ಮಾಗಡಿ: ತಾಲೂಕು ಕಚೇರಿಯಲ್ಲಿ ಸಮಸ್ಯೆಗಳಿಂದ ಕೂಡಿರುವ ರೆಕಾರ್ಡ್ ರೂಮಿನ ದಾಖಲೆಗಳನ್ನು ಡಿಜಿಟಲೀಕರಣ ಮಾಡಲಾಗುತ್ತಿದ್ದು ಇನ್ನೂ ಮೂರು ತಿಂಗಳ ಕಾಲ ಪ್ರತಿಯೊಂದು ದಾಖಲಾತಿಗಳನ್ನು ಸ್ಕ್ಯಾನಿಂಗ್ ಮಾಡಿ ಸರ್ಕಾರದ ವೆಬ್ ಸೈಟ್ಗಳಿಗೆ ಅಪ್ಲೋಡ್ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ತಿಳಿಸಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ದಾಖಲಾತಿಗಳ ಸ್ಕ್ಯಾನಿಂಗ್ ಗೆ ಚಾಲನೆ ನೀಡಿ ಮಾತನಾಡಿದ ಅವರು, ಇಂದಿನಿಂದ ಮೂರು ತಿಂಗಳ ಕಾಲ ಸತತವಾಗಿ ರೆಕಾರ್ಡ್ ರೂಮಿನಲ್ಲಿರುವ ಎಲ್ಲಾ ದಾಖಲೆಗಳನ್ನು ಸ್ಕ್ಯಾನಿಂಗ್ ಮಾಡಿ ಸರ್ಕಾರದ ವೆಬ್ ಸೈಟ್ಗಳಿಗೆ ಅಪ್ಲೋಡ್ ಮಾಡಲು ಈಗ ಐದು ಸ್ಕ್ಯಾನರ್ ಗಳನ್ನು ತರಿಸಲಾಗಿದೆ. ಸೋಮವಾರದ ಬಳಿಕ ಮತ್ತೆ ಐದು ಸ್ಕ್ಯಾನರ್ಗಳು ಬರಲಿದ್ದು, 10 ಸ್ಕ್ಯಾನರ್ಗಳ ಮೂಲಕ ತರಬೇತಿ ಪಡೆದಿರುವ ಕಂಪ್ಯೂಟರ್ ಆಪರೇಟರ್ ಗಳ ಮೂಲಕ ದಾಖಲಾತಿಗಳನ್ನು ಸ್ಕ್ಯಾನಿಂಗ್ ಮಾಡಲಾಗುವುದು. ಪ್ರತಿದಿನ ಅವರಿಗೆ 5 ಸಾವಿರ ಪ್ರತಿಗಳನ್ನು ಸ್ಕ್ಯಾನಿಂಗ್ ಮಾಡಲಿದ್ದಾರೆ ಎಂದು ಹೇಳಿದರು.ಸಾರ್ವಜನಿಕರು ಈ ಸಂದರ್ಭದಲ್ಲಿ ಅಧಿಕಾರಿಗಳ ಜೊತೆ ಸ್ಪಂದಿಸಬೇಕು. ಈ ದಾಖಲೆಗಳು ಸ್ಕ್ಯಾನಿಂಗ್ ನಂತರ ಯಾವುದೇ ತೊಂದರೆಗಳಿಲ್ಲದೆ ಕಂಪ್ಯೂಟರ್ ಮೂಲಕ ತಮ್ಮ ದಾಖಲಾತಿಗಳನ್ನು ಪಡೆಯಬಹುದು. ಹಾಗಾಗಿ ವಿನಾ ಕಾರಣ ಈ ವೇಳೆ ಸಾರ್ವಜನಿಕರು ಅಧಿಕಾರಿಗಳಿಗೆ ತೊಂದರೆ ಮಾಡಬಾರದು, ಸೌಮ್ಯವಾಗಿ ವರ್ತಿಸಬೇಕು ಎಂದು ಮನವಿ ಮಾಡಿದರು.
ಹಳೆಯ ದಾಖಲೆಗಳೂ ಲಭ್ಯ:ರಾಮನಗರ ಜಿಲ್ಲೆಯಲ್ಲಿ ಹಾರೋಹಳ್ಳಿ ತಾಲೂಕಿನಲ್ಲಿ ದಾಖಲೆಗಳನ್ನು ಸಂಪೂರ್ಣ ಸ್ಕ್ಯಾನಿಂಗ್ ಮಾಡಿಸಲಾಗಿದೆ. ಮಾಗಡಿ ತಾಲೂಕುನಲ್ಲಿಯೂ ರೆಕಾರ್ಡ್ ರೂಮಿನ ದಾಖಲೆಗಳ ಸ್ಕ್ಯಾನಿಂಗ್ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಸಾರ್ವಜನಿಕರು ತಮಗೆ ಬೇಕಾಗಿರುವ ಪತ್ರಗಳನ್ನು ಪಡೆಯುವುದಕ್ಕೆ ಸಾಕಷ್ಟು ಸಮಯ ಹಿಡಿಯುತ್ತಿದೆ ಎಂಬ ದೂರುಗಳು ಮತ್ತು ಕೆಲವು ದಾಖಲಾತಿಗಳು ಸಿಗುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸಂಪೂರ್ಣ ದಾಖಲೆಗಳ ಡಿಜಲೀಕರಣ ಮಾಡಲಾಗುತ್ತಿದೆ. ಮಾಗಡಿ ತಾಲೂಕಿನಲ್ಲಿ 2.5 ಲಕ್ಷ ದಾಖಲಾತಿಗಳು ಇದ್ದು ಈಗ ಪ್ರತಿಯೊಂದು ದಾಖಲೆಯನ್ನು ಸ್ಕ್ಯಾನಿಂಗ್ ಮಾಡುವ ಸಮಯದಲ್ಲಿ ಹಳೆಯ ದಾಖಲಾತಿಗಳೂ ಸಿಗುವುದರಿಂದ ಸಾರ್ವಜನಿಕರಿಗೆ ಅಗತ್ಯ ದಾಖಲಾತಿಗಳನ್ನು ಕೊಡುವ ಕೆಲಸ ಪ್ರಾಮಾಣಿಕವಾಗಿ ಮಾಡುತ್ತೇವೆ. ಕೆಲವು ಸಮಸ್ಯೆಗಳು ಬಂದಿದ್ದು, ಅದನ್ನು ಬಗೆಹರಿಸುವ ಕೆಲಸವನ್ನು ಮಾಡುತ್ತೇವೆ ಎಂದು ಜಿಲ್ಲಾಧಿಕಾರಿಗಳು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಹಾಗೂ ಆರ್ಐ ಸಮ್ಮುಖದಲ್ಲಿ ಸ್ಕ್ಯಾನಿಂಗ್ ಮಾಡುವ ಕಂಪ್ಯೂಟರ್ ಆಪರೇಟರ್ಗಳಿಗೆ ದಾಖಲಾತಿಗಳು ಯಾವ ರೀತಿ ಸ್ಕ್ಯಾನಿಂಗ್ ಮಾಡಬೇಕು ಮತ್ತು ದಾಖಲಾತಿಗಳನ್ನು ಯಾವ ರೀತಿ ಸುರಕ್ಷಿತವಾಗಿ ಇಡುವ ಕೆಲಸ ಮಾಡುವುದರ ಬಗ್ಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.ತಾಲೂಕು ಕಚೇರಿ ಪರಿಶೀಲಿಸಿದ ಜಿಲ್ಲಾಧಿಕಾರಿಗಳು ಯಾವುದೇ ಸಂದರ್ಭದಲ್ಲಿ ಸಾರ್ವಜನಿಕರಿಗೆ ಸ್ಕ್ಯಾನಿಂಗ್ ರೂಂ ಪ್ರವೇಶ ನೀಡದಂತೆ ಮತ್ತು ಹೊಸ ದಾಖಲಾತಿಗಳನ್ನು ಸೇರಿಸುವ ಕೆಲಸ ಆಗಬಾರದೆಂದು ತಹಸೀಲ್ದಾರ್ ಅವರಿಗೆ ಕಟ್ಟುನಿಟ್ಟಿನ ಆದೇಶ ನೀಡಿದರು. ತಹಶೀಲ್ದಾರ್ ಸುರೇಂದ್ರ ಮೂರ್ತಿ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ಪೋಟೋ 3ಮಾಗಡಿ1:ಮಾಗಡಿ ತಾಲೂಕು ಕಚೇರಿಯಲ್ಲಿ ರೆಕಾರ್ಡ್ ರೂಮಿನ ದಾಖಲಾತಿಗಳನ್ನು ಸ್ಕ್ಯಾನಿಂಗ್ ಮಾಡುವುದಕ್ಕೆ ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಚಾಲನೆ ನೀಡಿದರು. ತಹಸೀಲ್ದಾರ್ ಸುರೇಂದ್ರ ಮೂರ್ತಿ, ಕಂದಾಯ ಇಲಾಖೆ ಅಧಿಕಾರಿಗಳು ಹಾಜರಿದ್ದರು.