ಧರ್ಮಸ್ಥಳ ಕ್ಷೇತ್ರದ ಆನೆ ಲತಾ ನಿಧನ

KannadaprabhaNewsNetwork |  
Published : Mar 09, 2024, 01:36 AM IST
ಆನೆ ಸಾವು | Kannada Prabha

ಸಾರಾಂಶ

ಲತಾ ಹೆಸರಿನ ೬೦ರ ಹರೆಯದ ಹೆಣ್ಣಾನೆ ಕ್ಷೇತ್ರದಲ್ಲೇ ಹುಟ್ಟಿ ಬೆಳೆದಿತ್ತು. ಕ್ಷೇತ್ರದಲ್ಲಿ ಪ್ರತಿವರ್ಷ ಆಚರಿಸಲಾಗುವ ನಡಾವಳಿ, ಜಾತ್ರೆ, ಪಟ್ಟಾಭಿಷೇಕ ಮಹೋತ್ಸವ, ದೀಪೋತ್ಸವದ ಮೆರವಣಿಗೆಗಳಲ್ಲಿ, ಸ್ವಾಮೀಜಿಯವರು, ಕೇಂದ್ರ, ರಾಜ್ಯದ ಮಂತ್ರಿಗಳು ಆಗಮಿಸಿದ ಸಂದರ್ಭಗಳಲ್ಲಿ ನಡೆಸಲಾಗುವ ಮೆರವಣಿಗೆಗಳಲ್ಲಿ ಲತಾ ಭಾಗಿಯಾಗುತ್ತಿದ್ದಳು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಕಳೆದ 50 ವರ್ಷಗಳಿಂದ ಧರ್ಮಸ್ಥಳ ಮಂಜುನಾಥ ಸ್ವಾಮಿಗೆ ಸೇವೆ ಸಲ್ಲಿಸುತ್ತಿದ್ದ ಕ್ಷೇತ್ರದ ಲತಾ (60) ಎಂಬ ಹೆಣ್ಣಾನೆ ಶುಕ್ರವಾರ ಶಿವನ ಪಾದ ಸೇರಿದೆ.

ಈ ಹೆಣ್ಣಾನೆ ಕ್ಷೇತ್ರದಲ್ಲೇ ಹುಟ್ಟಿ ಬೆಳೆದಿತ್ತು. ಕ್ಷೇತ್ರದಲ್ಲಿ ಪ್ರತಿವರ್ಷ ಆಚರಿಸಲಾಗುವ ನಡಾವಳಿ, ಜಾತ್ರೆ, ಪಟ್ಟಾಭಿಷೇಕ ಮಹೋತ್ಸವ, ದೀಪೋತ್ಸವದ ಮೆರವಣಿಗೆಗಳಲ್ಲಿ, ಸ್ವಾಮೀಜಿಯವರು, ಕೇಂದ್ರ, ರಾಜ್ಯದ ಮಂತ್ರಿಗಳು ಆಗಮಿಸಿದ ಸಂದರ್ಭಗಳಲ್ಲಿ ನಡೆಸಲಾಗುವ ಮೆರವಣಿಗೆಗಳಲ್ಲಿ ಲತಾ ಭಾಗಿಯಾಗುತ್ತಿದ್ದಳು.

ಸೌಮ್ಯ ಸ್ವಭಾವದ ಆನೆಗೆ ಪ್ರತಿವರ್ಷ ದೀಪಾವಳಿ ಸಂದರ್ಭದಲ್ಲಿ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅದರ ಮೈದಡವಿ ಆಹಾರ ತಿನ್ನಿಸುತ್ತಿದ್ದರು. ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ಬೆಳಗ್ಗೆ ಮೃತಪಟ್ಟಿತು. ಅರಣ್ಯಾಧಿಕಾರಿಗಳು ಮತ್ತು ಧರ್ಮಸ್ಥಳದ ಪಶುವೈದ್ಯಾಧಿಕಾರಿ ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ದಫನ ಮಾಡಲಾಯಿತು.ಶಿವಪಂಚಾಕ್ಷರಿ ಪಠಣ

ನೀನೊಲಿದರೆ ಕೊರಡು ಕೊನರುವುದು, ವಿಷವೂ ಅಮೃತವಾಗುವುದು ಎಂಬಂತೆ ಪರಿಶುದ್ಧ ಮನದಿಂದ ಶಿವರಾತ್ರಿಯ ಶುಭರಾತ್ರಿಯಲ್ಲಿ ಶಿವನಾಮ ಸ್ಮರಣೆ ಮಾಡಿದರೆ ಸಕಲದೋಷಗಳ ಪರಿಹಾರವಾಗುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.ಅವರು ಶುಕ್ರವಾರ ಧರ್ಮಸ್ಥಳ ಪ್ರವಚನ ಮಂಟಪದಲ್ಲಿ ಅಹೋರಾತ್ರಿ ಶಿವನಾಮ ಪಂಚಾಕ್ಷರಿ ಪಠಣಕ್ಕೆ ಚಾಲನೆ ನೀಡಿ ಮಾತನಾಡಿದರು.

ನಮ್ಮ ಎಲ್ಲ ಮನೋವಿಕಾರಗಳನ್ನು ದೂರಮಾಡಿ ಸಕಲ ಜೀವಿಗಳಿಗೆ ಲೇಸನ್ನೇ ಬಯಸಿ ಉನ್ನತ ಸಾಧನೆ ಮಾಡಬೇಕು. ಶಿವನ ಜೋತೆಗೆ ಶಿವಭಕ್ತರ ಸೇವೆ ಮಾಡಿದರೂ ಪುಣ್ಯ ಬರುತ್ತದೆ ಎಂದು ಅವರು ಹೇಳಿದರು.ಮಹಿಳೆಯರನ್ನು ಗೌರವದಿಂದ ಕಾಣಬೇಕು. ಅವರು ನೊಂದು ಕಣ್ಣೀರು ಹಾಕಿದರೂ ಅದು ಶಾಪವಾಗಿ ಪರಿಣಮಿಸುತ್ತದೆ. ಹಿತ-ಮಿತ, ಸುಮಧುರ ಮಾತುಗಳನ್ನಾಡಬೇಕು. ಮಾತೇ ಮಾಣಿಕ್ಯ. ಮಾತು ಬಿಡ ಮಂಜುನಾಥ ಎಂಬ ಮಾತನ್ನು ಎಲ್ಲರೂ ಸದಾ ನೆನಪಿಟ್ಟುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಮನ, ವಚನ, ಕಾಯದಿಂದ ಪರಿಶುದ್ಧ, ದೃಢಸಂಕಲ್ಪ ಮತ್ತು ಪರಿಶುದ್ಧ ಭಕ್ತಿಯಿಂದ ದೇವರ ಅನುಗ್ರಹಕ್ಕೆ ಪಾತ್ರರಾಗಿ ಉನ್ನತ ಸಾಧನೆ ಮಾಡಬಹುದು. ಶಿವರಾತ್ರಿ ಒಂದೇ ರಾತ್ರಿಗೆ ಸೀಮಿತವಾಗದೆ ಪ್ರತಿ ರಾತ್ರಿಯೂ ಶಿವರಾತ್ರಿಯಾಗಿ, ಶುಭರಾತ್ರಿಯಾಗಿ ಎಲ್ಲೆಲ್ಲೂ ಸುಖ-ಶಾಂತಿ, ನೆಮ್ಮದಿ ನೆಲೆಸಲೆಂದು ಅವರು ಹಾರೈಸಿದರು.ಹೇಮಾವತಿ ವೀ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್‌, ಸುಪ್ರಿಯಾ ಹರ್ಷೇಂದ್ರ ಕುಮಾರ್, ಪಾದಯಾತ್ರೆಯ ರೂವಾರಿ ಹನುಮಂತಪ್ಪ ಗುರೂಜಿ, ಮರಿಯಪ್ಪ ಉಪಸ್ಥಿತರಿದ್ದರು.

ಡಾ. ಪವನ್ ಸಂಪಾದಿಸಿದ ‘ವೈದ್ಯಾಮೃತ’ ಕೃತಿಯನ್ನು ಬಿಡುಗಡೆಗೊಳಿಸಲಾಯಿತು.ಬೆಂಗಳೂರಿನ ಭಕ್ತರಿಂದ ಸೇವೆ: ಶಿವರಾತ್ರಿ ಪ್ರಯುಕ್ತ ಬೆಂಗಳೂರಿನ ಹಲವಾರು ಸಂಘಟನೆಗಳು ಸೇರಿ ಶುಕ್ರವಾರ ರಾತ್ರಿ ಭಕ್ತರಿಗೆ ಉಪಾಹಾರ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ಯಾರಂಟಿಗಳ ಜತೆಗೆ ಹಲವು ಹೊಸ ಯೋಜನೆಗಳೂ ಉಂಟು
ಕೇರಳ ರೀತಿ ಮನೆಯಲ್ಲೇ ರೋಗಿಗಳಿಗೆ ಆರೈಕೆ