ರಾಮನಗರ ಜಿಲ್ಲಾದ್ಯಂತ ಶ್ರದ್ಧಾಭಕ್ತಿಯ ಈದ್‌ ಮಿಲಾದ್‌

KannadaprabhaNewsNetwork |  
Published : Sep 17, 2024, 12:53 AM IST
16ಕೆಆರ್  ಎಂಎನ್  1.ಜೆಪಿಜಿರಾಮನಗರದಲ್ಲಿ ಈದ್  ಮಿಲಾದ್  ಹಬ್ಬದ ಮೆರವಣಿಗೆ | Kannada Prabha

ಸಾರಾಂಶ

ಪ್ರವಾದಿ ಮಹಮ್ಮದ್ ಪೈಗಂಬರ್ ಜನ್ಮದಿನದ ಪ್ರಯುಕ್ತ ನಡೆಯುವ ಶಾಂತಿ, ಸೌಹಾರ್ದತೆಯ ಪ್ರತೀಕವಾಗಿರುವ ಈದ್ ಮಿಲಾದ್ ಹಬ್ಬವನ್ನು ರಾಮನಗರ ಜಿಲ್ಲೆಯಲ್ಲಿ ಮುಸ್ಲಿಂ ಬಾಂಧವರು ಸೋಮವಾರ ಸಡಗರ, ಸಂಭ್ರಮ ಹಾಗೂ ಶ್ರದ್ಧಾಭಕ್ತಿಯಿಂದ ಆಚರಿಸಿದರು.

-ಪ್ರವಾದಿ ಮಹಮ್ಮದ್ ಪೈಗಂಬರ್ ಜನ್ಮದಿನ ಆಚರಣೆ -ರಾಮನಗರ, ಚನ್ನಪಟ್ಟಣ, ವಿವಿಧ ತಾಲೂಕುಗಳಲ್ಲಿ ವಿಶೇಷ ಪ್ರಾರ್ಥನೆಕನ್ನಡಪ್ರಭ ವಾರ್ತೆ ರಾಮನಗರ

ಪ್ರವಾದಿ ಮಹಮ್ಮದ್ ಪೈಗಂಬರ್ ಜನ್ಮದಿನದ ಪ್ರಯುಕ್ತ ನಡೆಯುವ ಶಾಂತಿ, ಸೌಹಾರ್ದತೆಯ ಪ್ರತೀಕವಾಗಿರುವ ಈದ್ ಮಿಲಾದ್ ಹಬ್ಬವನ್ನು ಜಿಲ್ಲೆಯಲ್ಲಿ ಮುಸ್ಲಿಂ ಬಾಂಧವರು ಸೋಮವಾರ ಸಡಗರ, ಸಂಭ್ರಮ ಹಾಗೂ ಶ್ರದ್ಧಾಭಕ್ತಿಯಿಂದ ಆಚರಿಸಿದರು.

ಪ್ರವಾದಿ ಮಹಮ್ಮದ್ ಪೈಗಂಬರ್ ಜನ್ಮ ದಿನದ ನಿಮಿತ್ತ ಈದ್ ಮಿಲಾದ್ ಆಚರಿಸಲಾಗುತ್ತದೆ. ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ ಹಾಗೂ ಹಾರೋಹಳ್ಳಿ ತಾಲೂಕುಗಳಲ್ಲಿ ಮುಸ್ಲಿಮರು ಮಧ್ಯಾಹ್ನ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಸಕಲ ಜೀವರಾಶಿಗಳಿಗೆ ಒಳಿತಾಗಲಿ ಎಂದು ಮುಸ್ಲಿಮರು ಅಲ್ಲಾಹುನಲ್ಲಿ ಪ್ರಾರ್ಥಿಸಿದರು. ಪೈಗಂಬರರ ತತ್ವ ಅಳವಡಿಸಿಕೊಂಡರೆ ಶಾಂತಿ-ನೆಮ್ಮದಿ ಸಿಗುತ್ತದೆ ಎಂದು ಮುಸ್ಲಿಂ ಧರ್ಮ ಗುರುಗಳು ಬೋಧಿಸಿದರು.

ಹಬ್ಬದ ಅಂಗವಾಗಿ ಪ್ರಮುಖ ರಸ್ತೆಗಳು, ಗಲ್ಲಿಗಳನ್ನು ಬಂಟಿಂಗ್ಸ್ ಮತ್ತು ಧ್ವಜಗಳಿಂದ ಅಲಂಕರಿಸಲಾಗಿತ್ತು. ರಸ್ತೆಗಳನ್ನು ವಿದ್ಯುತ್ ದೀಪಗಳಿಂದ ಜಗಮಗಿಸುವಂತೆ ಮಾಡಲಾಗಿತ್ತು. ಅದರಲ್ಲೂ ಮಸೀದಿಗಳು, ಮಸೀದಿಗಳನ್ನು ಸಂಪರ್ಕಿಸುವ ರಸ್ತೆಗಳು, ಮುಸ್ಲಿಮರು ಹೆಚ್ಚಿರುವ ಪ್ರದೇಶಗಳಲ್ಲಿ ಅಲಂಕಾರ ಭರ್ಜರಿಯಾಗಿತ್ತು.

ಈದ್ ಮಿಲಾದ್ ಪ್ರಮುಖ ಆಕರ್ಷಣೆ ಎಂದರೆ ಸಾಮೂಹಿಕ ಮೆರವಣಿಗೆ. ಪ್ರವಾದಿ ಮಹಮದ್ ಪೈಗಂಬರ್ ಜನ್ಮ ದಿನದ ಅಂಗವಾಗಿ ನಡೆಸುವ ಮೆರವಣಿಗೆಯಲ್ಲಿ ನೂರಾರು ಜನರು ಪಾಲ್ಗೊಂಡಿದ್ದರು. ವಿವಿಧೆಡೆ ಹಸಿರು ಧ್ವಜಗಳು, ಬಾವುಟಗಳು ಹಾರಾಡಿದವು. ಮುಸ್ಲಿಮರು ಮೆರವಣಿಗೆಯಲ್ಲಿ ಪೈಗಂಬರರ ಕುರಿತು ಗುಣಗಾನ ಮಾಡಿದರು.

ಮಕ್ಕಳು ಬಣ್ಣ ಬಣ್ಣದ ಉಡುಪು ಧರಿಸಿ ಸಂಭ್ರಮಿಸಿದರು. ಮೆರವಣಿಗೆಯಲ್ಲಿ ಮೆಕ್ಕಾ, ಮದೀನಾ ಗುಂಬಜ್ ಹಾಗೂ ಟಿಪ್ಪು ಸುಲ್ತಾನನ ಪ್ರತಿಕೃತಿಗಳು ಗಮನ ಸೆಳೆದವು. ರಾಮನಗರದ ಜಾಮಿಯಾ ಮಸೀದಿಯಿಂದ ಮಧ್ಯಾಹ್ನ ಆರಂಭಗೊಂಡ ಮೆರವಣಿಗೆ ನಾಲಬಂದವಾಡಿ, ಮೋತಿನಗರ, ಮೊಹಬೂಬ್ ನಗರ, ಟಿಪ್ಪು ನಗರ ಮಾರ್ಗವಾಗಿ ವಾಟರ್ ಟ್ಯಾಂಕ್ ವೃತ್ತಕ್ಕೆ ಆಗಮಿಸಿ ಶೆಟ್ಟಿಹಳ್ಳಿ ರಸ್ತೆ ಮೂಲಕ ಮಸೀದಿವರೆಗೆ ತೆರಳಿತು. ಕಣ್ಣು ಹರಿದಷ್ಟು ದೂರ ಕಾಣುತ್ತಿದ್ದ ಬೃಹತ್ ಮೆರವಣಿಗೆಯಲ್ಲಿ ಹಿರಿಯರು, ಕಿರಿಯರು ಎನ್ನದೆ ಎಲ್ಲರೂ ಸಂಭ್ರಮ, ಸಡಗರಗಳಿಂದ ಭಾಗವಹಿಸಿದ್ದರು. ಹೆಣ್ಣುಮಕ್ಕಳು ರಸ್ತೆಯ ಎರಡೂ ಕಡೆ ನಿಂತು ಮೆರವಣಿಗೆಯ ಉತ್ಸಾಹವನ್ನು ಕಣ್ತುಂಬಿಸಿಕೊಂಡರು.

ಶಾಸಕ ಇಕ್ಬಾಲ್ ಹುಸೇನ್ ಸೇರಿದಂತೆ ಸಮುದಾಯದ ಪ್ರಮುಖ ಮುಖಂಡರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಮೆರವಣಿಗೆಯಲ್ಲಿ ಸಹಸ್ರಾರು ಜನರು ವಿವಿಧ ಘೋಷಣೆಗಳನ್ನು ಕೂಗುತ್ತ ಸಂಚರಿಸಿದರು. ಸಾಂಪ್ರದಾಯಿಕ ಧಿರಿಸಿನಲ್ಲಿದ್ದ ಮಕ್ಕಳು, ಯುವಕರು ಇಸ್ಲಾಂ ಧರ್ಮದ ಧ್ವಜಗಳನ್ನು ಹಾರಿಸಿ ಸಂಭ್ರಮಿಸಿದರು. ಕವ್ವಾಲಿಗಳು ಜನರನ್ನು ರಂಜಿಸಿದವು. ಪವಿತ್ರ ಧಾರ್ಮಿಕ ಸ್ಥಳಗಳನ್ನು ಬಿಂಬಿಸುವ ರೂಪಕಗಳು ಗಮನ ಸೆಳೆದವು. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಜನರಿಗೆ ಸಂಘ ಸಂಸ್ಥೆಗಳು ಕುಡಿಯುವ ನೀರು ಒದಗಿಸಿದವು. ಮೆರವಣಿಗೆ ವೈಭವವನ್ನು ಕಣ್ತುಂಬಿಕೊಳ್ಳುವ ಉದ್ದೇಶದಿಂದ ರಸ್ತೆ ಇಕ್ಕೆಲಗಳಲ್ಲೂ ನೂರಾರು ಜನರು ನಿಂತಿದ್ದರು.

ಬಿಗಿ ಪೊಲೀಸ್ ಬಂದೋಬಸ್ತ್:

ಮೆರವಣಿಗೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಮುನ್ನೆಚರಿಕೆ ಕ್ರಮ ವಹಿಸಿದ್ದರು. ಕೆಎಸ್‌ಆರ್‌ಪಿ ಹಾಗೂ ಡಿಆರ್ ತುಕುಡಿಗಳನ್ನು ಆಯಕಟ್ಟಿನ ಪ್ರದೇಶಗಳಲ್ಲಿ ಮೊಕ್ಕಾಂ ಹೂಡಿದ್ದವು. ಮೆರವಣಿಗೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

ವಕ್ಫ್‌ ತಿದ್ದುಪಡಿ ಮಸೂದೆಗೆ ವಿರೋಧ

ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ನಡೆದ ಮೆರವಣಿಗೆಯಲ್ಲಿ ಮುಸ್ಲಿಮರು ವಕ್ಫ್ ತಿದ್ದುಪಡಿ ಮಸೂದೆ-2024 ಅನ್ನು ತೀವ್ರವಾಗಿ ವಿರೋಧಿಸಿದರು. ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸುವ ಬ್ಯಾನರ್ ಹಿಡಿದು ಹೆಜ್ಜೆ ಹಾಕಿದ ಮುಸ್ಲಿಮರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರ ಹಾಕಿದರು.

ವಿವಿಧತೆಯಲ್ಲಿ ಏಕತೆ ಕಾಣುವ ಜಿಲ್ಲೆ ರಾಮನಗರ ಆಗಿದೆ. ಇಲ್ಲಿ ಎಲ್ಲ ಹಬ್ಬಗಳನ್ನು ಹಿಂದೂ - ಮುಸ್ಲಿಮರು ಒಗ್ಗಟ್ಟಾಗಿ ಆಚರಿಸುತ್ತ ಬಂದಿದ್ದೇವೆ. ಈ ಪರಂಪರೆಯನ್ನು ಹೀಗೆಯೇ ಮುಂದುವರಿಸೋಣ.

-ಇಕ್ಬಾಲ್ ಹುಸೇನ್‌, ಶಾಸಕ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!