ಕನ್ನಡಪ್ರಭ ವಾರ್ತೆ ದಾವಣಗೆರೆ
ಸಾಂಸ್ಕೃತಿಕ ದಸರಾ ಸಮಿತಿ ದಾವಣಗೆರೆಯಿಂದ ದೇವನಗರಿ ದಸರಾ-2026 ಮತ್ತು ಸಾಂಸ್ಕೃತಿಕ ಸಮಾಗಮ ಕಾರ್ಯಕ್ರಮವನ್ನು ಸೆ.28ರಂದು ನಗರದ ಕುವೆಂಪು ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ನೃತ್ಯ ಸಂಯೋಜಕ ನವೀನ ತಿಳಿಸಿದರು.ನಗರದಲ್ಲಿ ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಅಂದು ಸಂಜೆ 5ಕ್ಕೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಸಾನ್ನಿಧ್ಯದಲ್ಲಿ, ಸವಿಡೈನ್ ಹೊಟೆಲ್ ಮಾಲೀಕ ಮಹೇಶ ಶೆಟ್ಟಿ ಅಧ್ಯಕ್ಷತೆಯಲ್ಲಿ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥೆ ಜಸ್ಟೀನ್ ಡಿಸೌಜ ಸಮಾರಂಭ ಉದ್ಘಾಟಿಸುವರು ಎಂದರು.
ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ, ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ ಟಿ.ದಾಸಕರಿಯಪ್ಪ, ಅಮೃತ ಪಿಯು ಕಾಲೇಜಿನ ಪ್ರಾಚಾರ್ಯ ಎನ್.ಸಿ.ವಿವೇಕ್, ಯುವ ಉದ್ಯಮಿ ಕೃಷ್ಣಣ್ಣ, ಶ್ರೀ ವಿನಾಯಕ ಇಂಡಸ್ಟ್ರೀಸ್ ಮಾಲೀಕ ಆಕಾಶ ದೊಂಡರ್ಸೋನೆ, ಜೆ.ಎಚ್.ಪಟೇಲ್ ಕಾಲೇಜಿನ ಮುಸ್ತಾಫ್, ಜ್ಯೋತಿ ಮುಸ್ತಾಫ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು ಎಂದು ಹೇಳಿದರು.ಸಂಗೀತ ತರಬೇತುದಾರ ಚೇತನ್ ಮಾತನಾಡಿ, ಸಮಾರಂಭದ ನಂತರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಆನಂದ್ ಆರ್.ಪಾಟೀಲ ತಂಡ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದೆ. ಅಮೃತ ಪಿಯು ಕಾಲೇಜಿನ ಎಂ.ಮಂದಿರಾ ಭರತ ನಾಟ್ಯ, ಸುನಿಧಿ ಹೆಗಡೆ ಯಕ್ಷಗಾನ, ಮಧು, ಚೇತನ್, ವೀರೇಶ, ತೇಜಯ್ಯ ತಂಡ ವೀರಭದ್ರ ಕುಣಿತ (ವೀರಗಾಸೆ), ನವೀನ ಮತ್ತು ತಂಡ ನೃತ್ಯ ರೂಪಕ ನಡೆಸಿಕೊಡಲಿದೆ ಎಂದು ತಿಳಿಸಿದರು.
ಉಜ್ವಲ್ ಮಾಸ್ಟರ್ರಿಂದ ದಾಂಡಿಯಾ ನೃತ್ಯ ಪ್ರದರ್ಶನವಿದೆ. ನಾಟ್ಯಾಂಜಲಿ ಕಲಾ ತಂಡದಿಂದ ಭರತ ನಾಟ್ಯ, ಎಸ್.ಕೆ.ಅರವಿಂದ ಹೊಳಲ್ಕೆರೆಯವರಿಂದ ಸಿತಾರ ವಾದನ, ಬಸವ ಕಲಾ ಲೋಕದಿಂದ ನಂದಿಧ್ವಜ ಕುಣಿತ ಕಾರ್ಯಕ್ರಮವಿದೆ. ಇಡೀ ಕಾರ್ಯಕ್ರಮಕ್ಕೆ ಉಚಿತ ಪ್ರವೇಶಾವಕಾಶವಿದೆ ಎಂದರು.ಉಪನ್ಯಾಸಕ ಶ್ರೀಧರ ಮಾತನಾಡಿ, ಗುಜರಾತ್, ರಾಜಸ್ಥಾನದಲ್ಲಿ ನಡೆಯುವ ದಾಂಡಿಯಾ ನೃತ್ಯ ಮಾಡಿ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದನ್ನೇ ಇಂದಿನ ಪೀಳಿಗೆ ವಿಜಯ ದಶಮಿ ಹಬ್ಬದ ಆಚರಣೆಯೆಂಬುದಾಗಿ ಅರ್ಥ ಮಾಡಿಕೊಂಡಿದೆ. ಆದರೆ, ಯುವ ಪೀಳಿಗೆಗೆ ದಸರಾ ಹಬ್ಬದ ಮಹತ್ವ ಮತ್ತು ಅಂದು ಆಚರಿಸುವ ಕಾರ್ಯಕ್ರಮ, ಆಚರಣೆಗಳ ಕುರಿತಂತೆ ತಮ್ಮ ಕಾರ್ಯಕ್ರಮದ ಮೂಲಕ ಅರಿವು ಮೂಡಿಸಲಾಗುವುದು ಎಂದರು.
ಸಂಸ್ಥೆಯ ಪದಾಧಿಕಾರಿಗಳಾದ ಗಾಯಕಿ ಮಾನಸ, ನಂದಿನಿ, ಸ್ನೇಹ, ನಂದಿನಿ ಇತರರು ಇದ್ದರು.