ಬೇಲೂರು: ಪಟ್ಟಣದ ಹಳೆ ಅಂಚೆ ಕಚೇರಿ ರಸ್ತೆಯ ಶ್ರೀ ರುಕ್ಮಿಣಿ ಪಾಂಡುರಂಗ ದೇಗುಲದಲ್ಲಿ ೩೯ನೇ ವರ್ಷದ ದಿಂಡಿ ಉತ್ಸವ ಭಕ್ತರ ಸಮ್ಮುಖದಲ್ಲಿ ಶ್ರದ್ಧಾ- ಭಕ್ತಿಯಿಂದ ನೆರವೇರಿತು.
ಅದರಂತೆ ಪ್ರಥಮ ಬಾರಿಗೆ ದೇವಸ್ಥಾನದಲ್ಲಿ ಶ್ರೀ ರುಕ್ಮಿಣಿ ಹಾಗೂ ಪಾಂಡುರಂಗ ಸ್ವಾಮಿಯ ಕಲ್ಯಾಣೋತ್ಸವವನ್ನು ಇದೇ ಮೊದಲ ಬಾರಿಗೆ ಭಾವಸಾರ ಕ್ಷತ್ರೀಯ ಸಮಾಜದ ವತಿಯಿಂದ ಏರ್ಪಡಿಸಲಾಗಿತ್ತು.
ಹಾಗೆಯೇ ಕೊನೆಯ ದಿನವಾದ ಸೋಮವಾರ ಪ್ರಮುಖ ಧಾರ್ಮಿಕ, ಸಾಂಸ್ಕೃತಿಕ ದಿಂಡಿ ಉತ್ಸವವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ಶ್ರೀ ಚನ್ನಕೇಶವ ದೇಗುಲದಿಂದ ಪಾಂಡುರಂಗ ದೇವಾಲಯ ತನಕ ವಿಠ್ಠಲ ನಾಮಾವಳಿ ಸ್ಮರಣೆ ಮಾಡುತ್ತಾ ಸಾಗಿದರು. ಮಹಿಳೆಯರು ಕೂಡ ಭಜನೆಗೆ ನೃತ್ಯ ಮಾಡುತ್ತಾ ದಿಂಡಿ ಉತ್ಸವದಲ್ಲಿ ಭಾಗಿಯಾದರು.ಈ ವೇಳೆ ಮಾತನಾಡಿದ ಭಾವಸಾರ ಕ್ಷತ್ರೀಯ ಸಮಾಜದ ಅಧ್ಯಕ್ಷ ಭಗವಂತ್ ರಾವ್ ಗುಜ್ಜರ್ , ಪಾಂಡುರಂಗ ದೇವಾಲಯದಲ್ಲಿ ದಿಂಡಿ ಉತ್ಸವವನ್ನು ಸುಮಾರು ೩೯ ವರ್ಷಗಳಿಂದ ಅದ್ಧೂರಿಯಾಗಿ ನೆರವೇರಿಸಲಾಗುತ್ತಿದ್ದು, ಮೂರು ದಿನಗಳ ಕಾಲ ನಡೆದ ಪೂಜಾ ಕಾರ್ಯಕ್ರಮದಲ್ಲಿ ಬಂದ ಭಕ್ತರಿಗೆ ಅನ್ನದಾಸೋಹ ಏರ್ಪಡಿಸಲಾಗಿತ್ತು. ದೇವಾಲಯದಲ್ಲಿ ಹಲವಾರು ವಿಶೇಷ ಪೂಜೆ ನಂತರ ಮಹಾಮಂಗಳಾರತಿ, ಪ್ರಸಾದ ವಿನಿಯೋಗಿಸಲಾಗುತ್ತದೆ ಎಂದರು.
ಹಾಗೂ ವೇದಬ್ರಹ್ಮ ಕೆ. ಆರ್. ಮಂಜುನಾಥ್ ಮತ್ತು ಸಂಗಡಿಗರು ,ಶೇಷಾದ್ರಿ ಭಟ್ ಬಾಣಾವರ ,ಚಂದ್ರಶೇಖರ್ ಹಾಜರಿದ್ದರು.