ಗದಗ: ವಿಶೇಷಚೇತನ ಮಕ್ಕಳು ನಮ್ಮ ಅಮೂಲ್ಯ ಸಂಪತ್ತು. ಅವರ ಬೆಳವಣಿಗೆ ಶೈಕ್ಷಣಿಕ ಅಭಿವೃದ್ಧಿಯೊಂದಿಗೆ ಸ್ವಾವಲಂಬನೆಯ ಬದುಕು ರೂಪಿಸಿಕೊಳ್ಳುವಲ್ಲಿ ಪಾಲಕರೇ ಪ್ರಮುಖರು. ಮುಖ್ಯವಾಗಿ ಪ್ರೀತಿ, ತಾಳ್ಮೆಯೊಂದಿಗೆ ಸರಿಯಾದ ಮಾರ್ಗದರ್ಶನದ ಮೂಲಕ ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸಿ ಅವರ ಕಲಿಕೆಗೆ ಸಹಕರಿಸಬೇಕು ಎಂದು ಸಂಪನ್ಮೂಲ ವ್ಯಕ್ತಿ ಕವಿತಾ ದಂಡಿನ ತಿಳಿಸಿದರು.
ವಿಶೇಷ ಚೇತನರು ವಿಶೇಷ ಸಾಧಕರಾಗಿದ್ದು ಪ್ರೀತಿ ಸಹಕಾರ ಹಾಗೂ ನಿರಂತರ ಪ್ರೋತ್ಸಾಹವೇ ಇವರಿಗೆ ಮುಖ್ಯವಾಗಿದೆ. ಸರಿಯಾದ ಆರೈಕೆ ಹಾಗೂ ಶಿಕ್ಷಣದಿಂದ ಅವರು ಅಭಿವೃದ್ಧಿ ಹೊಂದಿ ಸಾಧನೆ ಸಾಧಿಸಬಲ್ಲರು. ವೈದ್ಯರ ಸಲಹೆಯಂತೆ ನಿಯಮಿತ ಆರೋಗ್ಯ ತಪಾಸಣೆ, ಔಷಧೋಪಚಾರದ ಜೊತೆಗೆ ಸೂಕ್ತ ಚಿಕಿತ್ಸೆಯನ್ನು ಮುಂದುವರಿಸಬೇಕು ಎಂದರು.
ನಂದಾದೇವಿ ಗಿರಡ್ಡಿ ಮಾತನಾಡಿ, ವಿಶೇಷ ಮಕ್ಕಳು ಸಾಮಾನ್ಯ ಮಕ್ಕಳಂತೆ ಆಗಬೇಕು. ಅದಕ್ಕಾಗಿ ಎಲ್ಲರ ಪ್ರಯತ್ನ ಅತ್ಯಗತ್ಯ. ಅವರ ತಂದೆ-ತಾಯಿಗಳು ನಿರಂತರ ಮಕ್ಕಳಿಗಾಗಿ ಶ್ರಮಿಸುತ್ತಿದ್ದು ಇವರು ನಿಜವಾದ ಶ್ರಮಿಕರು ಎಂದರು.ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಲುಕ್ಕಣಸಾ ರಾಜೋಳಿ ಮಾತನಾಡಿದರು. ಶಾಲಾ ಆಡಳಿತ ಮಂಡಳಿ ಸದಸ್ಯ ಬಸವರಾಜ ಪಟ್ಟಣಶೆಟ್ಟಿ, ಸಂಪನ್ಮೂಲ ವ್ಯಕ್ತಿ ಶಶಿಧರ ಚಳಗೇರಿ, ಶ್ರೀನಿವಾಸ ರಡ್ಡಿ, ಶಾಲಾ ಶಿಕ್ಷಕರಾದ ಜಗದೀಶ ಹಡಪದ, ಜಯಶ್ರೀ ಭಾವರೆ, ಸುರೇಶ ಹಾದಿ, ಮಲ್ಲಿಕಾರ್ಜುನ ನಾಗಲಾಪೂರ, ರೇಣುಕಾ ದಾಸರ, ವೀಣಾ ಕೊಲ್ಲಾಪುರೆ ಸೇರಿದಂತೆ ಪಾಲಕ, ಪೋಷಕರು ಇದ್ದರು. ಆಡಳಿತ ಮಂಡಳಿಯ ಕಾರ್ಯದರ್ಶಿ ಜಯರಾಜ ಮುಳಗುಂದ ಸ್ವಾಗತಿಸಿದರು. ಶಾಲಾ ಮುಖ್ಯೋಪಾಧ್ಯಾಯ ಮಲ್ಲಪ್ಪ ಹಕ್ಕಿ ನಿರೂಪಿಸಿದರು.