ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಕ್ರಿಸ್ತ ಪೂರ್ವದಲ್ಲೇ ಭಗವಾನ್ ಬುದ್ಧ ಮನುಷ್ಯನ ಸಮಸ್ಯೆಗಳನ್ನು ಪರಿಹರಿಸುವ ಅನೇಕ ಉಪಾಯಗಳನ್ನು ಸಲಹೆ ಮಾಡಿದ್ದು, ಅದರಲ್ಲಿ ಆಸೆಯೇ ದುಃಖಕ್ಕೆ ಮೂಲ ಎಂಬುದೂ ಒಂದು ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು. ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಭಗವಾನ್ ಬುದ್ದ ಜಯಂತಿಯಲ್ಲಿ ಬುದ್ಧನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.ರಾಜಮನೆತನದಲ್ಲಿ ಜನಿಸಿದರೂ ಭಗವಾನ್ ಬುದ್ದ ಎಲ್ಲ ಸುಖಭೋಗಗಳನ್ನು ತೊರೆದು ಜೀವನದ ಸತ್ಯಾನ್ವೇಷಣೆಯ ಹುಡುಕಾಟಕ್ಕೆ ಹೊರಟರು. ದುಃಖಕ್ಕೆ ಕಾರಣವೇನು, ಜೀವನದ ಪರಮಾರ್ಥವೇನು ಎಂಬುದು ಸೇರಿದಂತೆ ಅನೇಕ ವಿಚಾರಗಳನ್ನು ಸಂದೇಶಗಳಾಗಿ ನೀಡಿ ಹತ್ತು ಹಲವು ಸುಧಾರಣೆಗಳಿಗೆ ಕಾರಣರಾದರು. ಅವರ ತತ್ವ ಆದರ್ಶಗಳು ಅಂದೂ ಪ್ರಸ್ತುತವಾಗಿವೆ ಎಂದರು.
ಅತೃಪ್ತಿ ದುಃಖಕ್ಕೆ ಕಾರಣಬುದ್ಧನ ಪ್ರಕಾರ ಆಸೆಯೇ ದುಃಖಕ್ಕೆ ಮೂಲ. ಯಾವುದೋ ಒಂದು ಬಲವಾದ ಬಯಕೆ ಅಥವಾ ಅತೃಪ್ತಿ ದುಃಖಕ್ಕೆ ಕಾರಣವಾಗುತ್ತದೆ. ಅದಕ್ಕಾಗಿಯೇ ಒಬ್ಬ ವ್ಯಕ್ತಿಯು ತನಗೆ ಅಗತ್ಯಕ್ಕಿಂತ ಹೆಚ್ಚಿನದನ್ನು ಬಯಸಬಾರದು ಮತ್ತು ಅವನು ಯಾರಿಂದಲೂ ಹೆಚ್ಚಿನದನ್ನು ನಿರೀಕ್ಷಿಸಬಾರದು. ನಿಮ್ಮ ಆಸೆಗಳನ್ನು ನಿಯಂತ್ರಿಸಲು ನೀವು ಕಲಿತರೆ, ದುಃಖವು ತಾನಾಗಿಯೇ ಹೋಗುತ್ತದೆ ಎಂದು ತಿಳಿಸಿದರು. ಬುದ್ದನು ಸತ್ಯವನ್ನು ಅನ್ವೇಷಣೆಮಾಡಬೇಕು ಎಂದು ಹೊರಟಾಗ 4 ಸನ್ನಿವೇಶಗಳು ಆತನ ಮೇಲೆ ಪರಿಣಾಮ ಬೀರುತ್ತವೆ. ಅವರು ಮೊದಲು ಕಂಡದ್ದು ಒಬ್ಬ ವೃದ್ಧನ ದುರ್ಬಲತೆ ಅದರಿಂದ ನಾವು ಶಾಶ್ವತವಾಗಿ ಚಿಕ್ಕವರಲ್ಲ ಎಂದು ಅರಿಯುತ್ತಾರೆ, ಎರಡನೆಯದು ಒಬ್ಬ ಅನಾರೋಗ್ಯ ಪೀಡಿತ ವ್ಯಕ್ತಿ ನೋಡಿ ನಾವು ಶಾಶ್ವತವಾಗಿ ಆರೋಗ್ಯವಂತರಲ್ಲ ಎಂದು ಅರಿಯುತ್ತಾರೆ, ಮೂರನೆಯದಾಗಿ ಅಂತ್ಯಕ್ರಿಯೆಯ ಚಿತೆಯ ಮೇಲಿನ ಶವವನ್ನು ನೋಡಿ ನಾವು ಬದುಕಲು ಕೆಲವೇ ತಿಂಗಳುಗಳು ಮಾತ್ರ ಉಳಿದಿವೆ ಎಂದು ಅರಿಯುತ್ತಾರೆ, ನಾಲ್ಕನೇಯದಾಗಿ ಜೀವನದ ಸಂಕಷ್ಟಗಳ ಪರಿಹಾರಕ್ಕಾಗಿ ಧ್ಯಾನಾಸಕ್ತವಾಗಿ ಕುಳಿತ ಮುನಿಗಳನ್ನು ಕಂಡು ಅದರ ಹಿಂದಿನ ಉದ್ದೇಶ ತಿಳಿಯುತ್ತಾರೆ ಎಂದರು.
ಬುದ್ಧ ವಿಹಾರ ನಿರ್ಮಿಸಲು ಮನವಿನಾಗಸೇನ ಬುದ್ದ ವಿಹಾರದ ಧಮ್ಮಾಚಾರಿ ಡಾ.ಎಚ್.ಆರ್.ಸುರೇಂದ್ರ ಮಾತನಾಡಿ, ಬುದ್ದ ಧರ್ಮದ ಸಂದೇಶಗಳನ್ನು ತಿಳಿಸಲು ಅನುಕೂಲವಾಗಲು ಚಿಕ್ಕಬಳ್ಳಾಪುರ ಭಾಗದಲ್ಲಿ ಬುದ್ದ ವಿಹಾರ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಬೇಕು ಎಂದು ತಿಳಿಸಿ ಬುದ್ದರ ಜೀವನ ಚರಿತ್ರೆ ಮತ್ತು ಬುದ್ದ ಧರ್ಮದ ಸಂದೇಶಗಳನ್ನು ತಿಳಿಸಿಕೊಟ್ಟರು.ಈ ಸಂದರ್ಭದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್,ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಯಲುವಹಳ್ಳಿ ರಮೇಶ್ ,ನಗರಸಭೆ ಉಪಾಧ್ಯಕ್ಷ ನಾಗರಾಜ್, ಸದಸ್ಯೆ ಅಣ್ಣಮ್ಮ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ತೇಜಾನಂದ ರೆಡ್ಡಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ವಿವೇಕಾನಂದ , ಪೊಲೀಸ್ ಉಪಾಧೀಕ್ಷಕ ಎಸ್.ಶಿವಕುಮಾರ್, ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು,ಜಿಲ್ಲಾ ಜಾಗೃತಿ ಸಮಿತಿ ಸದಸ್ಯರು, ಸರ್ಕಾರೇತರ ಸಂಘ ಸಂಸ್ಥೆಗಳ ಸದಸ್ಯರು,ಪದಾಧಿಕಾರಿಗಳು,ಸಾರ್ವಜನಿಕರು ಇದ್ದರು.