ಧಾರವಾಡ: ಕರ್ನಾಟಕ ರಾಜ್ಯ ನಾಮಕರಣ ಸೇರಿದಂತೆ ಅನೇಕ ಮಹತ್ವದ ಘಟ್ಟಗಳನ್ನು ನಿರ್ಮಿಸಿದ ಕೀರ್ತಿ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸುಗೆ ಸಲ್ಲುತ್ತದೆ. ಸಾಮಾಜಿಕ ತಾರತಮ್ಯಗಳನ್ನು ನಿವಾರಿಸಿ, ಸಮಾಜದ ಸರ್ವರಿಗೂ ನ್ಯಾಯ, ಅವಕಾಶಗಳಲ್ಲಿ ಸಮಾನತೆಯನ್ನು ತರಲು ನಿರಂತರವಾಗಿ ಶ್ರಮಿಸಿದ ಸಾಮಾಜಿಕ ನ್ಯಾಯದ ಹರಿಕಾರರಾಗಿ ಅವರು ಇತಿಹಾಸದಲ್ಲಿ ದಾಖಲಾಗಿದ್ದಾರೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.
ಇಲ್ಲಿಯ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾಡಳಿತವು ಬುಧವಾರ ಆಯೋಜಿಸಿದ್ದ ಡಿ. ದೇವರಾಜ ಅರಸ ಅವರ ಜಯಂತಿಯಲ್ಲಿ ಪಾಲ್ಗೊಂಡು ಮಾತನಾಡಿದರು.ರಾಜ್ಯದ ಹಿಂದುಳಿದ ವರ್ಗಗಳಿಗೆ ನ್ಯಾಯಯುತ ಅವಕಾಶಗಳು ದೊರೆಯಲು ಡಿ. ದೇವರಾಜ ಅರಸುರ ಕೊಡುಗೆ ಮುಖ್ಯ. ಅವರ ಆಡಳಿತ ಅವಧಿಯಲ್ಲಿ ಆಯೋಗಗಳ ರಚನೆ, ಕರ್ನಾಟಕ ನಾಮಕರಣ ಸೇರಿದಂತೆ ಅನೇಕ ಮಹತ್ವದ ಕಾರ್ಯಗಳಾಗಿವೆ ಎಂದರು.
ಇಂದಿನ ವ್ಯವಸ್ಥೆಯ ಬದಲಾವಣೆಗೆ ಅವರ ಚಿಂತನೆಗಳು, ಸುಧಾರಣೆಗಳು ಮತ್ತು ಆಡಳಿತಾತ್ಮಕ ಕ್ರಮಗಳು ಅಗತ್ಯವಾಗಿವೆ. ಡಿ. ದೇವರಾಜ ಅರಸು ಅವರು ಹುಟ್ಟಿ 110 ವರ್ಷಗಳಾದರೂ ಅವರನ್ನು ನೆನಪಿಸುತ್ತೇವೆ. ಇದಕ್ಕೆ ಕಾರಣ ಅವರು ಸಮಾಜಕ್ಕೆ ನೀಡಿದ ಕೊಡುಗೆಗಳಾಗಿವೆ ಎಂದವರು ಬಣ್ಣಿಸಿದರು.ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಮಾತನಾಡಿ, ಕರ್ನಾಟಕದಲ್ಲಿ ಸಾಮಾಜಿಕ ನ್ಯಾಯದ ಚಿಂತನೆಗೆ ಬುನಾದಿ ಹಾಕಿದವರು ಡಿ. ದೇವರಾಜ ಅರಸು. ಅವರ ಕಾಲದಲ್ಲಿ ಜಾರಿಗೆ ತಂದ ವಿವಿಧ ಕಲ್ಯಾಣ ಯೋಜನೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.
ಪ್ರೊ. ಶಶಿಧರ ತೊಡಕರ ಹಾಗೂ ಪಾಲಿಕೆಯ ಮಾಜಿ ಮಹಾಪೌರ ಹಾಗೂ ಹಾಲಿ ಸದಸ್ಯ ವಿರೇಶ ಅಂಚಟಗೇರಿ ಡಿ. ದೇವರಾಜ ಅರಸು ಅವರ ಕುರಿತು ಮಾತನಾಡಿದರು. ಡಾ. ವೆಂಕನಗೌಡ ಪಾಟೀಲ ಡಿ. ದೇವರಾಜ ಅರಸುರ ಜೀವನ ಚರಿತ್ರೆ ಕುರಿತು ವಿಶೇಷ ಉಪನ್ಯಾಸ ನೀಡಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಭಾನುಮತಿ ಎಚ್. ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿ ಕುಲಕರ್ಣಿ ನಿರೂಪಿಸಿದರು.ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಜಿಪಂ ಸಿಇಓ ದೀಪಕ ಮಡಿವಾಳರ, ಅಲೆಮಾರಿ ಹಾಗೂ ಅರೇ ಅಲೆಮಾರಿ ಸಮಾಜದ ರಾಜ್ಯಾಧ್ಯಕ್ಷ ಶಿವಾನಂದ ಪಾಟೀಲ, ಗುರುನಾಥ ಹುಲ್ಲೂರ, ಪರಶುರಾಮ ಚುರುಮುರಿ, ಪ್ರಕಾಶ ಬಿಲಾನಾ, ಆನಂದ ಸಿಂಗನಾಥ, ವಸಂತ ಅರ್ಕಾಚಾರಿ ವೇದಿಕೆಮೇಲಿದ್ದರು. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ, ಪದವಿ ಮತ್ತು ಸ್ನಾತಕೋತ್ತರ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಿ, ಗೌರವಿಸಲಾಯಿತು.