ಹಾವೇರಿ: ಕೆಳಸ್ತರದ ಸಮಾಜಗಳಿಗೆ ಬಜೆಟ್ನಲ್ಲಿ ಸಿಎಂ ಒತ್ತು ನೀಡಿದ್ದಾರೆ. ಎಲ್ಲ ಭಾಗಗಳಿಗೆ ಮತ್ತು ಎಲ್ಲ ಸಮುದಾಯಗಳಿಗೆ ಅನ್ಯಾಯ ಆಗದಂತೆ ಬಜೆಟ್ ಮಂಡಿಸಿದ್ದಾರೆ. ಅಭಿವೃದ್ಧಿ ಎಂಬುದು ಒಂದೇ ರಾತ್ರಿಯಲ್ಲಿ ಮಾಡುವಂತಹ ಮಾಯಾ ಬಜಾರ್ ಅಲ್ಲ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದರು.
ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲ ಸಮಾಜದ ಸಮತೋಲನ ಮಾಡುವ ಬಜೆಟ್ ಮಂಡಿಸಿದ್ದಾರೆ ಎಂದರು.ಇದು ಸಾಬರ ಬಜೆಟ್ ಎಂಬ ಹೇಳಿಕೆ ಕೆಳಮಟ್ಟದ್ದಾಗಿದ್ದು, ಅಂತ ಕೀಳುಮಟ್ಟದ ಟೀಕೆಯನ್ನು ಅವರಿಂದ ನಿರೀಕ್ಷೆ ಮಾಡಿರಲಿಲ್ಲ. ಬಜೆಟ್ ಬಗ್ಗೆ ಬಿಜೆಪಿಯವರು ರಾಜಕಾರಣಕ್ಕೋಸ್ಕರ ಟೀಕೆ ಮಾಡ್ತಾರೆ ಎಂಬುದಕ್ಕಿಂತ ವಿರೋಧ ಪಕ್ಷದವರಾಗಿ ಬೆಂಬಲ ಕೊಡೋದು ಅವರ ಕೆಲಸ ಅಲ್ಲ. ಅದರೊಳಗಿನ ನ್ಯೂನತೆ ಬಗ್ಗೆ ಪ್ರಸ್ತಾಪ ಮಾಡೋದು ಅವರ ಹಕ್ಕು. ವಿರೋಧ ಪಕ್ಷದವರು ಅದನ್ನ ಮಾಡಬೇಕು ಎಂದರು.
ಸಾಲರಾಮಯ್ಯ ಎಂಬ ಎಚ್ಡಿಕೆ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಈ ರಾಜ್ಯಕ್ಕೆ ದೇವರಾಜ ಅರಸರ ನಂತರ ಎಲ್ಲ ಸಮಾಜದವರಿಗೆ ನ್ಯಾಯ ದೊರಕಿಸಿಕೊಟ್ಟವರು ಸಿದ್ದರಾಮಯ್ಯ. ಅನ್ನಭಾಗ್ಯ ಬರೀ ಕಾಂಗ್ರೆಸ್ಗೆ ಕೊಟ್ಟಿದಾರಾ? ಅನ್ನರಾಮಯ್ಯ ಅಂತ ಜನ ಅವರನ್ನು ಕರೆದರು. ಕೆಲವರು ಅದನ್ನು ಅವರ ಮನೆಯಿಂದ ತಂದು ಕೊಟ್ಟಿಲ್ಲಾ ಅಂತ ಹೇಳಬಹುದು. ಹಿಂದಿನ ಸಿಎಂಗಳೂ ಮನೆಯಿಂದ ತಂದು ಕೊಟ್ಟಿರಲಿಲ್ಲ. ಅವರಿಗ್ಯಾಕೆ ಈ ಚಿಂತನೆ ಬರಲಿಲ್ಲ? ಅನ್ನಭಾಗ್ಯ ಬರೀ ಕುರುಬರಿಗೆ ಕೊಟ್ಟರಾ? ಕುಮಾರಸ್ವಾಮಿ ಅವರ ಕಾಲದಲ್ಲಿ ಸಾಲ ಮಾಡಿಲ್ವಾ? ಕೇಂದ್ರ ಸರ್ಕಾರದವರು ₹15 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಸಿದ್ದರಾಮಯ್ಯ ಬಡವರು ಹಸಿವಿನಿಂದ ಬಳಲಬಾರದು ಅಂತ ಅನ್ನಭಾಗ್ಯ ಕೊಟ್ಟರು ಎಂದರು.
ಸಮಾಧಾನ ತಂದಿದೆ: ಸಿಎಂ ಸಿದ್ದರಾಮಯ್ಯ ಅವರಿಗೆ ಮುಡಾ ಪ್ರಕರಣದಲ್ಲಿ ರಿಲೀಫ್ ಸಿಕ್ಕಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸತ್ಯ ಮೇವ ಜಯತೇ ಎಂದು ನಾವೆಲ್ಲ ನಂಬಿದ್ದೇವೆ, ಸತ್ಯಕ್ಕೆ ಜಯ ಸಿಕ್ಕಿದೆ. ಅವರು ಹಿಂದೆಯೂ ಸಿಎಂ ಆಗಿದ್ದವರು, ಅಷ್ಟು ಬಾರಿ ವಿಪಕ್ಷನಾಯಕ ಆದವರು. ಅವರೇನು ನನಗೆ ಸೈಟ್ ಬೇಕು ಅಂತ ಪತ್ರ ಕೊಟ್ಟಿರಲಿಲ್ಲ. ಕಳಂಕವಿಲ್ಲದ ರಾಜಕೀಯ ಜೀವನ ಅವರದ್ದು. ಕಳಂಕ ತರಲು ಈ ರೀತಿ ಪ್ರಯತ್ನ ಮಾಡಿದರೂ ಅವರಿಗೆ ರಿಲೀಪ್ ಸಿಕ್ಕಿರೋದು ಸಮಾಧಾನ ತಂದಿದೆ ಎಂದರು.ಮುಂದಿನ ಬಜೆಟ್ ಅವರೇ: ಮುಂದಿನ ಬಜೆಟ್ ಕೂಡ ಸಿದ್ದರಾಮಯ್ಯ ಅವರೇ ಮಂಡಿಸಲಿದ್ದಾರೆ. ಅದರ ಮುಂದಿನ ಬಜೆಟ್ಟೂ ಅವರೇ ಮಾಡ್ತಾರೆ. ಅದರಲ್ಲಿ ಯಾವುದೇ ಅನುಮಾನ ಇಲ್ಲ. ಮುಂದೆ ಬದಲಾವಣೆ ಇದ್ದರೆ ಹೈಕಮಾಂಡ್ನಿಂದ ನಿರ್ಣಯ ಆಗುತ್ತೆ. ನಾವೆಲ್ಲ ಅವರೇ ಇನ್ನೂ ಇರಬೇಕು ಅಂತ ಆಸೆ ಪಟ್ಟಿದೀವಿ, ಅಂತಿಮವಾಗಿ ಹೈಕಮಾಂಡ್ ನಿರ್ಣಯ ತೆಗೆದುಕೊಳ್ಳುತ್ತದೆ ಎಂದರು.
ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಶಾಸಕ ಬಸವರಾಜ ಶಿವಣ್ಣನವರ, ಕೋಟ್ರೇಶಪ್ಪ ಬಸೇಗಣ್ಣಿ, ಎಂ.ಎಂ. ಮೈದೂರ, ಶಶಿಧರ ಯಲಿಗಾರ, ಚಂದ್ರಪ್ಪ ಜಾಲಗಾರ ಇದ್ದರು.