ಕನ್ನಡಪ್ರಭ ವಾರ್ತೆ ಬೇಲೂರುಮಾಜಿ ಸಚಿವ ಬಿ. ಶಿವರಾಂ ಅವರು ನನ್ನ ವಿರುದ್ಧ ನೀಡುತ್ತಿರುವ ಹೇಳಿಕೆಗಳಿಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಅಭಿವೃದ್ಧಿ ಕೆಲಸ ವಿರೋಧಿಗಳಿಗೆ ನನ್ನ ಉತ್ತರವಾಗಿದೆ ಎಂದು ಶಾಸಕ ಎಚ್.ಕೆ. ಸುರೇಶ್ ಹೇಳಿದರು.ತಾಲೂಕಿನ ತೊಳಲು ಗ್ರಾಮದಲ್ಲಿ ವಿವಿಧ ಕಾಮಗಾರಿಗೆ ಗುದ್ದಲಿ ಪೂಜೆ ನಡೆಸಿ ಮಾತನಾಡಿ ಬಸವಣ್ಣನವರು ಹೇಳಿದಂತೆ “ಕಾಯಕವೇ ಕೈಲಾಸ” ಎಂಬ ತತ್ವಕ್ಕೆ ನಾನು ಇಂದಿಗೂ ಬದ್ಧನಾಗಿದ್ದು, ಕೆಲವರ ಅಸಂಬದ್ಧ ಹಾಗೂ ಹತಾಶೆಯ ಟೀಕೆಗಳಿಗೆ ಉತ್ತರ ಕೊಡುವ ಅಗತ್ಯವಿಲ್ಲ. ಇಂದು ತಾಲೂಕಿನ ಪ್ರತಿ ಹಳ್ಳಿಹಳ್ಳಿಗಳಲ್ಲೂ ಹಾಗೂ ಪಟ್ಟಣದಲ್ಲೂ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆಗಳು ನಡೆಯುತ್ತಿವೆ. ಸರ್ಕಾರದಲ್ಲಿ ಹಣ ಇಲ್ಲ, ಯಾರಿಗೂ ಅನುದಾನ ಸಿಗುತ್ತಿಲ್ಲ ಎಂದು ಹೇಳುತ್ತಿದ್ದವರ ನಡುವೆಯೇ ನಾನು ಅನುದಾನ ತಂದು ಕಾಮಗಾರಿಗಳನ್ನು ಮಾಡಿಸುತ್ತಿರುವುದು ಅವರಿಗೆ ಸಹಿಸಲಾಗುತ್ತಿಲ್ಲ. ಅದೇ ಕಾರಣಕ್ಕೆ ಈ ರೀತಿಯ ಆರೋಪಗಳು ಬರುತ್ತಿವೆ ಎಂದು ಹೇಳಿದರು.ಆನೆ ಸಮಸ್ಯೆ ಬಗ್ಗೆ ಮೌನ:
ತಾಲೂಕಿನ ವಿದ್ಯುತ್ ಸಮಸ್ಯೆ ಬಗ್ಗೆ ಬಿ.ಕೆ. ಜಾರ್ಜ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇನೆ. ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಎಂಜಿನಿಯರ್ಗಳು, ಗುತ್ತಿಗೆದಾರರು ಹಾಗೂ ಅಧಿಕಾರಿಗಳು ನನ್ನ ಆತ್ಮೀಯರೇ. ಆದರೆ ಯಾರಿಗೆ ಟೆಂಡರ್ ಕೊಡಬೇಕು ಎಂಬುದು ನನ್ನ ಕೈಯಲ್ಲಿಲ್ಲ. ಯಾರು ನಿಯಮಾನುಸಾರ ಟೆಂಡರ್ ಹಾಕಿಕೊಂಡು ಬಂದರೂ ಅವರಿಗೆ ಕೆಲಸ ಸಿಗುತ್ತದೆ. ನಾನು ಗುಣಮಟ್ಟದ ಕೆಲಸ ಮಾಡುವಂತೆ ಮಾತ್ರ ಸೂಚನೆ ನೀಡುತ್ತೇನೆ ಹೊರತು, ನನ್ನ ಹಿಂಬಾಲಕರು ಎಂಬ ಕಾರಣಕ್ಕೆ ಯಾರಿಗೂ ಕೆಲಸ ನೀಡಿಲ್ಲ. ನಾನು ಗುತ್ತಿಗೆದಾರನಾಗಿರುವುದರಿಂದ ನನಗೆ ಸಹಕಾರ ಸಿಗುತ್ತಿದೆ ಎಂದು ಬಿ. ಶಿವರಾಂ ಹೇಳಿರುವುದಕ್ಕೆ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.ಕಳೆದ ಚುನಾವಣೆಯಲ್ಲಿ ನಾನು ಸೋತಾಗ ಲಿಂಗೇಶ್ ಶಾಸಕರಾಗಿದ್ದರು. ಆಗ ನಾನು ಅವರ ವಿರುದ್ಧ ಯಾವುದೇ ಹೇಳಿಕೆ ನೀಡಿರಲಿಲ್ಲ. ಜನಸಾಮಾನ್ಯರ ಜೊತೆ ನಿಂತು ಕೆಲಸ ಮಾಡುವುದೇ ನನ್ನ ರಾಜಕಾರಣ. ಇಂದು ಮತದಾರರು ನನ್ನ ಕೈ ಹಿಡಿದಿದ್ದು, ಅವರ ಸೇವೆ ಮಾಡುವುದು ನನ್ನ ಕರ್ತವ್ಯ. ನಾನು ಮೂಲತಃ ಸಿವಿಲ್ ಎಂಜಿನಿಯರ್ ಹಾಗೂ ಗುತ್ತಿಗೆದಾರನಾಗಿರುವುದರಿಂದಲೇ ಈ ಕ್ಷೇತ್ರಕ್ಕೆ ಹೆಚ್ಚು ಅನುದಾನ ತಂದು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿಸುತ್ತಿದ್ದೇನೆ ಎಂದು ಹೇಳಿದರು.