ಯಲಬುರ್ಗಾ: ಯುವಕರು ದೇಶ ಪ್ರೇಮಿ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನವರಂತೆ ಹೋರಾಟದ ಮನೋಭಾವ ಬೆಳೆಸಿಕೊಂಡು ಅವರ ತತ್ವಾರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹಾಲುಮತ ಸಮಾಜ ತಾಲೂಕಾಧ್ಯಕ್ಷ ವೀರನಗೌಡ ಬಳೂಟಗಿ ಹೇಳಿದರು.
ತಾಲೂಕಿನ ಬಸಪೂರ ಗ್ರಾಮದಲ್ಲಿ ಶುಕ್ರವಾರ ಶ್ರೀ ಸಂಗೊಳ್ಳಿ ರಾಯಣ್ಣನ ಮೂರ್ತಿಗೆ ರುದ್ರಾಭಿಷೇಕ ನಂತರ ಕುಂಭ ಮೆರವಣಿಗೆ ನಂತರ ಶ್ರೀ ರಾಯಣ್ಣ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸಂಗೋಳ್ಳಿ ರಾಯಣ್ಣ ಮಹಾನ್ ಹೋರಾಟಗಾರ, ಇಂದಿನ ಯುವಕರಿಗೆ ಸ್ಫೂರ್ತಿ ಎಂದರು.ಕ್ರಾಂತಿವೀರ ಸಂಗೋಳಿ ರಾಯಣ್ಣ ಹುಟ್ಟಿದ್ದು ಮತ್ತು ನಮ್ಮ ಭಾರತಕ್ಕೆ ಸ್ವಾತಂತ್ರ್ಯ ಬಂದದ್ದು ಆಗಷ್ಟ್ ೧೫ಕ್ಕೆ. ಗಲ್ಲಿಗೇರಿಸಿದ್ದು ಜನವರಿ ೨೬ ಗಣರಾಜ್ಯೋತ್ಸವದ ದಿನ. ಆದರೆ, ರಾಯಣ್ಣ ತನ್ನ ಕೊನೆಯ ಆಸೆ ಯಾವುದೆಂದು ಕೇಳಿದಾಗ ಮತ್ತೆ ನಾನು ಈ ದೇಶದಲ್ಲಿ ಜನ್ಮ ತಾಳಿ ಈ ಪುಣ್ಯ ಭೂಮಿಯಿಂದ ಬ್ರಿಟೀಷರ ವಿರುದ್ಧ ಹೋರಾಟ ಮುಂದವರಿಸುತ್ತೇನೆಂದು ದೇಶ ಪ್ರೇಮ ಮೆರೆದ ಒಬ್ಬ ಧೀಮಂತ ಮಹಾನಾಯಕ ಎಂದು ಹೇಳಿದರು.
ಕನಕಗುರುಪೀಠ ಕಾಗಿನೆಲೆ ಮಹಾಸಂಸ್ಥಾನ ಮಠದ ಶ್ರೀಸಿದ್ಧರಾಮಾನಂದ ಪುರಿ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಮಾತನಾಡಿ, ಬ್ರಿಟೀಷರ ವಿರುದ್ಧ ಕೆಚ್ಚದೆಯಿಂದ ಹೋರಾಡಿದ ಸಂಗೊಳ್ಳಿ ರಾಯಣ್ಣ, ದೇಶದ ಸ್ವಾತಂತ್ರ್ಯಕ್ಕಾಗಿ ತನ್ನ ಪ್ರಾಣ ಅರ್ಪಿಸಿದ ಕೆಚ್ಚದೆಯ ಕ್ರಾಂತಿವೀರ. ಇಂದಿನ ಯುವಕರಿಗೆ ಆದರ್ಶಪ್ರಾಯ ಎಂದರು.ಕಲಬುರಗಿ ವಿಭಾಗದ ತಿಂಥಣಿ ಬ್ರಿಜ್ ಕನಕ ಪೀಠ ಕಾಗಿನೆಲೆ ಮಹಾ ಸಂಸ್ಥಾನದ ಶ್ರೀ ಸಿದ್ಧರಾಮನಂದ ಮಹಾಸ್ವಾಮೀಜಿ ಮಾತನಾಡಿ, ಹಾಲುಮತ ಸಮಾಜದ ಸಂಸ್ಕೃತಿ, ಆಚಾರ-ವಿಚಾರ, ಪರಂಪರೆ ಉಳಿಸಿ ಬೆಳೆಸುವ ಮೂಲಕ ಯುವ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡಲು ಹಾಲುಮತ ಸಮಾಜದ ಬಾಂಧವರು ಮುಂದಾಗಬೇಕು ಎಂದು ಕರೆ ನೀಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ನವೀನಕುಮಾರ ಗುಳಗಣ್ಣನವರ ಮಾತನಾಡಿದರು. ಅತಿಥಿಗಳಾಗಿ ಕುದರಿಮೋತಿಯ ಶ್ರೀ ವಿಜಯಮಹಾಂತ ಮಹಾಸ್ವಾಮಿಗಳು, ಬಾದಿಮನಾಳ ಹಾಲವರ್ತಿಯ ಶ್ರೀ ಶಿವಶಿದ್ದೇಶ್ವರ ಮಹಾಸ್ವಾಮಿಗಳು, ಕೊರಡಕೇರಾದ ಶ್ರೀ ಮಳಿಯಪ್ಪಯ್ಯ ಗುರುವಿನ, ಶ್ರೀ ಅರಳಯ್ಯ ಮ ಹಿರೇಮಠ, ಬಂಡಿ ಗ್ರಾಪಂ ಅಧ್ಯಕ್ಷೆ ರತ್ನಮ್ಮ ವಣಗೇರಿ, ಪಪಂ ಅಧ್ಯಕ್ಷ ಅಂದಯ್ಯ ಕಳ್ಳೀಮಠ, ಪಪಂ ಸದಸ್ಯ ವಸಂತ ಬಾವಿಮನಿ, ದೊಡ್ಡಯ್ಯ ಗುರುವಿನ, ಶರಣಪ್ಪ ಮುಧೋಳ. ಸುಬ್ಬನಗೌಡ ಪೊಲೀಸ್ ಪಾಟೀಲ, ಗುತ್ತಿಗೆದಾರ ಶೇಖಪ್ಪ ವಣಗೇರಿ, ಮಹಮ್ಮದಸಾಬ ತಾಳಿಕೋಟಿ, ಬಸವರಾಜ ಹಾದಿಮನಿ ಸೇರಿದಂತೆ ಗ್ರಾಮದ ಹಿರಿಯರು, ಮಹಿಳೆಯರು, ಯುವಕರು ಇದ್ದರು.