ದೊಡ್ಡಬಳ್ಳಾಪುರ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 9 ತಿಂಗಳು ಕಳೆದಿದ್ದರೂ ಶಾಸಕರಿಗೆ ಕ್ಷೇತ್ರಾಭಿವೃದ್ದಿ ಅನುದಾನ ಬಿಡುಗಡೆ ಮಾಡಿಲ್ಲ. ಅಭಿವೃದ್ದಿ ಶೂನ್ಯ ಆಡಳಿತಕ್ಕೆ ಇದು ಸ್ಪಷ್ಟ ನಿದರ್ಶನ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.
ಮುಖ್ಯಮಂತ್ರಿಗಳಿಗೆ ಆಡಳಿತ ಮತ್ತು ರಾಜಕೀಯ ಅನುಭವವಿದ್ದರೂ, ಶಾಸಕರಿಗೆ ಅನುದಾನ ಕೊಡುವಲ್ಲಿ ವಿಫಲರಾಗಿದ್ದಾರೆ. ಗ್ಯಾರೆಂಟಿಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದು, ಈಗ ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಕಿತ್ತುಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಗ್ಯಾರೆಂಟಿ ಯೋಜನೆಗಳು ಶೇ.20ರಷ್ಟು ಜನರನ್ನೂ ತಲುಪಿಲ್ಲ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಅವಕಾಶ ನೀಡಿ, ಪುರುಷರಿಗೆ ಟಿಕೆಟ್ ದರ ಹೆಚ್ಚಿಸಿದ್ದಾರೆ ಎಂದರು.
ಕೇಂದ್ರದ ವಿರುದ್ದ ಅನಗತ್ಯ ದೋಷಾರೋಪ:ಬರಗಾಲ ಸಮಯದಲ್ಲಿ ರೈತರ ನೆರವಿಗೆ ಬಂದಿಲ್ಲ. ದೇಶದಲ್ಲಿ 8-9 ರಾಜ್ಯಗಳಲ್ಲಿ ಬರಗಾಲ ಇದೆ. ಅಲ್ಲಿನ ಮುಖ್ಯಮಂತ್ರಿಗಳು ತನ್ನ ರಾಜ್ಯ ಸರ್ಕಾರದ ಖಜಾನೆಯಿಂದ ಅಗತ್ಯ ಕೆಲಸ ಮಾಡುತ್ತಿವೆ. ಆದರೆ ಇಲ್ಲಿನ ಸರ್ಕಾರ ಸರಿಯಾದ ಸಮಯಕ್ಕೆ ಮಾಹಿತಿ ನೀಡದೆ ಕೇಂದ್ರದ ವಿರುದ್ಧ ಅನಗತ್ಯವಾಗಿ ದೋಷಾರೋಪ ಮಾಡುತ್ತಿದೆ ಎಂದರು.
ಬಡವರು, ರೈತರು, ಯುವಜನತೆ, ಮಹಿಳೆಯರು ಎಂಬ ನಾಲ್ಕು ವರ್ಗದ ಅಭ್ಯುದಯ ಕೇಂದ್ರದ ಆದ್ಯತೆಯಾಗಿದೆ ಎಂದ ಅವರು, ಪ್ರತಿ ಮನೆಯಲ್ಲೂ ಕೇಂದ್ರ ಸರ್ಕಾರದ ಯಾವುದಾದರೂ ಒಂದು ಯೋಜನೆ ಫಲಾನುಭವಿಗಳು ಇರುತ್ತಾರೆ. ಪಕ್ಷದ ಕಾರ್ಯಕರ್ತರು ಕೇಂದ್ರದ ಯೋಜನೆಗಳನ್ನು ಸಾರ್ವಜನಿಕರಿಗೆ ನೆನಪು ಮಾಡಬೇಕು. ಕಾಂಗ್ರೆಸ್ ಕೆಲವೊಮ್ಮೆ ಕೇಂದ್ರದ ಯೋಜನೆಗಳನ್ನು ನಮ್ಮದೆ ಎಂದು ಜನರನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದೆ ಎಂದರು.
ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಲೆ ಇದೆ ಎಂಬ ತಾತ್ಸರ ಬೇಡ. ಗ್ರಾಮ ಚಲೋ ಅಭಿಯಾನ ಉದ್ದೇಶವೇ ಕಳೆದ ಚುನಾವಣೆಗಿಂತ ಈ ಬಾರಿ ಪ್ರತಿ ಬೂತ್ಗಳಲ್ಲಿ ಕನಿಷ್ಟ 100 ಮತ ಹೆಚ್ಚಿಗೆ ಗಳಿಸುವುದೇ ಆಗಿದೆ. ಮಹಿಳೆಯರು, ರೈತರು, ಯುವಜನತೆಯನ್ನು ಕೇಂದ್ರೀಕರಿಸಿ ಮತಯಾಚನೆ ಮಾಡಬೇಕು ಎಂದರು.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಉಸ್ತುವಾರಿ ಕಟ್ಟಾ ಸುಬ್ರಮಣ್ಯ ನಾಯ್ಡು, ಸಹ ಉಸ್ತುವಾರಿ ಅರುಣ್ ಕುಮಾರ್, ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ, ಮುಖಂಡರಾದ ಕೆ.ಎಂ ಹನುಮಂತರಾಯಪ್ಪ, ತಿ.ರಂಗರಾಜು, ದಿಬ್ಬೂರು ಜಯಣ್ಣ, ಎಂ.ಜಿ ಶ್ರೀನಿವಾಸ್ ಮತ್ತಿತ್ತರರು ಇದ್ದರು.25ಕೆಡಿಬಿಪಿ8-