ಸರ್ವರ್ ಸಮಸ್ಯೆ ಮರುಕಳಿಸುತ್ತಿರುವುದಕ್ಕೆ ಬಿಜೆಪಿ ಕೆಂಡಾಮಂಡಲ, ತರಾಟೆ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ರಾಜ್ಯ ಸರ್ಕಾರದ ಕಾವೇರಿ ತಂತ್ರಾಂಶದ ಮೂಲಕ ಜಾರಿಗೆ ತಂದಿರುವ ಕಾಗದರಹಿತ ಡಿಜಿಟಲ್ ನೋಂದಣಿ ವ್ಯವಸ್ಥೆಯಲ್ಲಿ ಲೋಪವಿದ್ದು, ಆಗಾಗ ಸರ್ವರ್ ಸಮಸ್ಯೆಯಾಗುತ್ತಿದ್ದು, ಬುಧವಾರ ಕೂಡ ಸರ್ವರ್ ಇಲ್ಲದ ರೈತರು, ಪತ್ರಬರಹಗಾರರು ದಿನಗಟ್ಟಲೆ ಕಾದು ಹೈರಾಗಿದ್ದು, ಸರ್ಕಾರ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು.ನಗರದ ಉಪನೋಂದಣಿ ಮತ್ತು ವಿವಾಹ ನೋಂದಣಾಧಿಕಾರಿ ಕಚೇರಿಯಲ್ಲಿ ಸರ್ವರ್ ಇಲ್ಲದೆ ಕ್ರಯ ಆಗುತ್ತಿಲ್ಲ. ಕ್ರಯ, ಮಾಡಿಸಲು, ಜಮೀನು ಬರೆಯಿಸಿಕೊಳ್ಳಲು ಬಂದ ರೈತರು ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಕಾದು ಕುಣಿತು ಹೈರಾಗಿದ್ದು, ಸರ್ಕಾರ ವಿರುದ್ಧ ಹರಿಹಾಯ್ದರು.
ಬಿಜೆಪಿ ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಸೂರ್ಯ ಬಾಲರಾಜು ಮಾತನಾಡಿ, ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿಯಾಗುವ ಪತ್ರಗಳನ್ನು ಸರ್ಕಾರ ಕಾವೇರಿ- 2, ತಂತ್ರಾಂಶ ಜಾರಿಗೊಳಿಸಿದ್ದು, ರಾಜ್ಯದಲ್ಲೇ ಪ್ರಥಮವಾಗಿ ಚಾಮರಾಜನಗರದಲ್ಲಿ ಕಾಗದರಹಿತ ನೋಂದಣಿಗೆ ಚಾಲನೆ ನೀಡಿದರು. ಇದನ್ನು ಜಿಲ್ಲೆಯ ಪತ್ರ ಬರಹಗಾರರು, ಸಾರ್ವಜನಿಕರು, ರೈತರು ಸ್ವಾಗತಿಸಿದರು. ಕೆಲವು ದಿನಗಳವರೆಗೆ ನೋಂದಣಿ ನಡೆಯಿತು. ನಂತರ ದಿನಗಳಲ್ಲಿ ನೋಂದಣಿಗಳು ಆಗುತ್ತಿಲ್ಲ. ಇದರಿಂದ ಸಂಪೂರ್ಣವಾಗಿ ಜನತೆಗೆ ತೊಂದರೆ ಆಗಿದೆ ಎಂದು ಆರೋಪಿಸಿದರು.
15 ದಿನಗಳಿಂದ ನೋಂದಣಿ ಮತ್ತು ಮುದ್ರಾಂಕ ಇಲಾಖೆ ರಾಜ್ಯಾಯುಕ್ತರಿಗೆ ಫೋನ್ ಮಾಡಿದರೆ ಪೋನ್ ತೆಗೆಯುತ್ತಿಲ್ಲ. ಅವರಿಗೆ ಸರ್ಕಾರ ಪೋನ್ ನಂಬರ್ ಕೊಟ್ಟಿರುವುದು ಏತಕ್ಕೆ? ಕಾಗದ ರಹಿತ ನೋಂದಣಿಗೆ ಚಾಲನೆ ಕೊಟ್ಟ ಮೇಲೆ ಎಷ್ಟು ದಿನ ಚಾಮರಾಜನಗರಕ್ಕೆ ಬಂದಿದ್ದೀರಾ? ಈ ಕಾರ್ಯಕ್ಕೆ 3-4 ತಂಡ ರಚನೆ ಮಾಡಿದ್ದೀರಿ. ಮೇಲಧಿಕಾರಿ ನೇಮಕ ಮಾಡಿದ್ದೀರಿ. ಯಾವ ಅಧಿಕಾರಿ ಎಷ್ಟು ದಿನ ಬಂದು ಸಮಸ್ಯೆ ಆಲಿಸಿದ್ದಾರೆ ಎಂದು ಪ್ರಶ್ನಿಸಿದರು. ಈ ಸಮಸ್ಯೆ ಇನ್ನೂ ಎಷ್ಟು ದಿನ. ನೀವು ಜಾರಿ ಮಾಡಿರುವ ಕಾವೇರಿ-2 ತಂತ್ರಾಂಶ ಲೋಪ ಸರಿಯಾಗುವ ತನಕ ಹಳೆ ಕಾವೇರಿ ತಂತ್ರಾಂಶದಲ್ಲಿ ನೋಂದಣಿ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
8ಸಿಎಚ್ಎನ್11