ಕರ್ತವ್ಯ ಲೋಪ: ಆರ್ ಆರ್ ಟಿ ಶಿರಸ್ತೇದಾರ್ ರವಿ ಅಮಾನತು

KannadaprabhaNewsNetwork | Published : Mar 20, 2024 1:19 AM

ಸಾರಾಂಶ

ಬಿ.ಆರ್. ರವಿ ಅವರು 2022 ಮತ್ತು 23 ನೇ ಸಾಲಿಗೆ ಸಂಬಂಧಪಟ್ಟ 241 ಕಡತಗಳನ್ನು ಉದ್ದೇಶಪೂರ್ವಕವಾಗಿ ಕಳೆದ 6 ತಿಂಗಳಿಗಿಂತಲೂ ಹೆಚ್ಚಿನ ಅವಧಧಿಯಲ್ಲಿ ತಮ್ಮ ಬಳಿಯೇ ಇಟ್ಟುಕೊಂಡು ಸರ್ಕಾರಿ ಕೆಲಸದಲ್ಲಿ ನಿರ್ಲಕ್ಷ್ಯ ವಹಿಸಿ ಕರ್ತವ್ಯ ಲೋಪವೆಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಪಟ್ಟಣದ ತಾಲೂಕು ಕಚೇರಿ ಆರ್.ಆರ್.ಟಿ ಶಿರಸ್ತೇದಾರ್ ಬಿ.ಆರ್. ರವಿ ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಿ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ಡಾ.ಜಿ.ಸಿ. ಪ್ರಕಾಶ್ ಆದೇಶಿಸಿದ್ದಾರೆ.

ಬಿ.ಆರ್. ರವಿ ಅವರು 2022 ಮತ್ತು 23 ನೇ ಸಾಲಿಗೆ ಸಂಬಂಧಪಟ್ಟ 241 ಕಡತಗಳನ್ನು ಉದ್ದೇಶಪೂರ್ವಕವಾಗಿ ಕಳೆದ 6 ತಿಂಗಳಿಗಿಂತಲೂ ಹೆಚ್ಚಿನ ಅವಧಧಿಯಲ್ಲಿ ತಮ್ಮ ಬಳಿಯೇ ಇಟ್ಟುಕೊಂಡು ಸರ್ಕಾರಿ ಕೆಲಸದಲ್ಲಿ ನಿರ್ಲಕ್ಷ್ಯ ವಹಿಸಿ ಕರ್ತವ್ಯ ಲೋಪವೆಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಇದರಿಂದ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರು ಮತ್ತು ಶಿಸ್ತು ಪ್ರಾಧಿಕಾರಿಯಾದ ನಾನು ನನಗೆ ದತ್ವಾಗಿರುವ ಅಧಿಕಾರವನ್ನು ಚಲಾಯಿಸಿ ಬಿ.ಆರ್. ರವಿ ಅವರನ್ನು ಇಲಾಖಾ ವಿಚಾರಣೆ ಕಾಯ್ದಿರಿಸಿ ಕರ್ನಾಟಕ ನಾಗರೀಕ ಸೇವಾ ನಿಯಮಗಳು 1957 ರ ನಿಯಮ-10(1)(ಡಿ) ಮತ್ತು (3) ರ ಪ್ರಕಾರ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತ್ತುಗೊಳಿಸಿ ಆದೇಶಿಸಿರುವುದಾಗಿ ಪ್ರಾದೇಶಿಕ ಆಯುಕ್ತ ಜಿ.ಸಿ. ಪ್ರಕಾಶ್ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ಆರ್.ಆರ್.ಟಿ ಶಾಖೆಗೆ ಸಂಬಂಧಿಸಿದ ಅರ್ಜಿಗಳನ್ನು ಹಲವು ವರ್ಷಗಳಿಂದ ತಮ್ಮ ಬಳಿಯೇ ಇಟ್ಟುಕೊಂಡು ಸಕಾಲದಲ್ಲಿ ವಿಲೇ ಮಾಡದ ಬಗ್ಗೆ ಬಿ.ಆರ್.ರವಿ ವಿರುದ್ಧ ಸಾರ್ವಜನಿಕರಿಂದ ಹಲವು ದೂರುಗಳಿದ್ದವು. ಸಾರ್ವಜನಿಕರ ದೂರಿನ ಮೇರೆಗೆ 2023ರ ಸೆ.20 ರಂದು ಮಂಡ್ಯ ಜಿಲ್ಲಾಧಿಕಾರಿಗಳು ಪಟ್ಟಣದ ತಾಲೂಕು ಕಚೇರಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ಮಾಡಿದ್ದರು. ಈ ವೇಳೆ ಶಿರಸ್ತೇದಾರ್ ಬಿ.ಆರ್. ರವಿ 241 ಕಡತಗಳನ್ನು ವಿಲೇ ಮಾಡದೆ ತಮ್ಮ ಬಳಿಯೇ ನಿಯಮಬಾಹಿರವಾಗಿ ಇಟ್ಟುಕೊಂಡಿದ್ದು ಕಂಡು ಬಂದಿತ್ತು. ಇದನ್ನು ಆಧರಿಸಿ ಜಿಲ್ಲಾಧಿಕಾರಿಗಳು ಸರ್ಕಾರ ಹಾಗೂ ಸಾರ್ವಜನಿಕರ ಮಧ್ಯೆ ಸಮನ್ವಯತೆ ಸಾಧಿಸುವ ಮಾತೃ ಇಲಾಖೆಯಾದ ಕಂದಾಯ ಇಲಾಖೆ ಬಗ್ಗೆ ಸಾರ್ವಜನಿಕರಲ್ಲಿ ಕೆಟ್ಟ ಅಭಿಪ್ರಾಯವನ್ನು ಮೂಡಿಸುವಲ್ಲಿ ಸದರಿ ನೌಕರ ಕಾರಣಕರ್ತರಾಗಿದ್ದಾರೆ ಎಂದು ಹಾಗೂ ಈ ಬಗ್ಗೆ ಸದರಿ ನೌಕರನಿಗೆ ಕಾರಣ ಕೇಳಿ ನೀಡಿದ ನೋಟಿಸ್ ನಲ್ಲಿ 241 ಅರ್ಜಿಗಳನ್ನು ತಾವು ಸಕಾಲದಲ್ಲಿ ವಿಲೇ ಮಾಡದಿರುವುದನ್ನು ಒಪ್ಪಿಕೊಂಡಿದ್ದರು.

ಈ ಹಿನ್ನೆಲೆಯಲ್ಲಿ ಸದರಿ ನೌಕರನ ವಿರುದ್ಧ ಮಂಡ್ಯ ಜಿಲ್ಲಾಧಿಕಾರಿಗಳು ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರ ಕಚೇರಿಗೆ ವರದಿ ಸಲ್ಲಿಸಿದ್ದರು. ಜಿಲ್ಲಾಧಿಕಾರಿಗಳ ವರದಿ ಪರಿಶೀಲಿಸಿ ಪ್ರಾದೇಶಿಕ ಆಯುಕ್ತ ಜಿ.ಸಿ. ಪ್ರಕಾಶ್ ಆರ್.ಆರ್.ಟಿ ಶಿರಸ್ತೇದಾರ್ ಬಿ.ಆರ್. ರವಿ ಅವರನ್ನು ವಿಚಾರಣೆ ಕಾಯ್ದಿರಿಸಿ ಅಮಾನತುಗೊಳಿಸಿ ಆದೇಶಿಸಿದ್ದಾರೆ.

Share this article