ಕುದೂರು: ವಿಶೇಷಚೇತನ ಮಕ್ಕಳ ಶಾಲೆಗೆಂದು ನೀಡಿದ್ದ ಕಟ್ಟಡದಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಮಕ್ಕಳು ಇಲ್ಲದೆ ಕಟ್ಟಡ ಯಾವುದೇ ಪ್ರಯೋಜನಕ್ಕೆ ಬಾರದೆ ಪಾಳು ಬಿದ್ದಿತ್ತು. ಈಗ ಅದರ ಮೇಲೆ ಮರಗಳು ಬೆಳೆಯುತ್ತಿರುವುದರಿಂದ ಕಟ್ಟಡ ಬಿರುಕು ಬಿಟ್ಟು ಈಗಲೋ ಆಗಲೋ ಕುಸಿದು ಬೀಳುವ ಸ್ಥಿತಿಯಲ್ಲಿದೆ.
ಈ ಶಾಲೆಯನ್ನು ಖಾಸಗಿ ವ್ಯಕ್ತಿಗಳು ಟ್ರಸ್ಟ್ವೊಂದನ್ನು ಮಾಡಿಕೊಂಡು ವ್ಯವಸ್ಥಿತವಾಗಿ ಶಾಲೆಯನ್ನು ನಡೆಸಿ ಒಂದಷ್ಟು ಸಾಮಾಜಿಕ ಸೇವಾ ಕಾರ್ಯದಲ್ಲೂ ತೊಡಗಿದ್ದರು. ಆದರೆ ಈಗ ಶಾಲೆಯಲ್ಲಿ ಮಕ್ಕಳಿಲ್ಲದ ಕಾರಣ ಕಟ್ಟಡ ಪ್ರಯೋಜನಕ್ಕೆ ಬಾರದಂತಾದ ಮೇಲೆ ಕಾರ್ಯಕಾರಿ ಮಂಡಳಿ ಕೂಡಾ ನಿಷ್ಕ್ರಿಯರಾಗಿದ್ದಾರೆ.
ಗ್ರಾಮದಲ್ಲಿ ಅಂಗನವಾಡಿ ಕಟ್ಟಡವಿಲ್ಲದ ಕಾರಣ ಎರಡು ವರ್ಷಗಳ ಕಾಲ ಅಂಗನವಾಡಿ ಶಾಲೆ ಈ ಕಟ್ಟಡದಲ್ಲಿ ನಡೆಯಿತು. ಸ್ವಂತ ಕಟ್ಟಡಕ್ಕೆ ಅವರು ತೆರಳಿದ ನಂತರ ಕಟ್ಟಡ ಅನಾಥವಾದಂತಾಯಿತು. ಪೊಲೀಸ್ ಠಾಣೆಯ ಹಿಂದೆಯೇ ಕಟ್ಟಡ ಇದ್ದರೂ ವಿಶೇಷಚೇತನ ಶಾಲೆಯ ಕಟ್ಟಡದ ಮೇಲೆ ಕುಡುಕರು ರಾತ್ರಿ ವೇಳೆ ಮದ್ಯಪಾನ ಮಾಡಲು ಮತ್ತು ಗಾಂಜಾ ಸೇವನೆಯಂತಹ ಅನೈತಿಕ ಚಟುವಟಿಕೆಗಳಿಗೆ ಬಳಸುವಂತಾಗಿದೆ ಎಂದು ದೂರಲಾಗಿದೆ.ಕುದೂರು ಗ್ರಾಮ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ನಗರ ಪಂಚಾಯಿತಿಯಾಗಿ ಮಾರ್ಪಾಡಾಗುತ್ತಿದೆ. ಇತರೆ ತಾಲೂಕಿನ ಕಚೇರಿಗಳು ಗ್ರಾಮಕ್ಕೆ ಮಂಜೂರಾಗುವ ಕಾರಣ ಎಲ್ಲ ಕಚೇರಿಗಳು ಒಂದೇ ತಡೆಗೋಡೆ ಆವರಣದಲ್ಲಿ ಇರಲು ಅನುಕೂಲವಾಗಲು ಕೆಲಸ ನಿರ್ವಹಿಸದೆ ಇರುವ ವಿಶೇಷಚೇತನ ಶಾಲೆಯನ್ನು ಪಂಚಾಯಿತಿ ತನ್ನ ಸುಪರ್ದಿಗೆ ಪಡೆದರೆ ಉಪಯೋಗವಾಗುತ್ತದೆ ಎಂಬುದು ಸದಸ್ಯರ ಅಭಿಪ್ರಾಯವಾಗಿದೆ. ಕೋಟ್............
-ಸೋಮಶೇಖರ್, ಅಧ್ಯಕ್ಷರು, ಅರುಣೋದಯ ವಿಶೇಷಚೇತನ ಶಾಲೆ