ಅಭಿವೃದ್ಧಿ ಶೂನ್ಯ ಗ್ಯಾರಂಟಿ ಸರ್ಕಾರ: ವಿಜಯೇಂದ್ರ

KannadaprabhaNewsNetwork | Published : Feb 26, 2024 1:36 AM

ಸಾರಾಂಶ

ದೊಡ್ಡಬಳ್ಳಾಪುರ: ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು 9 ತಿಂಗಳು ಕಳೆದಿದ್ದರೂ ಶಾಸಕರಿಗೆ ಕ್ಷೇತ್ರಾಭಿವೃದ್ದಿ ಅನುದಾನ ಬಿಡುಗಡೆ ಮಾಡಿಲ್ಲ. ಅಭಿವೃದ್ದಿ ಶೂನ್ಯ ಆಡಳಿತಕ್ಕೆ ಇದು ಸ್ಪಷ್ಟ ನಿದರ್ಶನ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.

ದೊಡ್ಡಬಳ್ಳಾಪುರ: ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು 9 ತಿಂಗಳು ಕಳೆದಿದ್ದರೂ ಶಾಸಕರಿಗೆ ಕ್ಷೇತ್ರಾಭಿವೃದ್ದಿ ಅನುದಾನ ಬಿಡುಗಡೆ ಮಾಡಿಲ್ಲ. ಅಭಿವೃದ್ದಿ ಶೂನ್ಯ ಆಡಳಿತಕ್ಕೆ ಇದು ಸ್ಪಷ್ಟ ನಿದರ್ಶನ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.

ಗ್ರಾಮ ಚಲೋ ಅಭಿಯಾನ, ಬೂತ್ ಮಟ್ಟದ ಅಧ್ಯಕ್ಷ-ಕಾರ್ಯಕರ್ತರ ಮನೆಗೆ ಭೇಟಿ ಅಂಗವಾಗಿ ತಾಲೂಕಿನ ಕೋಡಿಪಾಳ್ಯ ಗ್ರಾಮದಲ್ಲಿ ಭಾನುವಾರ ಬೂತ್‌ ಕಮಿಟಿ ಅಧ್ಯಕ್ಷ ಆರ್. ಆನಂದಮೂರ್ತಿ ಅವರ ಮನೆಗೆ ಭೇಟಿ ನೀಡಿ ಅವರು ಮಾತನಾಡಿದರು.

ಮುಖ್ಯಮಂತ್ರಿಗಳಿಗೆ ಆಡಳಿತ ಮತ್ತು ರಾಜಕೀಯ ಅನುಭವವಿದ್ದರೂ, ಶಾಸಕರಿಗೆ ಅನುದಾನ ಕೊಡುವಲ್ಲಿ ವಿಫಲರಾಗಿದ್ದಾರೆ. ಗ್ಯಾರೆಂಟಿಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದು, ಈಗ ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಕಿತ್ತುಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಗ್ಯಾರೆಂಟಿ ಯೋಜನೆಗಳು ಶೇ.20ರಷ್ಟು ಜನರನ್ನೂ ತಲುಪಿಲ್ಲ. ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ಅವಕಾಶ ನೀಡಿ, ಪುರುಷರಿಗೆ ಟಿಕೆಟ್‌ ದರ ಹೆಚ್ಚಿಸಿದ್ದಾರೆ ಎಂದರು.

ಕೇಂದ್ರದ ವಿರುದ್ದ ಅನಗತ್ಯ ದೋಷಾರೋಪ:

ಬರಗಾಲ ಸಮಯದಲ್ಲಿ ರೈತರ ನೆರವಿಗೆ ಬಂದಿಲ್ಲ. ದೇಶದಲ್ಲಿ 8-9 ರಾಜ್ಯಗಳಲ್ಲಿ ಬರಗಾಲ ಇದೆ. ಅಲ್ಲಿನ ಮುಖ್ಯಮಂತ್ರಿಗಳು ತನ್ನ ರಾಜ್ಯ ಸರ್ಕಾರದ ಖಜಾನೆಯಿಂದ ಅಗತ್ಯ ಕೆಲಸ ಮಾಡುತ್ತಿವೆ. ಆದರೆ ಇಲ್ಲಿನ ಸರ್ಕಾರ ಸರಿಯಾದ ಸಮಯಕ್ಕೆ ಮಾಹಿತಿ ನೀಡದೆ ಕೇಂದ್ರದ ವಿರುದ್ಧ ಅನಗತ್ಯವಾಗಿ ದೋಷಾರೋಪ ಮಾಡುತ್ತಿದೆ ಎಂದರು.

4 ವರ್ಗದ ಅಭ್ಯುದಯಕ್ಕೆ ಯೋಜನೆ:

ಬಡವರು, ರೈತರು, ಯುವಜನತೆ, ಮಹಿಳೆಯರು ಎಂಬ ನಾಲ್ಕು ವರ್ಗದ ಅಭ್ಯುದಯ ಕೇಂದ್ರದ ಆದ್ಯತೆಯಾಗಿದೆ ಎಂದ ಅವರು, ಪ್ರತಿ ಮನೆಯಲ್ಲೂ ಕೇಂದ್ರ ಸರ್ಕಾರದ ಯಾವುದಾದರೂ ಒಂದು ಯೋಜನೆ ಫಲಾನುಭವಿಗಳು ಇರುತ್ತಾರೆ. ಪಕ್ಷದ ಕಾರ್ಯಕರ್ತರು ಕೇಂದ್ರದ ಯೋಜನೆಗಳನ್ನು ಸಾರ್ವಜನಿಕರಿಗೆ ನೆನಪು ಮಾಡಬೇಕು. ಕಾಂಗ್ರೆಸ್ ಕೆಲವೊಮ್ಮೆ ಕೇಂದ್ರದ ಯೋಜನೆಗಳನ್ನು ನಮ್ಮದೆ ಎಂದು ಜನರನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದೆ ಎಂದರು.

ಮೋದಿ ಅಲೆ ಎಂದು ಮೈಮರೆಯಬೇಡಿ:

ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಲೆ ಇದೆ ಎಂಬ ತಾತ್ಸರ ಬೇಡ. ಗ್ರಾಮ ಚಲೋ ಅಭಿಯಾನ ಉದ್ದೇಶವೇ ಕಳೆದ ಚುನಾವಣೆಗಿಂತ ಈ ಬಾರಿ ಪ್ರತಿ ಬೂತ್‌ಗಳಲ್ಲಿ ಕನಿಷ್ಟ 100 ಮತ ಹೆಚ್ಚಿಗೆ ಗಳಿಸುವುದೇ ಆಗಿದೆ. ಮಹಿಳೆಯರು, ರೈತರು, ಯುವಜನತೆಯನ್ನು ಕೇಂದ್ರೀಕರಿಸಿ ಮತಯಾಚನೆ ಮಾಡಬೇಕು ಎಂದರು.

ದೊಡ್ಡಬಳ್ಳಾಪುರ ಶಾಸಕ ಧೀರಜ್‌ ಮುನಿರಾಜ್ ಮತ್ತು ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಮಾತನಾಡಿ, ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನು ಹೈಕಮಾಂಡ್‌ ನಿರ್ಧರಿಸುತ್ತದೆ. ಯಾರೇ ಅಭ್ಯರ್ಥಿಯಾದರೂ ಪ್ರಧಾನಿ ಮೋದಿ ಅವರೇ ಅಭ್ಯರ್ಥಿ ಎಂಬ ಭಾವನೆ ಇರಬೇಕು. ಕೇಂದ್ರ ಸರ್ಕಾರ ಹಾಗೂ ಹಿಂದಿನ ರಾಜ್ಯ ಸರ್ಕಾರದ ಸಾಧನೆಗಳ ಆಧಾರದಲ್ಲಿ ಗೆಲುವಿನ ಸಂಕಲ್ಪ ಮಾಡಬೇಕು ಎಂದರು.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಉಸ್ತುವಾರಿ ಕಟ್ಟಾ ಸುಬ್ರಮಣ್ಯ ನಾಯ್ಡು, ಸಹ ಉಸ್ತುವಾರಿ ಅರುಣ್ ಕುಮಾರ್, ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ, ಮುಖಂಡರಾದ ಕೆ.ಎಂ ಹನುಮಂತರಾಯಪ್ಪ, ತಿ.ರಂಗರಾಜು, ದಿಬ್ಬೂರು ಜಯಣ್ಣ, ಎಂ.ಜಿ ಶ್ರೀನಿವಾಸ್ ಮತ್ತಿತ್ತರರು ಇದ್ದರು.25ಕೆಡಿಬಿಪಿ8-

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭಾನುವಾರ ಗ್ರಾಮ ಚಲೋ ಅಭಿಯಾನದ ಅಂಗವಾಗಿ ದೊಡ್ಡಬಳ್ಳಾಪುರದ ಕೋಡಿಪಾಳ್ಯ ಬೂತ್ ಅಧ್ಯಕ್ಷ ಆರ್.ಆನಂದಮೂರ್ತಿ ಮನೆಗೆ ಭೇಟಿ ನೀಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

Share this article