)
ಕನ್ನಡಪ್ರಭ ವಾರ್ತೆ ಸಿಂದಗಿ
ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದಲ್ಲಿ 2025-26ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಸಂಘ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪ್ರಪಂಚದ ಯಾವುದೇ ಮೂಲದಿಂದ ಬಂದ ಜ್ಞಾನ ಸ್ವೀಕರಿಸಬಹುದು. ಆದರೆ, ಅದನ್ನು ಪ್ರಶ್ನಿಸಿ, ಪರಿಶೀಲಿಸಿ, ಅರ್ಥೈಸಿಕೊಂಡು ಮಾತ್ರ ಒಪ್ಪಿಕೊಳ್ಳಬೇಕು. ಯಾರೂ ಹೇಳಿದ ವಿಷಯವನ್ನು ಕಣ್ಣುಮುಚ್ಚಿ ನಂಬಬಾರದು ಎಂದರು.ಶಿಕ್ಷಣವೆಂದರೆ ಕೇವಲ ಮಾಹಿತಿ ನೀಡುವುದಲ್ಲ. ವಿದ್ಯಾರ್ಥಿಯೊಳಗಿನ ಶಕ್ತಿಯನ್ನು ಹೊರ ತೆಗೆಯುವುದೇ ನಿಜವಾದ ಶಿಕ್ಷಣ. ಸಿದ್ಧಾರ್ಥನು ಪ್ರಶ್ನಿಸುವ ಮೂಲಕ ಬುದ್ಧನಾದನು. ನರೇಂದ್ರ ಎಂಬ ವಿದ್ಯಾರ್ಥಿ ಪ್ರಶ್ನಿಸುವ ಮನೋಭಾವದಿಂದಲೇ ಸ್ವಾಮಿ ವಿವೇಕಾನಂದನಾಗಿ ವಿಶ್ವಮಾನ್ಯನಾದನು ಎಂದು ಉದಾಹರಣೆಗಳ ಮೂಲಕ ವಿವರಿಸಿದರು.ಪುಸ್ತಕದಲ್ಲಿರುವ ವಿಷಯವನ್ನು ಯಥಾವತ್ತಾಗಿ ಒಪ್ಪಿಕೊಳ್ಳುವುದು ಸೂಕ್ತವಲ್ಲ. ಪ್ರಶ್ನಿಸುವುದರಿಂದಲೇ ಜ್ಞಾನಕ್ಕೆ ಆಳ ಬರುತ್ತದೆ. ವಿದ್ಯಾರ್ಥಿಗಳು ದೊಡ್ಡ ಹುದ್ದೆಗಳಿಗೆ ತಲುಪುವುದನ್ನು ನೋಡುವುದೇ ಶಿಕ್ಷಕರಿಗೆ ನಿಜವಾದ ಹೆಮ್ಮೆ. ಶಿಕ್ಷಕ ಎಂದರೆ ಸದಾ ವಿದ್ಯಾರ್ಥಿಯೇ; ಜೀವನದ ಕೊನೆಯವರೆಗೂ ಕಲಿಯುವ ಮನೋಭಾವ ಇರಬೇಕು ಎಂದು ತಿಳಿಸಿದರು.ಅಶೋಕ್ ಜಿ.ವಾರದ್ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ದೇಶ ಉದ್ಧಾರವಾಗಬೇಕಾದರೇ ಅದು ಮಹಿಳೆಯರಿಂದಲೇ ಸಾಧ್ಯ. ಜಗತ್ತಿನ ಒಟ್ಟು ಯುವಶಕ್ತಿಯಲ್ಲಿ ಶೇ.35ರಷ್ಟು ಯುವಶಕ್ತಿ ಭಾರತದಲ್ಲಿದೆ. ಆದರೆ, ನಮ್ಮಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮನೋಭಾವಗಳ ಕೊರತೆ, ಗುರುಗಳ ಬಗ್ಗೆ ಗೌರವದ ಅಭಾವ ದೇಶ ಹಿಂದುಳಿಯಲು ಕಾರಣವಾಗುತ್ತಿದೆ ಎಂದರು.ಭಾರತೀಯ ಆಹಾರ ಪದ್ಧತಿ, ಕ್ರೀಡೆಗಳು ಹಾಗೂ ಪರಂಪರ ದೇಶಿಯ ಆಟಗಳನ್ನು ರೂಢಿಸಿಕೊಳ್ಳಬೇಕು. ಸರ್ವರಂಗದಲ್ಲಿಯೂ ಶ್ರೇಷ್ಠತೆಯನ್ನು ಸಾಧಿಸಿರುವ ದೇಶವೆಂದರೇ ಅದು ಭಾರತ. ಸಂಸ್ಕಾರವಂತ, ವಿದ್ಯಾವಂತ ಮಕ್ಕಳ ನಿರ್ಮಾಣ ವಾಗಬೇಕು. ಗುರು-ಹಿರಿಯರಿಗೆ ಗೌರವ ನೀಡಬೇಕು. ಮಠ-ಮಾನ್ಯಗಳಿಗೆ ಹೋಗುವುದು ಮೂಢನಂಬಿಕೆ ಅಲ್ಲ; ಅದು ಮೂಲ ನಂಬಿಕೆಯಾಗಿದೆ. ಅದು ಗುರುಗಳ ಮೇಲಿನ ಶ್ರದ್ಧೆ ಮತ್ತು ಭಕ್ತಿಯ ಪ್ರತೀಕ ಎಂದು ತಿಳಿಸಿದರು.ಡಾ.ವಿಶ್ವ ಪ್ರಭುದೇವ ಶಿವಾಚಾರ್ಯರು ಮಾತನಾಡಿ, ಒಳ್ಳೆಯ ಶಿಕ್ಷಕರಾಗಬೇಕಾದರೇ ಜ್ಞಾನ ಎಂಬ ಸ್ಥಿರ ನಿಕ್ಷೇಪ (ಎಫ್ಡಿ) ಇರಲೇಬೇಕು. ಸಿಕ್ಕಸಿಕ್ಕವರೆಲ್ಲ ಶಿಕ್ಷಕರಾಗಲು ಸಾಧ್ಯವಿಲ್ಲ. ಮನಸ್ಸಿನಲ್ಲಿ ಸದಾ ಒಳ್ಳೆಯ ವಿಚಾರಗಳನ್ನು ತುಂಬಿಕೊಳ್ಳಬೇಕು. ಪ್ರತಿಯೊಬ್ಬರೊಳಗೂ ಅಗಾಧ ಶಕ್ತಿ ಅಡಗಿದೆ. ಅದನ್ನು ಯಾವ ದಿಕ್ಕಿನಲ್ಲಿ ಬಳಸುತ್ತೇವೋ ಅದೇ ನಮ್ಮ ಜೀವನವನ್ನು ರೂಪಿಸುತ್ತದೆ ಎಂದರು.ಡಾ.ಪ್ರಭು ಸಾರಂಗದೇವ ಶಿವಾಚಾರ್ಯರು ಆಶೀರ್ವಚನ ನೀಡಿ, ಒಳ್ಳೆಯ ಮಾತುಗಳು ಮನಸ್ಸನ್ನು ತಾಜಾ ಮಾಡುತ್ತವೆ. ವಿದ್ಯಾರ್ಥಿಗಳು ಜ್ಞಾನಾಸಕ್ತರಾಗಬೇಕು. ಇಂದಿನ ಸಮಾಜದಲ್ಲಿ ಒಳ್ಳೆಯ ಶಿಕ್ಷಕರ ಕೊರತೆ ಇದೆ. ಶಿಕ್ಷಕರಾದವರು ತಮ್ಮ ವೃತ್ತಿಗೆ ಸಂಪೂರ್ಣ ಬದ್ಧತೆ ಹೊಂದಬೇಕು. ವಿದ್ಯಾರ್ಥಿಗಳು ಒಳ್ಳೆಯ ಕಾರ್ಯಗಳು ಮತ್ತು ಉತ್ತಮ ಜ್ಞಾನದಿಂದ ತಮ್ಮ ಭವಿಷ್ಯ ಕಟ್ಟಿಕೊಳ್ಳಬೇಕು ಎಂದರು.ಪ್ರಾಚಾರ್ಯ ಜೆ.ಸಿ.ನಂದಿಕೋಲ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಪ್ರಮಾಣ ವಚನ ಬೋಧಿಸಿದರು. ಉಪನ್ಯಾಸಕ ದಾನಯ್ಯ ಮಠಪತಿ ಸ್ವಾಗತಿ, ಪರಿಚಯಿಸಿದರು.ಈ ಸಂದರ್ಭದಲ್ಲಿ 2024-25ನೇ ಸಾಲಿನಲ್ಲಿ ಕಾಲೇಜಿಗೆ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಾದ ಭಾಗ್ಯಶ್ರೀ ಹತ್ತರಕಿ, ನಾಗೇಶ್ ರಾಥೋಡ್ ಹಾಗೂ ಪ್ರಸಾದ್ ಹೂಗಾರ್ ಅವರನ್ನು ಪೂಜ್ಯರು ಸನ್ಮಾನಿಸಿದರು. ಕು.ಚಾಂದಿನಿ ಮುಲ್ಲಾ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಪ್ರಶಾಂತ್ ಕುಲಕರ್ಣಿ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಆಡಳಿತಾಧಿಕಾರಿಗಳಾದ ಬಿ.ಜಿ.ಹಿರೇಮಠ, ವಿವೇಕಾನಂದ ಹಿರೇಮಠ, ರವಿ ಗೋಲಾ, ಅಶೋಕ್ ಬಿರಾದಾರ, ಡಾ.ಸುಧಾಕರ ಚವಾಣ್, ಭಾಗ್ಯ ಜ್ಯೋತಿ ದಾಸ್ಮಾ, ನಾಜಿಯಾ ಮುಲ್ಲಾ, ಚನ್ನು ಕತ್ತಿ ಸೇರಿದಂತೆ ಬೋಧಕ–ಬೋಧಕೇತರ ಸಿಬ್ಬಂದಿ ಹಾಗೂ ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು.