ಒಂಟಿ ಚಕ್ರದ ಸೈಕಲ್‌ನಲ್ಲೇ ಕಾಶ್ಮೀರ ಪ್ರಯಾಣ!

KannadaprabhaNewsNetwork |  
Published : Feb 26, 2024, 01:37 AM ISTUpdated : Feb 26, 2024, 01:38 AM IST
ಒಂಟಿ ಚಕ್ರದ ಸೈಕಲ್‌ ಸಾಹಸ ಯಾತ್ರೆ | Kannada Prabha

ಸಾರಾಂಶ

ಈ ಯುವಕರ ತಂಡಕ್ಕೆ ಮಂಗಳೂರಿನ ಎಂಎಸ್ ಸ್ಪೋರ್ಟ್ಸ್ ವೇರ್, ಹೋಪ್ ಫೌಂಡೇಶನ್, ಒಲಿಂಪಿಕ್ ಸ್ಪೋರ್ಟ್ಸ್, ಎಂಎಸ್ ಸ್ಪೋರ್ಟ್ಸ್ ಹೀಗೆ ಜಿಲ್ಲೆಯ ಹತ್ತು ಹಲವು ಸಂಘ ಸಂಸ್ಥೆಗಳು ಸ್ವಾಗತಿಸಿ ಬೆಂಬಲ ವ್ಯಕ್ತಪಡಿಸಿವೆ. ಮಂಗಳೂರಿನಿಂದ ಕಾಶ್ಮೀರದವರೆಗಿನ ಪ್ರಯಾಣಕ್ಕೆ ಸಾರ್ವಜನಿಕರೂ ‘ಆಲ್‌ ದ ಬೆಸ್ಟ್‌’ ಹೇಳಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಸಾಮಾನ್ಯವಾಗಿ ಓಡಿಸುವ ಸೈಕಲ್‌ಗೆ ಇರೋದು ಎರಡು ಚಕ್ರ. ಅದರಲ್ಲಿ ಎದುರಿನ ಚಕ್ರ ತೆಗೆದರೆ ಸವಾರಿ ಸಾಧ್ಯವೇ? ವೀಲಿಂಗ್‌ ಮೂಲಕ ಸರ್ಕಸ್‌ ಮಾಡಿದರೂ ಬಹುತೇಕರಿಗೆ ನಾಲ್ಕು ಪೆಡಲ್‌ ತುಳಿಯೋದೆ ಕಷ್ಟ. ಅಂಥದ್ದರಲ್ಲಿ ಈ ಯುವಕ ಒಂಟಿ ಚಕ್ರದ ಸೈಕಲ್‌ನಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಹೋಗುವ ಮಹಾಸಾಹಸಕ್ಕೆ ಕೈಹಾಕಿದ್ದಾರೆ ಎಂದರೆ ನಂಬ್ತೀರಾ?

ನಂಬಲೇಬೇಕು. ಕೇರಳ ಮೂಲದ ಸಾನಿದ್ ಅವರು ಮಾದಕ ವ್ಯಸನದ ವಿರುದ್ಧ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ವಿಭಿನ್ನ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಕನ್ಯಾಕುಮಾರಿಯಿಂದ ಕಾಶ್ಮೀರದ ಲೇಹ್ ಲಡಕ್‌ವರೆಗೆ ಒಂಟಿ ಚಕ್ರದ ಸೈಕಲ್ ಮೂಲಕ ಪ್ರಯಾಣ ಬೆಳೆಸುತ್ತಿರುವ ಇವರು, ಈಗಾಗಲೇ ಕನ್ಯಾಕುಮಾರಿಯಿಂದ ಮಂಗಳೂರಿಗೆ ತಲುಪಿದ್ದಾರೆ.

ಸೈಕಲ್‌ನ ಎದುರಿನ ಚಕ್ರ ತೆಗೆದು ಹಿಂದಿನ ಚಕ್ರದಲ್ಲೇ ಸಂಚರಿಸುವುದು ಈ ಸೈಕಲ್‌ ಪ್ರಯಾಣದ ವಿಶೇಷತೆ. ಸಾನಿದ್‌ ಅವರು ಒಂಟಿ ಚಕ್ರದ ಸೈಕಲ್‌ನಲ್ಲಿ ಯಾತ್ರೆ ನಡೆಸುತ್ತಿದ್ದರೆ, ಅವರ ಸ್ನೇಹಿತರು ಎರಡು ಚಕ್ರದ ಸೈಕಲ್‌ನಲ್ಲಿ ಸಾಥ್‌ ನೀಡುತ್ತಿದ್ದಾರೆ. ಇವರು ಸಂಚರಿಸುವ ದಾರಿಯುದ್ದಕ್ಕೂ ಈ ವಿಶೇಷ ದೃಶ್ಯವನ್ನು ಜನರು ಆಶ್ಚರ್ಯಚಕಿತರಾಗಿ ನೋಡುತ್ತಿದ್ದಾರೆ.

ಡ್ರಗ್ಸ್‌ ಬಿಡಿ ಸಾಧಕರಾಗಿ: ದೇಶಾದ್ಯಂತ ಮಾದಕ ವ್ಯಸನ ಜಾಲ ಹರಡಿದ್ದು, ಅಮಲು ಪದಾರ್ಥಗಳಿಗೆ ಯುವ ಜನತೆ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ. ಇದು ಯುವ ಪೀಳಿಗೆಯನ್ನು ಸಾಧನೆಯಿಂದ ವಿಮುಖ ಮಾಡುತ್ತಿದೆ. ಇದರ ವಿರುದ್ಧ ಏನಾದರೂ ವಿಭಿನ್ನವಾಗಿ ಜಾಗೃತಿ ಮೂಡಿಸಬೇಕು ಎಂಬ ಛಲ ತೊಟ್ಟು ಈ ಒಂಟಿ ಚಕ್ರದ ಸೈಕಲ್‌ ಪ್ರಯಾಣಕ್ಕೆ ಕೈಹಾಕಿದ್ದಾಗಿ ಸಾನಿದ್‌ ತಿಳಿಸಿದರು.

ಈ ಸ್ನೇಹಿತರು ಎರಡು ತಿಂಗಳ ಹಿಂದೆ ಪ್ರಯಾಣ ಆರಂಭಿಸಿದ್ದಾರೆ. ಸಾನಿದ್‌ ೨ ಸಾವಿರ ಕಿ.ಮೀ.ನ್ನು ಒಂಟಿ ಚಕ್ರದಲ್ಲೇ ಸಂಚರಿಸಿ ಮಂಗಳೂರು ತಲುಪಿದ್ದಾರೆ. ಕರ್ನಾಟಕದಲ್ಲಿ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ಲಭ್ಯವಾಗಿದೆ. ಜನರು ಆಸಕ್ತಿಯಿಂದ ಕೇಳುತ್ತಿದ್ದಾರೆ ಎಂದು ಸಾನಿದ್‌ ಹೇಳಿದರು.

ಈ ಯುವಕರ ತಂಡಕ್ಕೆ ಮಂಗಳೂರಿನ ಎಂಎಸ್ ಸ್ಪೋರ್ಟ್ಸ್ ವೇರ್, ಹೋಪ್ ಫೌಂಡೇಶನ್, ಒಲಿಂಪಿಕ್ ಸ್ಪೋರ್ಟ್ಸ್, ಎಂಎಸ್ ಸ್ಪೋರ್ಟ್ಸ್ ಹೀಗೆ ಜಿಲ್ಲೆಯ ಹತ್ತು ಹಲವು ಸಂಘ ಸಂಸ್ಥೆಗಳು ಸ್ವಾಗತಿಸಿ ಬೆಂಬಲ ವ್ಯಕ್ತಪಡಿಸಿವೆ. ಮಂಗಳೂರಿನಿಂದ ಕಾಶ್ಮೀರದವರೆಗಿನ ಪ್ರಯಾಣಕ್ಕೆ ಸಾರ್ವಜನಿಕರೂ ‘ಆಲ್‌ ದ ಬೆಸ್ಟ್‌’ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ