ಮಂಗಳೂರು: ಕಾಂಗ್ರೆಸ್ ಭ್ರಷ್ಟಾಚಾರ ಮತ್ತು ದುರಾಡಳಿತದ ಸರಕಾರ ೨೦೨೩ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ಕಾಂಗ್ರೆಸ್ ಸರ್ಕಾರ ರಾಜ್ಯದ ಅಭಿವೃದ್ಧಿ ಕಡೆಗಣಿಸಿ ಕನ್ನಡಿಗರಿಗೆ ದ್ರೋಹ ಬಗೆದಿದೆ. ದಲಿತರ ಕಲ್ಯಾಣಕ್ಕೆ ಮೀಸಲಿದ್ದ ಎಸ್ಸಿಎಸ್ಪಿ-ಟಿಎಸ್ಪಿ ಅನುದಾನವನ್ನು ತಮ್ಮ ಗ್ಯಾರಂಟಿ ಯೋಜನೆಗಳಿಗೆ ದುರ್ಬಳಕೆ ಮಾಡಿಕೊಂಡಿದ್ದಲ್ಲದೆ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಕೋಟ್ಯಂತರ ರುಪಾಯಿಗಳನ್ನು ಲೂಟಿ ಮಾಡಿ, ಆ ಹಣವನ್ನು ಬೇರೆ ರಾಜ್ಯಗಳ ಚುನಾವಣೆಗೆ ಬಳಸಿಕೊಂಡುಶೋಷಿತ ವರ್ಗಕ್ಕೆ ವಂಚಿಸಿದೆ. ಕಾಂಗ್ರೆಸ್ನ ಈ ಆಡಳಿತಾತ್ಮಕ ವೈಫಲ್ಯ ಮತ್ತು ಭ್ರಷ್ಟಾಚಾರದಿಂದಾಗಿ ಕರ್ನಾಟಕದ ಪ್ರಗತಿ ಸಂಪೂರ್ಣವಾಗಿ ಕುಂಠಿತಗೊಂಡಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಆರೋಪಿಸಿದ್ದಾರೆ. ವಾಲ್ಮೀಕಿ ನಿಗಮದ ೧೮೭ ಕೋಟಿ ರು. ಹಣವನ್ನು ೬೦೦ ನಕಲಿ ಖಾತೆಗಳು ಹಾಗೂ ಶೆಲ್ ಕಂಪನಿಗಳ ಮೂಲಕ ದರೋಡೆ ಮಾಡಲಾಗಿದ್ದು, ಇಡಿ ಮತ್ತು ಸಿಬಿಐ ತನಿಖಾ ಸಂಸ್ಥೆಗಳು ಸಚಿವ ಬಿ.ನಾಗೇಂದ್ರ ಅವರನ್ನೇ ಈ ಹಗರಣದ ಪ್ರಮುಖ ಕಿಂಗ್ಪಿನ್ ಎಂದು ಉಲ್ಲೇಖಿಸಿದ್ದು, ಬಡ ಶೋಷಿತರ ಈ ಹಣದಿಂದ ೨೦.೧೯ ಕೋಟಿ ರು.ಗೂ ಹೆಚ್ಚು ಮೊತ್ತವನ್ನು ಕಾಂಗ್ರೆಸ್ ತೆಲಂಗಾಣ ಮತ್ತು ಬಳ್ಳಾರಿ ಚುನಾವಣಾ ವೆಚ್ಚಕ್ಕೆ ದುರ್ಬಳಕೆ ಮಾಡಿಕೊಂಡು ಐಷಾರಾಮಿ ಕಾರು, ನಗದು ಹಾಗೂ ಬಂಗಾರ ಖರೀದಿಸಿದ್ದಾರೆ.