ಜಿಲ್ಲೆಗೆ 25 ಟಿಎಂಸಿ ಹೇಮಾವತಿ ಹರಿಸಿದ ದೇವೇಗೌಡರು

KannadaprabhaNewsNetwork |  
Published : May 09, 2026, 01:30 AM IST
8 ಟಿವಿಕೆ 3 – ತುರುವೇಕೆರೆ ತಾಲೂಕು ಕೋಡಿನಾಗಸಂದ್ರ ಟಿಬಿ ಕ್ರಾಸ್ ನ ಮಾರುತಿ ದೇವಾಲಯದ ಉದ್ಘಾಟನೆಗೆ ಆಗಮಿಸಿದ ಕುಮಾರಸ್ವಾಮಿಯವರನ್ನು ಜೆಡಿಎಸ್ ಕಾರ್ಯಕರ್ತನೊಬ್ಬ ಮಾರುತಿ ವೇಷತೊಟ್ಟು ಸ್ವಾಗತಿಸಿದ. | Kannada Prabha

ಸಾರಾಂಶ

ತುಮಕೂರು ಜಿಲ್ಲೆ ಇಂದು ನೀರಾವರಿಯಲ್ಲಿ ಸುಭಿಕ್ಷವಾಗಿದ್ದು ಜಿಲ್ಲೆಗೆ ಹೇಮಾವತಿಯಿಂದ 25 ಟಿಎಂಸಿ ನೀರು ಹರಿಯಲು ಕಾರಣ ಎಚ್.ಡಿ.ದೇವೇಗೌಡರು ಎಂದು ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರದ ಬೃಹತ್ ಕೈಗಾರಿಕಾ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಕನ್ನಡಪ್ರಭವಾರ್ತೆ ತುರುವೇಕೆರೆ

ತುಮಕೂರು ಜಿಲ್ಲೆ ಇಂದು ನೀರಾವರಿಯಲ್ಲಿ ಸುಭಿಕ್ಷವಾಗಿದ್ದು ಜಿಲ್ಲೆಗೆ ಹೇಮಾವತಿಯಿಂದ 25 ಟಿಎಂಸಿ ನೀರು ಹರಿಯಲು ಕಾರಣ ಎಚ್.ಡಿ.ದೇವೇಗೌಡರು ಎಂದು ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರದ ಬೃಹತ್ ಕೈಗಾರಿಕಾ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ತಾಲೂಕಿನ ಕೋಡಿನಾಗಸಂದ್ರ ಟಿಬಿ ಕ್ರಾಸ್ ನಲ್ಲಿ ನೂತನವಾಗಿ ಸುಮಾರು ಒಂದು ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಶ್ರೀ ವಿನಾಯಕ ಮಾರುತಿ ದೇವಾಲಯದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಿಲ್ಲೆಯ ರೈತರ ನೋವು ನಲಿವುಗಳಿಗೆ ನಮ್ಮ ಕುಟುಂಬ ಎಂದೆಂದೂ ಸ್ಪಂದಿಸಿದೆ. ನಾಗಮಂಗಲ ಮತ್ತು ತುರುವೇಕೆರೆ ತಾಲೂಕಿನ ಮಧ್ಯೆ ಒಂದು ಕೈಗಾರಿಕೆಯನ್ನು ಸ್ಥಾಪಿಸಬೇಕೆಂಬ ಆಸೆ ನನ್ನಲ್ಲಿದೆ. ಸುಮಾರು 20 ಸಾವಿರ ಯುವಕರಿಗೆ ಉದ್ಯೋಗ ಕೊಡಬಹುದಾಗಿದೆ. ಆದರೆ ಈ ರಾಜ್ಯ ಸರ್ಕಾರ ಯಾವುದೇ ಆಸಕ್ತಿ ತೋರುತ್ತಿಲ್ಲ ಎಂದು ಬೇಸರಿಸಿದರು.

ನನಗೆ ನಿಮ್ಮ ಸೇವೆ ಮಾಡಬೇಕೆಂಬ ಉದ್ದೇಶದಿಂದಲೇ ದೇವರು ನನಗೆ 5 ಬಾರಿ ಜೀವದಾನ ಮಾಡಿದ್ದಾರೆ. ದೇವಸ್ಥಾನದಲ್ಲಿರುವುದು ಕಲ್ಲು ದೇವರಾದರೆ, ನೀವೇ ನನ್ನ ನಿಜವಾದ ದೇವರುಗಳು. ನಿಮ್ಮಗಳ ಹಾರೈಕೆಯಿಂದ ನಾನು ಇನ್ನೂ ಧೃಢಕಾಯನಾಗಿದ್ದೇನೆ. ದೇವೇಗೌಡರು ಬದುಕಿದ್ದಾಗಲೇ ರೈತರ ಪರವಾದ ಸರ್ಕಾರ ತರಬೇಕೆಂಬ ತಮ್ಮ ಆಸೆಯಿಂದಲೇ ನಿಮ್ಮ ಆಶೀರ್ವಾದದಿಂದ ನನ್ನನ್ನು ಹರಸಿದ್ದಾನೆ ಎಂದು ಕುಮಾರಸ್ವಾಮಿ ಹೇಳಿದರು. ವೇದಿಕೆಯಲ್ಲಿ ಶಾಸಕ ಎಂ.ಟಿ.ಕೃಷ್ಣಪ್ಪ, ಚಿಕ್ಕನಾಯಕನಹಳ್ಳಿ ಶಾಸಕ ಸುರೇಶ್ ಬಾಬು, ಕೆ ಎಂ ಎಫ್ ನಿರ್ದೇಶಕ ಸಿ.ವಿ.ಮಹಲಿಂಗಯ್ಯ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ನಿಂಗಪ್ಪ, ಮಾಜಿ ಶಾಸಕ ತಿಮ್ಮರಾಯಪ್ಪ, ತಾಲೂಕು ಜೆಡಿಎಸ್ ಅಧ್ಯಕ್ಷ ದೊಡ್ಡೇಗೌಡ, ರಾಜ್ಯ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್, ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ಎಂ.ಡಿ.ರಮೇಶ್ ಗೌಡ, ಶಂಕರೇಗೌಡ, ವೆಂಕಟೇಶ್ ಕೃಷ್ಣಪ್ಪ, ರಾಜೀವ್ ಕೃಷ್ಣಪ್ಪ, ಎಐಸಿಸಿ ಸದಸ್ಯ ಸುಬ್ರಮಣಿ ಶ್ರೀಕಂಠೇಗೌಡ, ಲೀಲಾವತಿ ಗಿಡ್ಡಯ್ಯ, ಮಾದಿಹಳ್ಳಿ ಕಾಂತರಾಜ್, ಶ್ರೀ ವಿನಾಯಕ ಮಾರುತಿ ದೇವಾಲಯ ಸಮಿತಿ ಅಧ್ಯಕ್ಷ ಎನ್.ಲೋಕೇಶ್, ಉಪಾಧ್ಯಕ್ಷ ಕೆ.ರಘು, ಹನುಮಂತರಾಜು. ಕಾರ್ಯದರ್ಶಿ ಜಿ.ಡಿ. ಗಂಗಾಧರಯ್ಯ ಖಜಾಂಚಿ ಎಸ್.ಎನ್.ಚಂದ್ರಶೇಖರ್ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

ಮಾರುತಿ ವೇಷದಾರಿ – 31 ಅಡಿ ಎತ್ತರದ ಮಾರುತಿ ಪ್ರತಿಮೆಯ ಉದ್ಘಾಟನೆಗೆ ಕುಮಾರಸ್ವಾಮಿ ಬರುತ್ತಿದ್ದಂತೆ ಮಾರುತಿಯ ವೇಷದಾರಿ ಜೆಡಿಎಸ್ ಕಾರ್ಯಕರ್ತ ಅವರನ್ನು ಸ್ವಾಗತಿಸಿದ್ದು ಕಂಡು ಬಂತು. ಮಲ್ಲದೇವನಹಳ್ಳಿಯ ಶ್ರೀನಿವಾಸ್ ಎಂಬ ವಿದ್ಯಾರ್ಥಿ ಕುಮಾರಸ್ವಾಮಿಯವರ ಚಿತ್ರವನ್ನು ಪೆನ್ಸಿಲ್ ನಲ್ಲಿ ಚಿತ್ರಿಸಿ ಅವರಿಗೆ ಕೊಡುಗೆ ನೀಡಿದ. ಸಾಕಷ್ಟು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಧಾರ್ಮಿಕ ಕಾರ್ಯಕ್ರಮದಲ್ಲಿ ರಾಜಕೀಯ ಕೆಸೆರೆರಚಾಟ

ಕುಮಾರಸ್ವಾಮಿ ವೇದಿಕೆ ಮೇಲೆ ಇದ್ದಾಗ ಮತ್ತು ಭಾಷಣ ಮಾಡಲು ಆರಂಭಿಸಿದಾಗ ಶಾಸಕ ಎಂ.ಟಿ.ಕೃಷ್ಣಪ್ಪನವರ ಬೆಂಬಲಿಗರು ಮತ್ತು ಮತ್ತೊಬ್ಬ ಜೆಡಿಎಸ್ ಟಿಕೇಟ್ ಆಕಾಂಕ್ಷಿ ರಾಜ್ಯ ಯುವ ಜೆಡಿಎಸ್ ನ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್ ರವರ ಅಭಿಮಾನಿಗಳು ಅವರವರ ಪರ ಜಯಕಾರ ಹಾಕುತ್ತಿದ್ದರು. ಭಾಷಣ ಕೇಳದ ಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ಬೇಸರಗೊಂಡ ಕುಮಾರಸ್ವಾಮಿ ತಾಲೂಕಿನಲ್ಲಿ ಜೆಡಿಎಸ್ ಪಕ್ಷದಲ್ಲಿ ಗೊಂದಲ ಶುರುವಾಗಿದೆ. ದಯಮಾಡಿ ಯಾರೂ ಗೊಂದಲಕ್ಕೆ ಅವಕಾಶ ಮಾಡಿಕೊಡಬೇಡಿ. ನನಗೆ ಪ್ರತಿಯೊಂದು ಕ್ಷೇತ್ರವೂ ಮುಖ್ಯವಾಗಿದೆ. ಕಷ್ಟಕಾಲದಲ್ಲಿ ಕೈಹಿಡಿದಿರುವ ನೀವು ಕುಮಾರಣ್ಣನಿಗೇ ಮತ ನೀಡುತ್ತಿರುವುದು ಎಂದು ತಿಳಿದುಕೊಳ್ಳಬೇಕು. ಕೃಷ್ಣಪ್ಪನವರನ್ನು ನಾನು 25 ವರ್ಷದಿಂದಲೂ ಬಲ್ಲೆ. ಅವರು ಪಕ್ಷಕ್ಕೆ ಅತ್ಯಂತ ನಿಷ್ಠಾವಂತರು. ಟಿಕೆಟ್ ಯಾರಿಗೆ ಕೊಡಬೇಕು ಎಂದು ಗೊತ್ತಿದೆ. ಪಕ್ಷಕ್ಕೆ ತೊಂದರೆಯುಂಟಾಗದಂತೆ ಪಕ್ಷದ ನಾಯಕರು ನೋಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಕುಮಾರಸ್ವಾಮಿ ಸಭೆಯಲ್ಲಿ ಮಾತನಾಡಿ ಸಭೆಯಿಂದ ಹೊರ ಹೋಗುತ್ತಿದ್ದಂತೆ ಶಾಸಕ ಎಂ.ಟಿ.ಕೃಷ್ಣಪ್ಪ ಮತ್ತು ದೊಡ್ಡಾಘಟ್ಟ ಚಂದ್ರೇಶ್ ರವರ ಅಭಿಮಾನಿಗಳು ತಮ್ಮ ನಾಯಕರ ಪರ ಜಯಕಾರ ಹಾಕತೊಡಗಿದರು. ಟಿ.ಬಿ.ಕ್ರಾಸ್ ನ ಸರ್ಕಲ್ ನಲ್ಲಿ ಎರಡೂ ಕಡೆಯವರು ಪರಸ್ಪರ ಕೂಗಾಟದಲ್ಲಿ ತೊಡಗಿದರು. ಕೃಷ್ಣಪ್ಪನವರ ಅಭಿಮಾನಿಗಳು ಜೆಡಿಎಸ್ ಮುಖಂಡ ತ್ಯಾಗರಾಜ್ ಮತ್ತು ಮಾದಿಹಳ್ಳಿ ಕಾಂತರಾಜ್ ರವರನ್ನು ಹೆಗಲ ಮೇಲೆ ಹೊತ್ತು ದೇವೇಗೌಡ, ಕುಮಾರಸ್ವಾಮಿ ಮತ್ತು ಎಂ.ಟಿ.ಕೃಷ್ಣಪ್ಪನವರ ಪರ ಘೋಷಣೆ ಕೂಗಿದರು. ದೊಡ್ಡಾಘಟ್ಟ ಚಂದ್ರೇಶ್ ಅಭಿಮಾನಿಗಳು ಚಂದ್ರೇಶ್ ರನ್ನು ಹೆಗಲ ಮೇಲೆ ಹೊತ್ತು ಘೋಷಣೆ ಕೂಗಿದರು. ಅರ್ಧಗಂಟೆಗೂ ಹೆಚ್ಚು ಕಾಲ ಈರ್ವ ಮುಖಂಡರ ಅಭಿಮಾನಿಗಳ ಘೋಷಣೆ ಪರಾಕಾಷ್ಠೆ ಮುಟ್ಟಿತು. ಪೊಲೀಸರು ಈರ್ವ ಅಭಿಮಾನಿಗಳನ್ನು ಸಮಾಧಾನಪಡಿಸಲು ಹರಸಾಹಸ ಪಡಬೇಕಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಳವಾಡಿಯಲ್ಲಿ ಅಂಬೇಡ್ಕರ್‌ ಪುತ್ಥಳಿ ಅನಾವರಣ
ಸಂಬಳ ಹೆಚ್ಚಳಕ್ಕೆ ಒತ್ತಾಯಿಸಿ ಶಾಹಿ ಕಂಪನಿ ಕಾರ್ಮಿಕರ ಪ್ರತಿಭಟನೆ