ಹೊಸಪೇಟೆ: ಶ್ರೀರಘುನಂದನ ತೀರ್ಥರ ಮಧ್ಯಾರಾಧನೆಯ ಪರಮ ಪವಿತ್ರ ದಿನವು ಶ್ರೀಮಠದ ಶಿಷ್ಯರಿಗೆ, ಭಕ್ತರಿಗೆ ಸಾರ್ಥಕತೆ, ಸೌಭಾಗ್ಯ ದಿನವಾಗಿದ್ದರೆ, ಪರಕೀಯರಿಗೆ ಕರಾಳವಾಗಿದೆ ಎಂದು ಮಂತ್ರಾಲಯ ಶ್ರೀರಾಘವೇಂದ್ರ ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.
ಜಗದ್ಗುರು ಶ್ರೀಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ವಿದ್ಯಾಮಠ (ಶ್ರೀರಾಘವೇಂದ್ರ ಸ್ವಾಮಿ ಮಠ)ಕ್ಕೆ ಪರಂಪರಾಗತವಾಗಿ ಸೇರಿದ ಮೂಲ ರಾಮದೇವರನ್ನು ಮರಳಿ ಶ್ರೀಮಠಕ್ಕೆ ತಂದು ಕೊಟ್ಟವರು ಶ್ರೀ ರಘುನಂದನ ತೀರ್ಥರು ಎಂದರು.
ಮೂಲರಾಮನ ಲಕ್ಷಣಗಳನ್ನು ನೋಡಿದರೆ ಇದೇ ಮೂಲ ರಾಮಚಂದ್ರದೇವರು ಎಂಬುದು ತಿಳಿಯುತ್ತದೆ. ಜಗತ್ತಿನಲ್ಲಿ ಯಾರು ಮೂಲರಾಮ ನಮ್ಮಲ್ಲಿದ್ದ ಎನ್ನುತ್ತಾರೋ ಅವರು ಎಲ್ಲಿಯೂ ಭಕ್ತರಿಗೆ ವಿಶ್ವರೂಪ ದರ್ಶನ ಮಾಡಿಸುವ ಧೈರ್ಯ ಮಾಡಿಲ್ಲ. ಆದರೆ, ಶ್ರೀರಾಯರ ಮಠದಲ್ಲಿ ಭಕ್ತರಿಗೆ ನಿರಂತರವಾಗಿ ಯಾವುದೇ ಜಾತಿ, ಮತ, ಮಠ, ಭೇದವಿಲ್ಲದೇ ಮೂಲರಾಮನ ವಿಶ್ವರೂಪ ದರ್ಶನ ಲಭಿಸುತ್ತಿದೆ ಎಂದರು.ಚತುರ್ಯುಗ, ಚತುರ್ಮುಖ ಬ್ರಹ್ಮದೇವರು ಕರಾರ್ಚಿತ ಶ್ರೀಮೂಲರಾಮದೇವರು ಚತುರ್ವಿಧ ಪುರುಷಾರ್ಥ ನೀಡುತ್ತಾನೆ. ಅಂತಹ ಮೂಲರಾಮಚಂದ್ರ ದೇವರು ಶ್ರೀಮಠದಲ್ಲಿದೆ. ಪರಮ ಪವಿತ್ರ ಪುಣ್ಯಭೂಮಿಯಾದ ಹಂಪಿ ನೆಲೆಯಲ್ಲಿ ಯತಿಗಳು, ಹರಿದಾಸರು ಓಡಾಡಿದ್ದಾರೆ ಎಂದರು.
ಮಂತ್ರಾಲಯ ಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ ರಾಜ್ಯ ಸಂಚಾಲಕ ಸುಳಾದಿ ಹನುಮೇಶಾಚಾರ್ಯ ದಾಸ ಸಾಹಿತ್ಯ ಕಾರ್ಯಕ್ರಮ ನಡೆಸಿಕೊಟ್ಟರು.
ಹಂಪಿ ರಘುನಂದನ ತೀರ್ಥರ ಮಠದ ಮೂಲ ಬೃಂದಾವನ ಸನ್ನಿಧಿಯಲ್ಲಿ ಬುಧವಾರ ರಘುನಂದನ ತೀರ್ಥರ ಮಧ್ಯಾರಾಧನೆ ನಿಮಿತ್ತ ಮಂತ್ರಾಲಯ ರಾಘವೇಂದ್ರ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮೀಜಿ ಪೂಜೆ ಸಲ್ಲಿಸಿದರು.