ಪುಟ..2 ಲೀಡ್‌ಪುಣ್ಯಕ್ಷೇತ್ರವನ್ನು ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿ

KannadaprabhaNewsNetwork | Published : May 4, 2025 1:32 AM

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಹಾಲುಮತ ಸಮುದಾಯದವರು ತಮ್ಮ ಶ್ರದ್ಧೆ, ಭಕ್ತಿ, ನಂಬಿಕೆ ಮತ್ತು ಸಂಸ್ಕೃತಿಯನ್ನು ನಿಸ್ವಾರ್ಥದಿಂದ ಮುಂದುವರಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಹಾಲುಮತ ಸಮುದಾಯದವರು ತಮ್ಮ ಶ್ರದ್ಧೆ, ಭಕ್ತಿ, ನಂಬಿಕೆ ಮತ್ತು ಸಂಸ್ಕೃತಿಯನ್ನು ನಿಸ್ವಾರ್ಥದಿಂದ ಮುಂದುವರಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.

ತಿಕೋಟಾ ತಾಲೂಕಿನ ಬಾಬಾನಗರದಲ್ಲಿ ಶ್ರೀನಗರ ಸಿದ್ಧೇಶ್ವರ ದೇವಸ್ಥಾನದ ನೂತನ ಕಟ್ಟಡ ಉದ್ಘಾಟನೆ, ಕಳಸಾರೋಹಣ ಹಾಗೂ ಪ್ರಾಣ ಪ್ರತಿಷ್ಠಾಪನೆ, ಕುಂಭಮೇಳ, ಜಾತ್ರಾ ಮಹೋತ್ಸವಗಳನ್ನು ಉದ್ಘಾಟಿಸಿ ಮಾತನಾಡಿದರು. ಸಿಎಂ ಸಿದ್ದರಾಮಯ್ಯವರಿಗೆ ಪೂರ್ವನಿಗದಿತ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಬರಲು ಆಗಿಲ್ಲ. ಆದರೆ, ಮುಂಬರುವ ದಿನಗಳಲ್ಲಿ ಸಿಎಂ ಅವರನ್ನು ಆಹ್ವಾನಿಸಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಭರವಸೆ ನೀಡಿದರು.

ಶ್ರೀನಗರ ಸಿದ್ಧೇಶ್ವರ ಪುರಾತನ ದೇವಸ್ಥಾನವನ್ನು ರೈತರು ದುಡಿದ ಹಣ ಕೂಡಿಸಿ ಅಭಿವೃದ್ಧಿ ಮಾಡಿದ್ದಾರೆ. ಮಖಣಾಪುರ, ಅಮೋಘಸಿದ್ಧ, ಬಾಬಾನಗರ ಸೇರಿದಂತೆ ಇನ್ನುಳಿದ ಪುಣ್ಯಕ್ಷೇತ್ರಗಳನ್ನು ಧಾರ್ಮಿಕ ಪ್ರವಾಸೋದ್ಯಮ ತಾಣಗಳಾಗಿ ಅಭಿವೃದ್ಧಿ ಪಡಿಸಲಾಗುವುದು. ನಾವು ಭಂಡಾರದಲ್ಲಿ ಭಕ್ತಿಯನ್ನು ಕಾಣುತ್ತೇವೆ. ಭಗೀರಥನ ಆಶೀರ್ವಾದ ಶ್ರೀಸಿದ್ಧೇಶ್ವರ ಸ್ವಾಮೀಜಿ ಪ್ರೇರಣೆ ಹಾಗೂ ಸಿಎಂ ಸಿದ್ಧರಾಮಯ್ಯರ ಸಹಕಾರದಿಂದ ಈ ಭಾಗದಲ್ಲಿ ನೀರಾವರಿ ಮಾಡಿದ್ದು, ದ್ರಾಕ್ಷಿನಾಡು ಬಾಬಾನಗರದ ರೈತರು ಈಗ ಕಬ್ಬನ್ನೂ ಬೆಳೆಯುತ್ತಿದ್ದಾರೆ. ಕೆರೆ, ಹಳ್ಳಗಳಿಗೆ ನೀರು ಹರಿಸಿದ ಪರಿಣಾಮ ಅಂತರ್ಜಲ ಹೆಚ್ಚಾಗಿದೆ. ಭೂಮಿಗೆ ಬಂಗಾರದ ಬೆಲೆ ಬಂದಿದ್ದು, ಯಾರೂ ಮಾರಾಟ ಮಾಡಬೇಡಿ ಎಂದು ಕರೆ ನೀಡಿದರು.

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಮಾತನಾಡಿ, ಎಂ.ಬಿ.ಪಾಟೀಲರ ಜೊತೆ ಸಿಎಂ ಸಿದ್ಧರಾಮಯ್ಯ ಇದ್ದಾರೆ. ಸಚಿವ ಎಂ.ಬಿ.ಪಾಟೀಲರು ಜಿಲ್ಲೆಯ ಜನರ ಜೀವನ ಬದಲಿಸಿದ್ದಾರೆ. ಅವರ ನೀರಾವರಿ ಕೆಲಸಗಳಿಂದ ಜನರಷ್ಟೇ ಅಲ್ಲ, ಪ್ರಾಣಿ, ಪಕ್ಷಿಗಳಿಗೂ ಉಪಯೋಗವಾಗಿದ್ದು, ಮೂಕಜೀವಿಗಳ ಆಶೀರ್ವಾದ ಸಚಿವರ ಮೇಲಿದೆ. ಮಹಿಳೆಯರು ಸಾಮಾಜಿಕ ಜಾಲತಾಣಗಳ ಬಗ್ಗೆ ಎಚ್ಚರದಿಂದಿರಬೇಕು. ಗೊತ್ತಿಲ್ಲದವರ ಸಂಗ ಮಾಡಬಾರದು. ರೀಲ್ಸ್ ಬದಲು ಓದಿನ ಕಡೆ ಗಮನ ಹರಿಸಿ. ಸಮುದಾಯದ ಎಲ್ಲರೂ ಓದಿ ಉನ್ನತ ಸ್ಥಾನ ಗಳಿಸಬೇಕು. ಅನ್ಯಾಯವಾದಾಗ ಧನಿ ಎತ್ತಬೇಕು. ಹೆಣ್ಣು ಮಕ್ಕಳಿಗೆ ಆಸ್ತಿ, ಬಂಗಾರದ ಬದಲು ಶಿಕ್ಷಣ ಕೊಡಿಸುವಂತೆ ಕಿವಿಮಾತು ಹೇಳಿದರು.

ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿದರು. ಈ ಸಂದರ್ಭದಲ್ಲಿ ಸರೂರಿನ ರೇವಣಸಿದ್ಧೇಶ್ವರ ಹಾಲುಮತ ಗುರುಪೀಠದ ಜಗದ್ಗುರು ಸಿದ್ದಯ್ಯ ಮಹಾಸ್ವಾಮಿಗಳು, ಮೃತ್ಯುಂಜಯ ಮಹಾಸ್ವಾಮಿಗಳು, ಕವಲಗುಡ್ಡದ ಸಿದ್ಧಯೋಗಿ ಅಮರೇಶ್ವರ ಮಹಾಸ್ವಾಮಿಗಳು, ಶ್ರೀ ನಗರ ಸಿದ್ದೇಶ್ವರ ಗದ್ದುಗೆ ಪೂಜಾರಿ ಹೊನ್ನಪ್ಪ ಶಿವರಾಯ ಪೂಜಾರಿ, ಚಿಕ್ಕಲಕಿಯ ಗುರುಮತ್ಯಾ, ಗದುಗಿನ ಚಿಕ್ಕನಂದಿಗೋಳ ಸಿದ್ದಾಶ್ರಮದ ಅಭಿನವ ವೀರೇಶ್ವರ ಗುರೂಜಿ, ಬಾಬಾ ನಗರ ಹಿರೇಮಠದ ರಾಚಯ್ಯ ಮಹಾಸ್ವಾಮಿಗಳು, ಬಳಬಟ್ಟಿ ಅಮರಸಿದ್ಧ ಮಹಾರಾಜರು, ಮುಖಂಡರಾದ ಸಿದ್ದು ಗೌಡನವರ, ಈರನಗೌಡ ರುದ್ರಗೌಡರ, ಸೋಮನಾಥ ಬಾಗಲಕೋಟ, ಸೋಮನಾಥ ಕಳ್ಳಿಮನಿ, ಶಿಲ್ಪಾ ಕುದರಗೊಂಡ, ಬೀರಮಪ್ಪ ಜುಮನಾಳ, ತಾಸಗಾಂವ ಝಾನ್ಸಿ ಕೋಲ್ಡ್ ಸ್ಟೋರೇಜ್ ನ ಪಂಜಾಬರಾವ ಬಾಬುರಾವ ಮಾನೆ ಪಾಟೀಲ ಮತ್ತು ಬಾಬಾನಗರ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.

ಮಖಣಾಪುರ ಗುರುಪೀಠದ ಸೋಮೇಶ್ವರ ಮಹಾಸ್ವಾಮೀಜಿ ಮಾತನಾಡಿ, ಸಚಿವ ಎಂ.ಬಿ.ಪಾಟೀಲ ನಾಡಿನ ಹೆಮ್ಮೆಯ ಪುತ್ರ. ಪೂಜೆಗೆ ಕಬ್ಬು ಸಿಗದ ಮಖಣಾಪುರದಲ್ಲಿ ಇವರ ನೀರಾವರಿ ಯೋಜನೆಗಳಿಂದಾಗಿ ಕೆರೆಗೆ ನೀರು ಬಂದು ಅಂತರ್ಜಲ ಹೆಚ್ಚಿದೆ. ಜನರ ಮೇಲೆ ಅವರ ಋಣವಿದೆ. ಅವರ ಉಪಕಾರ ಸ್ಮರಿಸಿ ಮಕ್ಕಳಿಗೆ ಶಿಕ್ಷಣದ ಜೊತೆ ಉತ್ತಮ ಸಂಸ್ಕಾರ ನೀಡಬೇಕು ಎಂದರು.

-----

ಕೋಟ್‌

ಹೆಣ್ಣು ಮಕ್ಕಳಿಗೂ ಸಮಾನ ಶಿಕ್ಷಣ ನೀಡಿ, ಅವರೂ ಸಮಾಜದಲ್ಲಿ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡಲು ಸ್ಪೂರ್ತಿ ನೀಡಬೇಕು. ಬಸವಣ್ಣನವರು ಮತ್ತು ಸಿದ್ಧೇಶ್ವರ ಸ್ವಾಮೀಜಿಗಳ ಕನಸು ನನಸಾಗಲು ಎಲ್ಲರೂ ಆದರ್ಶವಾಗಿ ಬದುಕಬೇಕು. ಈ ಬಾರಿ ದೇವರ ಕೃಪೆಯಿಂದ ಒಳ್ಳೆಯ ಮಳೆಯಾಗಿ ರೈತರು ಸಮೃದ್ಧ ಬೆಳೆ ಬೆಳೆದು ಆ ಬೆಳೆಗಳಿಗೆ ಬೆಲೆ ಸಿಗಲಿ. ಈ ಭಾಗದಲ್ಲಿ ಭೂಮಿಗೆ ಬಂಗಾರದ ಬೆಲೆ ಬಂದಿದ್ದು, ಯಾರೂ ಭೂಮಿಯನ್ನು ಮಾರಾಟ ಮಾಡಬೇಡಿ.

ಎಂ.ಬಿ.ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ

Share this article