ಕನ್ನಡಪ್ರಭ ವಾರ್ತೆ ಔರಾದ್
ಸೋಮವಾರ ಪಟ್ಟಣದ ತಹಸೀಲ್ದಾರ್ ಆವರಣದಲ್ಲಿ ಕನ್ನಡಪರ ಸಂಘಟನೆಯ ಕಾರ್ಯಕರ್ತರು ಸೇರಿಕೊಂಡು ತಹಸೀಲ್ದಾರ್ ಕಚೇರಿ ಎದುರೆ ಶವವಿಟ್ಟು ಹೂಳಲು ಸ್ಥಳವಿಲ್ಲ ಎಂದು ಅಳುತ್ತ ಅಣಕು ಶವಯಾತ್ರೆ ಮೆರವಣಿಗೆ ಮಾಡಿದರು.
ಈ ವೇಳೆ ಮಾತನಾಡಿದ ಹೋರಾಟಗಾರ ಶಿವಶಂಕರ ನಿಷ್ಪತೆ, ತಾಲೂಕು ಆಡಳಿತ ಸಂಪೂರ್ಣ ವಿಫಲವಾಗಿದೆ. ರುದ್ರಭೂಮಿ ಸ್ಥಳ ಅತಿಕ್ರಮಣ ಮಾಡಿ ಮಳಿಗೆಗಳು ನಿರ್ಮಾಣವಾದರೂ ಕೂಡ ಸಂಬಂಧಿತ ಆಧಿಕಾರಿಗಳು ಮಾತ್ರ ಮೌನ ವಹಿಸಿದ್ದಾರೆ. ಈ ಮೌನ ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಅಸಮಾಧಾನ ಹೊರಹಾಕಿದರು.ಲಿಂಗಾಯತ ಸಮಾಜ ಯುವ ಸಂಘದ ಅಧ್ಯಕ್ಷ ವಿರೇಶ ಅಲಮಾಜೆ ಮಾತನಾಡಿ, ಸರ್ಕಾರ ಈ ವಿಷಯ ಗಂಭೀರವಾಗಿ ಪರಿಗಣಿಸಿ ಜನಸಾಮಾನ್ಯರ ನೋವಿಗೆ ಸ್ಪಂದಿಸುವ ಕೆಲಸ ಮಾಡಬೇಕು. ಹಲವು ಬಾರಿ ಮನವಿ ಸಲ್ಲಿಸಿದರೂ ಕೂಡ ಯಾವ ಕ್ರಮ ಕೈಗೊಳ್ಳದ ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶಿಸಿ ಜಾರಿಕೊಳ್ಳುತ್ತಿರುವುದು ಖಂಡನೀಯ ಎಂದರು.
ಈ ಸಂದರ್ಭದಲ್ಲಿ ಕನ್ನಡಪರ ಸಂಘಟನೆಗಳ ಅನೀಲ ಹೇಡೆ, ಶರಣು ಪಾಟೀಲ್, ವಿರೇಶ ಕನಕೆ, ಬಾಲಾಜಿ ದಾಮಾ, ಅಮೀತ ಶಿವಪೂಜೆ, ಪ್ರಶಾಂತ ಚಿದ್ರೆ, ಗುರು ನಿರ್ಮಳೆ, ರಾಜಕುಮಾರ ಮುದಾಳೆ ಸೇರಿದಂತೆ ನೂರಾರು ಜನ ಸರ್ವಶಜನಿಕರು ಪಾಲ್ಗೊಂಡಿದ್ದರು.