‘ನಮ್ಮ ಊರು -ನಮ್ಮ ಕೆರೆ’ ಹೆಸರಿನ ಯೋಜನೆ
ಕನ್ನಡಪ್ರಭ ವಾರ್ತೆ ಹೊನ್ನಾಳಿಕೆರೆ ಕಟ್ಟೆಗಳು ನಾಡಿನ ರೈತರ ಜೀವನಾಡಿಗಳಿದ್ದಂತೆ ಇವುಗಳ ಉತ್ತಮ ನಿರ್ವಹಣೆಯಾದರೆ ರೈತರ ಬದುಕು ಹಸನಾಗುತ್ತದೆ. ಈ ಹಿನ್ನೆಲೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ 2016ರಲ್ಲಿ ರಾಜ್ಯದಲ್ಲಿ ಕೆರೆಗಳ ಹೊಳೆತ್ತುವ ಮೂಲಕ ಕೆರೆಗಳ ಪುನಶ್ಚೇತನಕ್ಕಾಗಿ ‘ನಮ್ಮ ಊರು -ನಮ್ಮ ಕೆರೆ’ ಕಾರ್ಯಕ್ರಮಕ್ಕೆ ಜಾಲನೆ ನೀಡಿದ್ದಾರೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಜಿಲ್ಲಾ ನಿರ್ದೇಶಕ ಲಕ್ಷ್ಮಣ್ ಹೇಳಿದರು.
ನಗರದಲ್ಲಿ ಭಾನುವಾರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ, ಒಡೆಯರ ಹತ್ತೂರು ಗ್ರಾಪಂ, ಕೆರೆ ಅಭಿವೃದ್ದಿ ಸಮಿತಿ, ಪ್ರಗತಿ ಬಂಧು ಸ್ವ-ಸಹಾಯ ಸಂಘಗಳು, ಗ್ರಾಮದ ರೈತ ಸಮುದಾಯದ ಸಹಯೋಗದಲ್ಲಿ ಒಡೆಯರ ಹತ್ತೂರು ಗ್ರಾಮದ ಸಮೀಪ ಆಯ್ಯನ ಕೆರೆ ಹೂಳೆತ್ತುವ ಮೂಲಕ ಪುನಶ್ಚೇನ ಕಾರ್ಯಕ್ರಮವಕ್ಕೆ ದೀಪ ಬೆಳಗಿಸಿ ಚಾಲನೆ ನೀಡಿ ಮಾತನಾಡಿದರು.ನಮ್ಮ ಊರು -ನಮ್ಮ ಕೆರೆ ಕಾರ್ಯಕ್ರಮದಲ್ಲಿ ಒಡೆಯರ ಹತ್ತೂರು ಗ್ರಾಮದ ಆಯ್ಯನ ಕೆರೆಯನ್ನು ಹೂಳೆತ್ತುವ ಮೂಲಕ ಪುನಶ್ಚೇತನಗೊಳಿಸುವ ಕೆಲಸಕ್ಕೆ ಚಾಲನೆ ನೀಡಲಾಗಿದ್ದು, ಈ ಕೆರೆ ಸುಮಾರು 26ಎಕರೆ ವಿಸ್ತೀರ್ಣದ ಕೆರೆಯಾಗಿದ್ದು, ಇದರ ಪುನಶ್ಚೇತನ ಕೆಲಸದ ನಂತರ ಬರುವ ಮಳೆಗಾಲದಲ್ಲಿ ನೀರು ತುಂಬಿದರೆ ಇದರಿಂದ ಅಕ್ಕಪಕ್ಕದ ಕೊಳವೆಬಾವಿಗಳು ಕೂಡ ಅಂತರ್ಜಲದಿಂದ ಮರುಜೀವ ಪಡೆದು ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುತ್ತದೆ ಎಂದರು.
ಈ ಕಾರ್ಯಕ್ರಮದಲ್ಲಿ ಸಣ್ಣ ನೀರಾವರಿ ಇಲಾಖೆಯ ನಿಯಮಾನುಸಾರ ಕೆರೆಯ ಹೂಳು ಕನಿಷ್ಠ 1 ಮೀಟರ್ನಷ್ಟು ತೆಗೆಯುವುದು ನಂತರ ಅದನ್ನು ರೈತರು ತಮ್ಮ ವಾಹನಗಳಲ್ಲಿ ತಮ್ಮ ಹೊಲಗದ್ದೆ, ತೋಟಗಳಿಗೆ ಬಳಸಲು ಒಯ್ಯಬಹುದು ಎಂದು ಹೇಳಿದರು.ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ವತಿಯಿಂದ ರಾಜ್ಯದಲ್ಲಿ ಸುಮಾರು 50 ಕೋಟಿ ರು. ವೆಚ್ಚದಲ್ಲಿ 850 ಕೆರೆಗಳನ್ನು ಪುನಶ್ಚೇತನ ಮಾಡಲಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ ಕೂಡ 4 ಕೆರೆಗಳನ್ನು ಪುನಶ್ಛೇತನ ಮಾಡಲಾಗಿದ್ದು ಹೊನ್ನಾಳಿ, ನ್ಯಾಮತಿ ಅವಳಿ ತಾಲೂಕುಗಳಲ್ಲಿ ಕೂಡ 5 ಕಡೆಗಳಲ್ಲಿ ಕೆರೆಗಳ ಹೂಳೆತ್ತುವ ಮೂಲಕ ಪುನಶ್ಚೇತನ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.
ರಾಜ್ಯ ಅಲ್ಪಸಂಖ್ಯಾತ ವರ್ಗಗಳ ಉಪಾಧ್ಯಕ್ಷ ಎಚ್.ಎ.ಉಮಾಪತಿ, ಕೆರೆ ಅಭಿವೃದ್ದಿ ಸಮಿತಿ ಅಧ್ಯಕ್ಷ ಫಾಲಾಕ್ಷಪ್ಪ, ಹೊನ್ನಾಳಿ ತಾ. ರೈತ ಸಂಘದ ಅಧ್ಯಕ್ಷ ಕೆ.ಸಿ.ಬಸಪ್ಪ, ನ್ಯಾಮತಿ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ, ನಿವೃತ್ತ ಶಿಕ್ಷಕ ಚನ್ನಪ್ಪ ಹಾಲೇಶ್, ಧರ್ಮಸ್ಥಳ ಸಂಸ್ಥೆಯ ಕೃಷಿ ವಿಭಾಗದ ಮೇಲ್ವಿಚಾರಕ ಪ್ರೇಮ್ ಕುಮಾರ್, ಗ್ರಾಮದ ಮುಖಂಡರಾದ ಹಾಲೇಶ್, ಪ್ರಗತಿ ಬಂಧು ಮಹಿಳಾ ಸ್ವ-ಸಹಾಯ ಸಂಘಗಳ ಸದಸ್ಯರು, ಗ್ರಾಮದ ಮುಖಂಡರು, ರೈತರು ಭಾಗವಹಿಸಿದ್ದರು.