ಮರಿಯಮ್ಮನಹಳ್ಳಿ: ಇಂದಿರಾ ನಗರಕ್ಕೆ ನನ್ನ ಅಧಿಕಾರವಧಿಯಲ್ಲಿ ಸ್ಥಳೀಯ ಜನರಿಗೆ ಅನುಕೂಲವಾಗುವಂತಹ ಎಲ್ಲ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ, ಮಾದರಿ ನಗರವನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಕೆ. ನೇಮರಾಜ್ ನಾಯ್ಕ ಹೇಳಿದರು.
ಇಲ್ಲಿನ ಇಂದಿರಾನಗರದಲ್ಲಿ 2024-25ನೇ ಸಾಲಿನ ಕೆಕೆಆರ್ಡಿಬಿ ಮತ್ತು ಡಿಎಂಎಫ್ ಅಭಿವೃದ್ಧಿ ಯೋಜನೆಯಡಿಯಲ್ಲಿ ₹50 ಲಕ್ಷ ವೆಚ್ಚದಲ್ಲಿ ಸಿಸಿ ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಈಗಾಗಲೇ ಇಂದಿರಾ ನಗರಕ್ಕೆ ₹50 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಿಸಲಾಗಿದೆ. ಈಗ ಮತ್ತೆ ₹50 ಲಕ್ಷ ವೆಚ್ಚದಲ್ಲಿ ಸಿಸಿ ಚರಂಡಿ ನಿರ್ಮಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಒಂದು ಕೋಟಿ ರು. ಅನುದಾನದಲ್ಲಿ ಇಂದಿರಾ ನಗರದಲ್ಲಿರುವ ಎಲ್ಲ ರಸ್ತೆಗಳನ್ನು ಸಿಸಿ ರಸ್ತೆಗಳನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.ಮರಿಯಮ್ಮನಹಳ್ಳಿ ಹೋಬಳಿಯ ಎಲ್ಲ ಗ್ರಾಮಗಳಲ್ಲಿಯೂ ಈಗ ₹50 ಲಕ್ಷ ವೆಚ್ಚದಲ್ಲಿ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಮರಿಯಮ್ಮನಹಳ್ಳಿ ಪಟ್ಟಣದಲ್ಲಿ ಕುಡಿಯುವ ನೀರಿನ ಹೊಸ ಪೈಪ್ಲೈನ್ ಕಾಮಗಾರಿ ಮುಗಿದ ಬಳಿಕ ಪಟ್ಟಣದ ಎಲ್ಲ ವಾರ್ಡಿನಲ್ಲಿರುವ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಅವರು ಹೇಳಿದರು.
ಮರಿಯಮ್ಮನಹಳ್ಳಿಯಲ್ಲಿ ಅನೇಕ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ತುಂಗಭದ್ರಾ ಜಲಾಶಯದಿಂದ ಶಾಶ್ವತ, ನಿರಂತರ ಕುಡಿಯುವ ನೀರನ್ನು ಜನರಿಗೆ ಒದಗಿಸಲಾಗಿದೆ. ಮರಿಯಮ್ಮನಹಳ್ಳಿಯ ಶ್ರೀ ಲಕ್ಷ್ಮೀನಾರಾಯಣಸ್ವಾಮಿ ಹಾಗೂ ಶ್ರೀ ಆಂಜನೇಯಸ್ವಾಮಿ ನೂತನ ಜೋಡಿ ರಥ ನಿರ್ಮಾಣವಾಗಿದೆ. ದೇವಸ್ಥಾನ ನವೀಕರಣಗೊಂಡಿದೆ ಎಂದು ಹೇಳಿದರು.ಡಣಾಯಕನಕೆರೆ ಗ್ರಾಪಂ ಸದಸ್ಯೆ ಅಕ್ಕಮಹಾದೇವಿ ಗುಂಡಾಸ್ವಾಮಿ, ಗ್ರಾಪಂ ಸದಸ್ಯ ಗುಂಡಾಸ್ವಾಮಿ, ಜೆಡಿಎಸ್ ಕ್ಷೇತ್ರ ಅಧ್ಯಕ್ಷ ವೈ. ಮಲ್ಲಿಕಾರ್ಜುನ, ತಾಪಂ ಮಾಜಿ ಸದಸ್ಯ ಮಜ್ಗಿ ಶಿವಪ್ಪ, ಸ್ಥಳೀಯ ಮುಖಂಡ ಎಚ್. ಮಹೇಶ್, ಬಸಪ್ಪ, ಕಾಸಿಂ, ನಾಗರಾಜಪ್ಪ, ಬಿ. ಶಾರದಮ್ಮ, ಬಿ. ಸಾವಿತ್ರಿಮ್ಮ ಉಪಸ್ಥಿತರಿದ್ದರು.