ಕನ್ನಡಪ್ರಭ ವಾರ್ತೆ ಸಕಲೇಶಪುರ
ಕುಶಾಲನಗರ ಬಡಾವಣೆಯ ಅಣ್ಣಪ್ಪವೃತ್ತದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶನ ವಿಸರ್ಜನೆ ಕಾರ್ಯಕ್ರಮ ಬುಧವಾರ ಆಯೋಜಿಸಲಾಗಿತ್ತು. ನೂರಾರು ಭಕ್ತಾದಿಗಳ ಸಮ್ಮುಖದಲ್ಲಿ ಡಿ.ಜೆ ಸದ್ದು,ಪಟಾಕಿಗಳ ಚಿತ್ತಾರದ ನಡುವೆ ಆದ್ಧೂರಿಯಾಗಿ ಮೆರವಣಿಗೆ ನಡೆಸಲಾಗಿತ್ತು. ಆದರೆ, ಸಕಲೇಶ್ವರಸ್ವಾಮಿ ದೇವಸ್ಥಾನ ಸಮೀಪ ಮೆರವಣಿಗೆ ಆಗಮಿಸಿದ ವೇಳೆ ರಾತ್ರಿ 10ಕ್ಕೆ ಪೊಲೀಸರು ಡಿ.ಜೆ ಬಂದ್ ಮಾಡಿಸಿದರು. ಇದರಿಂದ ಸಿಟ್ಟಾದ ಆಯೋಜಕರು 10.30ರವರೆಗೆ ಡಿ.ಜೆ ಬಳಸಲು ಅನುಮತಿ ಪಡೆಯಲಾಗಿದೆ. ಆದರೆ, 10 ಗಂಟೆಗೆ ಡಿ.ಜೆ ಬಂದ್ ಮಾಡಲಾಗಿದೆ ಎಂದು ಆರೋಪಿಸಿ ಮಹಿಳೆಯರು, ಮಕ್ಕಳು ಸೇರಿದಂತೆ ಆಯೋಜಕರು ಪ್ರತಿಭಟನೆ ನಡೆಸಿ, ಡಿ.ಜೆ ಬಳಸಲು ಅನುಮತಿ ನೀಡದ ಹೊರತು ಗಣೇಶಮೂರ್ತಿ ವಿಸರ್ಜಿಸುವುದಿಲ್ಲ ಎಂದು ಪಟ್ಟು ಹಿಡಿದರು.
ಪೊಲೀಸರು ಡಿ.ಜೆ ಬಳಸಲು ನ್ಯಾಯಾಲಯ ಅನುಮತಿ ನಿರಾಕರಿಸಿದೆ. ಮಾನವೀಯತೆ ಆಧಾರದ ಮೇಲೆ ಡಿ.ಜೆ ಬಳಕೆ ಅನುಮತಿ ನೀಡಲಾಗಿದೆ ಎಂದರು. ಇದರಿಂದ ಆಕ್ರೋಶಗೊಂಡ ಆಯೋಜಕರು ಗಣೇಶಮೂರ್ತಿಯಿಂದ ದೂರ ಸರಿದು ಪೊಲೀಸರೇ ವಿಸರ್ಜಿಸಲಿ ಎಂದು ಪಟ್ಟು ಹಿಡಿದರು. ರಾತ್ರಿ 10.30ರಿಂದ 12 ಗಂಟೆವರಗೆ ಆಯೋಜಕರು ಹಾಗೂ ಪೊಲೀಸರ ನಡುವೆ ವಾದವಿವಾದ ನಡೆದು ಅಂತಿಮವಾಗಿ ಆಯೋಜಕರ ಮನವೊಲಿಸುವ ಮೂಲಕ ಗಣೇಶನನ್ನು ಹೇಮಾವತಿ ನದಿಯಲ್ಲಿ ವಿಸರ್ಜಿಸಲಾಯಿತು. ಗಣೇಶ್ ವಿಸರ್ಜನೆ ಅಂಗವಾಗಿ ಪಟ್ಟಣದಲ್ಲಿ ಭಾರಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.