ಬಿ.ಆರ್. ಅಂಬೇಡ್ಕರ್. ವಿದ್ವತ್ ಯಾರಪ್ಪನ ಸ್ವತ್ತಲ್ಲ, ಅವಕಾಶ ದೊರೆತವರಿಗೆ ವಿದ್ವತ್ ಹೊರ ಹೊಮ್ಮುತ್ತದೆ. ಇದಕ್ಕಾಗಿ ಅಹಿಂದ ಸಮಾಜ ಜಾಗೃತ ಮಾಡಬೇಕಾಗಿದೆ ಎಂದರು.

ಆಹ್ವಾನ ಪತ್ರಿಕೆಯಲ್ಲಿ ನೂರು ಗಣ್ಯರ ಹೆಸರು ಹಾಕಿಸಿದ್ದರೂ ಬಂದಿದ್ದು ಕೇವಲ ಹತ್ತು. ಇದರಿಂದಲೇ ಗೊತ್ತಾಗುತ್ತದೆ ನೀವಿನ್ನು ಶಕ್ತರಾಗಿಲ್ಲ. ಅಂಥವರಿಗೆ ಬಿಸಿಮುಟ್ಟಿಸುವ ಶಕ್ತಿ ನಿಮ್ಮದಾದರೇ ಖಂಡಿತವಾಗಿಯೂ ಅವರು ಬಂದೇ ಬರುತ್ತಾರೆ ಎಂದರು.

ಅಹಿಂದ ವರ್ಗದ ಫಾದರ್ ಎಸ್.ಕೆ. ಜೋಸ್, ಮುಪ್ತಿ ನಜೀರ್ ಅಹ್ಮದ್ ಖಾದ್ರಿ ತಸ್ಕೀನ್, ಎಸ್.ಮೂರ್ತಿ, ಆರ್.ಸುರೇಂದ್ರ, ಯಮನಪ್ಪ ಬೆಳಗಲಿ, ಎ.ವಿ. ಕಣವಿ, ಮುದುಕಪ್ಪ ಹೊಸಮನಿ, ಖರೀಮ್ ಪಾಷಾ, ಚನ್ನಬಸಪ್ಪ ಎಂ, ಹನುಮಂತಪ್ಪ, ದೇವಪ್ಪ ಕಟ್ಟಿಮನಿ, ಲಕ್ಷ್ಮಣ ಬಡಿಗೇರ, ವಿ.ಕೆ. ಬಸರಿಹಾಳ, ಪ್ರಕಾಶ ಹೊಳೆಯಪ್ಪನವರ್, ಬಿ.ಎಸ್. ವೀರಾಪೂರ ಸೇರಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ