ಮುಂಡರಗಿ: ಡೆಂಘೀ ರೋಗವು ಈಡಿಸ್ ಇಜಿಪ್ಟ್ ಸೊಳ್ಳೆಯು ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಆದ್ದರಿಂದ ಸೊಳ್ಳೆಗಳು ಬಾರದಂತೆ ಮುನ್ನೆಚ್ಚರಿಕೆ ಕ್ರಮ ವಹಿಸುವುದರಿಂದ ಡೆಂಘೀ ರೋಗ ನಿಯಂತ್ರಿಸಬಹುದು ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಂ.ಎಸ್. ಸಜ್ಜನರ ಹೇಳಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪಿ.ಎಫ್. ಗುಮ್ಮಗೋಳ ಮಾತನಾಡಿ, ಡೆಂಘೀ ಜ್ವರದ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಎಲ್ಲಾ ವಸತಿ ನಿಲಯಗಳಲ್ಲಿ ಕೈಗೊಳ್ಳುವುದರ ಮೂಲಕ ಡೆಂಘೀ ಜ್ವರ ನಿಯಂತ್ರಿಸಬೇಕೆಂದರು.
ತಾಲೂಕು ಆರೋಗ್ಯಾಧಿಕಾರಿ ಡಾ. ಲಕ್ಷ್ಮಣ ಪೂಜಾರ ಮಾತನಾಡಿ, ಡೆಂಘೀ ಜ್ವರದಲ್ಲಿ 3 ವಿಧಗಳು ಇದ್ದು,ಈ ರೋಗಕ್ಕೆ ನಿಖರವಾದ ಚಿಕಿತ್ಸೆ ಇರುವುದಿಲ್ಲಾ, ರೋಗದ ಲಕ್ಷಣಗಳ ಆಧಾರದ ಮೇಲೆ ಚಿಕಿತ್ಸೆ ನೀಡಲಾಗುವುದು, ಅದಕ್ಕಾಗಿ ರೋಗದ ಬಗ್ಗೆ ಜನರಿಗೆ ಹೆಚ್ಚಿನ ಅರಿವು ಮೂಡಿಸಬೇಕು ಎಂದರು.ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಅರುಣಾ ಸೊರಗಾವಿ, ಉಪನ್ಯಾಸಕಿ ಅನ್ನಪೂರ್ಣ ಶೆಟ್ಟರ ಮಾತನಾಡಿ, ಡೆಂಘೀ ನಿಯಂತ್ರಿಸಲು ಮನೆಯ ಸುತ್ತ ಮುತ್ತ ನೀರು ನಿಲ್ಲದ ಹಾಗೆ ಸ್ವಚ್ಛವಾಗಿ ಇಡಬೇಕು. ಮನೆಯ ಒಳಗೆ ನೀರು ತುಂಬುವ ಪಾತ್ರೆಗಳನ್ನು ವಾರಕ್ಕೊಮ್ಮೆ ಸ್ವಚ್ಚವಾಗಿ ತೊಳೆದು ಒಣಗಿಸಿ ನೀರು ತುಂಬಿ ಮೇಲಗಡೆ ಮುಚ್ಚಬೇಕು. ಮತ್ತು ಮನೆಯ ಕಿಟಕಿಗಳಿಗೆ ಜಾಲರಿಗಳನ್ನು ಬಳಸಬೇಕು, ಮಲಗುವಾಗ ಸೊಳ್ಳೆ ಪರದೆಗಳನ್ನು ಬಳಸಬೇಕು. ಸಂಜೆ ಬೇವಿನ ಸೊಪ್ಪಿನ ಹೊಗೆಯನ್ನು ಹಾಕಬೇಕು ಎಂದರು.
ಸವಿತಾ ಸಾಸವಿಹಳ್ಳಿ, ಡಾ. ತಸ್ಮಿಯಾ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು. ಕೆ.ಎಸ್. ಚೌಟಗಿ ಪ್ರಾರ್ಥಿಸಿದರು. ಎಸ್.ಎಲ್. ಕೋರಿ ವಂದಿಸಿದರು.