ಕನ್ನಡಪ್ರಭ ವಾರ್ತೆ ಹರಪನಹಳ್ಳಿ
ಗ್ರಾಪಂ ಅಧ್ಯಕ್ಷ ಪಿ.ಟಿ. ಭರತ್ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಆಟದಲ್ಲಿ ವಿವಿಧ ರೀತಿಯ ಬಹಳಷ್ಟು ಆಟಗಳಿವೆ ಹಾಗೂ ಸರ್ಕಾರದಿಂದ ಕ್ರೀಡೆಗೆ ಬಹಳಷ್ಟು ಸೌಲಭ್ಯಗಳಿವೆ ಹಾಗೂ ಊರಿನವರ ಸಹಕಾರವೂ ಇದೆ. ಸೌಲಭ್ಯ ಸದುಪಯೋಗ ಪಡಿಸಿಕೊಂಡು ಪ್ರತಿಯೊಬ್ಬ ಆಟಗಾರರು ಶಿಸ್ತಿನಿಂದ ಆಟ ಆಡಬೇಕು, ತೀರ್ಪುಗಾರರ ತೀರ್ಪೆ ಅಂತಿಮವಾಗಿರುತ್ತದೆ. ಸೋಲು- ಗೆಲುವು ಸಹಜ, ಇಂದಿನ ಸೋಲೇ ನಾಳೆನ ಗೆಲುವಿಗೆ ಮೆಟ್ಟಿಲಾಗುತ್ತದೆ ಎಂದ ಅವರು, ನಾಯಕತ್ವ ಗುಣ, ಆಟದ ಕೌಶಲ್ಯ ಇದ್ದರೆ ಯಾವುದಾದರು ಸ್ಥಾನ ಸಿಕ್ಕೇ ಸಿಗುತ್ತದೆ ಎಂದು ಹೇಳಿದರು.
ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಷಣ್ಮುಖಪ್ಪ ಮಾತನಾಡಿ, ಶಿಕ್ಷಣ ನಾಲ್ಕು ಗೋಡೆಗಳ ಮಧ್ಯೆ ಸಿಕ್ಕರೆ ಉತ್ತಮ ಜ್ಞಾನ ಸಿಗುತ್ತದೆ, ವೃತ್ತಿಗೆ ಮಾತ್ರ ಸೀಮಿತವಾಗಿರುತ್ತದೆ. ದೈಹಿಕ ಶಿಕ್ಷಣ ಜೀವನ ಕೌಶಲ್ಯವನ್ನು ಹೊಂದಿರುತ್ತದೆ. ಮಗುವಿನ ಸರ್ವತೋಮುಖ ಅಭಿವೃದ್ಧಿಯಾಗಬೇಕಾದರೆ ಕ್ರೀಡೆ ಬಹಳ ಮುಖ್ಯ. ಯಾವ ವ್ಯಕ್ತಿ ಸದೃಢನಾಗಿರುತ್ತಾನೋ ಅಂತವನು ಮಾತ್ರ ಜೀವನ ಕೌಶಲ್ಯ ಹೊಂದಿರುತ್ತಾನೆ ಎಂದು ಹೇಳಿದರು.ದೈಹಿಕ ಶಿಕ್ಷಕಿ ಸಿ.ಎಂ. ಪ್ರತಿಭಾ ಪ್ರತಿಜ್ಞಾವಿಧಿ ಬೋಧಿಸಿದರು. ಪಥಸಂಚಲನವನ್ನು ವಲಯ ಸಂಚಾಲಕ ಲಕ್ಯಾ ನಾಯ್ಕ್ ನಡೆಸಿದರು.
ಈ ಸಂದರ್ಭ ಎಸ್ಡಿಎಂಸಿ ಅಧ್ಯಕ್ಷ ರಮೇಶ್ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ಪಿಎಸ್ಐ ವಿಜಯ ಕೃಷ್ಣ, ಎಎಸ್ಐ ಪೀಕ್ಯಾ ನಾಯ್ಕ್, ಗುರುರಾಜ್, ಶಿವಪ್ರಕಾಶ್, ವಿಷ್ಣು, ಮುಖ್ಯ ಶಿಕ್ಷಕ ರವಿ ಕೆ., ಉಪನ್ಯಾಸಕ ರಾಮಚಂದ್ರಪ್ಪ, ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಜಯರಾಜ್, ಪಿಡಿಒ ರವೀಂದ್ರ ಜಿ., ಎಲ್ಲಾ ಶಾಲೆಯ ಮುಖ್ಯ ಗುರುಗಳು, ದೈಹಿಕ ಶಿಕ್ಷಕರು, ಸಹ ಶಿಕ್ಷಕರು, ಗ್ರಾಮಸ್ಥರು ಹಾಗೂ ಶಾಲಾ ಮಕ್ಕಳು ಭಾಗವಹಿಸಿದ್ದರು.