ಖಾಸಗಿಗಿಂತ ಸರ್ಕಾರಿ ಶಾಲೆಯೇ ಉತ್ತಮ ಎಂಬಂತೆ ಅಭಿವೃದ್ಧಿ

KannadaprabhaNewsNetwork | Published : Oct 25, 2023 1:15 AM

ಸಾರಾಂಶ

ಮಕ್ಕಳಿಗೆ ಸರ್ಕಾರಿ ಶಾಲೆಯಲ್ಲಿ ಓದಬೇಕು ಎಂಬ ಮನಸ್ಥಿತಿ ಬರುವಂತೆ ಶಾಲೆಗಳನ್ನು ಅಭಿವೃದ್ಧಿ ಪಡಿಸುತ್ತೇವೆ. ಈಗಾಗಲೇ ಶಿಕ್ಷಕರ ನೇಮಕಾತಿ ಆಗಿದೆ.

ಶಿರಸಿ:

ಹಿಂದಿನ ಸರ್ಕಾರ ಏನು ಮಾಡಿದೆ ಎಂದು ಚರ್ಚೆಗೆ ಹೋಗುವುದಿಲ್ಲ. ಆದರೆ ನಮ್ಮ ಸರ್ಕಾರದಿಂದ ಮಕ್ಕಳಲ್ಲಿ ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆ ಉತ್ತಮ ಎಂಬ ಮನಸ್ಥಿತಿ ಬರುವಂತೆ ಅಭಿವೃದ್ಧಿ ಮಾಡಲಾಗುತ್ತದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ವಿಜಯದಶಮಿ ದಿನವಾದ ಮಂಗಳವಾರ ಇಲ್ಲಿನ ಮಾರಿಕಾಂಬಾ ದೇವಿಗೆ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮದೊಂದಿಗೆ ಅವರು ಮಾತನಾಡಿದರು.

ಮಕ್ಕಳಿಗೆ ಸರ್ಕಾರಿ ಶಾಲೆಯಲ್ಲಿ ಓದಬೇಕು ಎಂಬ ಮನಸ್ಥಿತಿ ಬರುವಂತೆ ಶಾಲೆಗಳನ್ನು ಅಭಿವೃದ್ಧಿ ಪಡಿಸುತ್ತೇವೆ. ಈಗಾಗಲೇ ಶಿಕ್ಷಕರ ನೇಮಕಾತಿ ಆಗಿದೆ. ಹೈದರಾಬಾದ್ ಪ್ರಾಂತ್ಯದಲ್ಲಿ ಮೀಸಲಾತಿಯ ಸಮಸ್ಯೆ ಹೊರತುಪಡಿಸಿ ಉಳಿದ ಕಡೆಗಳಲ್ಲಿ ನೇಮಕಾತಿ ಪ್ರಕ್ರಿಯೆ ನಡೆದಿದೆ. ಸುಮಾರು ೩ ಸಾವಿರ ಕೆಪಿಎಸ್ ಶಾಲೆ ಆರಂಭಿಸುವ ಚಿಂತನೆ ನಡೆದಿದೆ. ಅಲ್ಲಿಯೂ ಶಿಕ್ಷಕರ ನೇಮಕಾತಿ ಆಗಲಿದೆ. ಆಗ ಸಹಜವಾಗಿ ಶಾಲೆಗಳ ಅಭಿವೃದ್ಧಿಯೂ ಆಗಲಿದೆ ಎಂದು ಹೇಳಿದರು.‌ಸರ್ಕಾರಿ ಶಾಲೆ ನಮ್ಮ ಹೆಮ್ಮೆ ಎಂದು ಹೇಳಬೇಕು. ಇದಕ್ಕೆ ಸ್ವಲ್ಪ ಕಾಲಾವಕಾಶ ಬೇಕಾಗಲಿದೆ ಎಂದ ಅವರು, ಜಿಲ್ಲೆಯಲ್ಲಿ ಕೆಲವೊಂದು ಶಾಲೆಗಳು ಶಿಥಿಲ ಸ್ಥಿತಿಯಲ್ಲಿರುವುದು ತಿಳಿದಿದ್ದು, ಅವುಗಳ ಅಭಿವೃದ್ಧಿಗೂ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ವ್ಯಕ್ತಪಡಿಸಿದರು.ಎಚ್‌.ಡಿ. ಕುಮಾರಸ್ವಾಮಿ ಅವರು ಹಿಂದೆ ರಾಜ್ಯದಲ್ಲಿ ಆಡಳಿತ ನಡೆಸಿದವರು. ಅವರು ಟೀಕೆ ಮಾಡಿದರೆ ನಾವು ಅದಕ್ಕೆ ಉತ್ತರ ನೀಡಿದಲ್ಲಿ ಅರ್ಥವಿಲ್ಲ. ನಾವು ನಮ್ಮ ಕೆಲಸ ಮಾಡುತ್ತೇವೆ ಎಂದ ಅವರು, ಸರ್ಕಾರದಲ್ಲಿ ಯಾವುದೇ ಗೊಂದಲವಿಲ್ಲ.‌ ಈ ಬಗ್ಗೆ ಸತೀಶ್ ಜಾರಕಿಹೊಳಿ ಅವರೇ ಸ್ಪಷ್ಟಪಡಿಸಿದ್ದಾರೆ ಎಂದರು.

ಶಾಸಕ ಭೀಮಣ್ಣ ನಾಯ್ಕ ಇದ್ದರು. ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಇದ್ದರು.

ಬಿಸಿಯೂಟಕ್ಕೆ ಅಗತ್ಯವಿರುವ ಅನುದಾನ ಬಿಡುಗಡೆ ಆಗಿದೆ. ಶಿಕ್ಷಕರ‌ ನೇಮಕಾತಿಯೂ ಗೊಂದಲ ಇಲ್ಲದೇ ನಡೆದಿದೆ.‌ ನ್ಯಾಯಾಲಯದಲ್ಲಿನ ಪ್ರಕರಣ, ಹೈದ್ರಾಬಾದ್ ಕರ್ನಾಟಕ ಮೀಸಲಾತಿ ಹೊರತುಪಡಿಸಿ ಸುಮಾರು ೧೩ ಸಾವಿರ ಶಿಕ್ಷಕರ ನೇಮಕಾಗಿ ಆಗಲಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

Share this article