- ಹರಿಹರ ಶಾಸಕರನ್ನು ದೂಡಾ ಅಧ್ಯಕ್ಷರು ಟೀಕಿಸುತ್ತಲೇ ಸಚಿವರ ವೈಫಲ್ಯದ ಅನಾವರಣ: ದೊಗ್ಗಳ್ಳಿ ವೀರೇಶ - - -
ಹರಿಹರ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳಾಗುತ್ತಿದ್ದರೂ ಶಾಸಕ ಬಿ.ಪಿ.ಹರೀಶ ವಿರುದ್ಧ ಏಕವಚನದಲ್ಲಿ ಟೀಕಿಸುತ್ತಾ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವಧಿಯಲ್ಲಿ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳೇ ಆಗುತ್ತಿಲ್ಲವೆಂದು ಪರೋಕ್ಷವಾಗಿ ಕೆಪಿಸಿಸಿಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೊಗ್ಗಳ್ಳಿ ವೀರೇಶ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಅವರು, ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ತಮ್ಮ ಕುರ್ಚಿ ಉಳಿಸಿಕೊಳ್ಳಲು, ಹರಿಹರ ಶಾಸಕ ಬಿ.ಪಿ. ಹರೀಶ ಅವರನ್ನು ಟೀಕಿಸಿ, ಜಿಲ್ಲಾ ಸಚಿವರನ್ನು ಓಲೈಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಮತ್ತೊಂದು ಕಡೆ ಹರಿಹರದಲ್ಲಿ ಅಭಿವೃದ್ಧಿ ಕಾರ್ಯಗಳೇ ಆಗುತ್ತಿಲ್ಲವೆಂದು ಕೆಪಿಸಿಸಿ ಮನದಟ್ಟು ಮಾಡಿಕೊಡುವ ಕೆಲಸವನ್ನೂ ದೂಡಾ ಅಧ್ಯಕ್ಷರು ಮಾಡುವ ಮೂಲಕ ಸಚಿವರಿಗೂ ಸಂಕಷ್ಟ ತರುತ್ತಿದ್ದಾರೆ ಎಂದರು.ದೂಡಾ ಅಧ್ಯಕ್ಷ ಸ್ಥಾನದ ಆಫರನ್ನು ಯಾರಿಗೋ ನೀಡಿರುವುದು ಗೊತ್ತಾಗಿ, ತಾವು ರಾಜೀನಾಮೆ ಕೊಡಬೇಕಾದ ಸ್ಥಿತಿಯಲ್ಲಿ ದಿನೇಶ ಶೆಟ್ಟಿ ಕುರ್ಚಿ ಉಳಿಸಿಕೊಳ್ಳಲು ಹರಿಹರ ಶಾಸಕರ ವಿರುದ್ಧ ಟೀಕಿಸುತ್ತಿದ್ದಾರೆ. ರಾಜಕಾರಣ ಹೊರತುಪಡಿಸಿ, ಸಂಸ್ಕಾರ, ಸಂಸ್ಕೃತಿಯನ್ನೂ ಕಾಂಗ್ರೆಸ್ಸಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಲಿಯಲಿ. ಶಾಸಕರಿಗೆ ಏಕವಚನ ಬಳಸುವುದು ಸರಿಯಲ್ಲ. 3 ದಶಕದಿಂದ ರಾಜಕೀಯ ಅಧಿಕಾರ ಅನುಭವಿಸಿದ ಸಚಿವರಿಗೆ ಹರಿಹರದಲ್ಲಿ ನೀರಿನ ಸಮಸ್ಯೆ ಇದೆ, ನೀರಿಗೆ ಹಾಹಾಕಾರ ಇದೆ. ಅದನ್ನು ಪರಿಹರಿಸಬೇಕೆಂಬುದನ್ನು ದಿನೇಶ ಕೆ.ಶೆಟ್ಟಿ ಯಾಕೆ ಗಮನಕ್ಕೆ ತಂದಿಲ್ಲ ಎಂದು ಅವರು ಪ್ರಶ್ನಿಸಿದರು.
ಜರ್ಮನ್ ಮಾದರಿಯೆಂದರೆ ಅದು ಆ ದೇಶದ ಹವಾಗುಣ, ವಾಹನದಟ್ಟಣೆ, ಜನದಟ್ಟಣೆಗೆ ಅನುಗುಣವಾಗಿ ರಸ್ತೆ, ವೃತ್ತ ನಿರ್ಮಾಣ ಮಾಡಿರುತ್ತಾರೆ. ದಾವಣಗೆರೆಯಂತ ಊರಿನಲ್ಲಿ ಜರ್ಮನ್ ಮಾದರಿ ಎಂಬುದಾಗಿ ಕಲ್ಲು ಚಪ್ಪಡಿಯ ವೃತ್ತಗಳನ್ನು ನಿರ್ಮಿಸುವ ಮೂಲಕ ಲೂಟಿ ಸಂಸ್ಕೃತಿಯನ್ನು ಮುಂದುವರಿಸುತ್ತಿದ್ದಾರಾ ಎಂಬ ಪ್ರಶ್ನೆ ಮೂಡುತ್ತದೆ. ಇಲ್ಲಿನ ಡಾ. ಎಂ.ಸಿ. ಮೋದಿ ವೃತ್ತದಲ್ಲಿದ್ದ ಫುಟ್ಬಾಲ್ ಮಾದರಿ ತೆರವುಗೊಳಿಸುವ ಬದಲು, ದುರಸ್ತಿ, ನಿರ್ವಹಣೆ ಮಾಡಿದ್ದರೆ ಸಾಕಿತ್ತು. ಆದರೆ, ಅದನ್ನೆಲ್ಲಾ ತೆರವು ಮಾಡಿ, ಏನು ಸಾಧಿಸಲು ಹೊರಟಿದ್ದಾರೆ ಎಂದು ದೊಗ್ಗಳ್ಳಿ ವೀರೇಶ ಕಿಡಿಕಾರಿದರು.
ಮಾಜಿ ಮೇಯರ್ ಕೆ.ಆರ್. ವಸಂತಕುಮಾರ ಮಾತನಾಡಿ, ಜಿಲ್ಲಾ ಕೇಂದ್ರದಲ್ಲಿ ಇನ್ನೂ ಹಲವಾರು ಹೊಸ ಬಡಾವಣೆ, ಹಳೆ ಪ್ರದೇಶ ಮೂಲ ಸೌಕರ್ಯ ವಂಚಿತವಾಗಿವೆ. ಅಂತಹ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದರ ಬದಲಿಗೆ, ಸುಸ್ಥಿತಿಯಲ್ಲಿದ್ದ ಕಾಂಕ್ರಿಟ್ ವೃತ್ತ, ಫುಟ್ಬಾಲ್ ಮಾದರಿ ವೃತ್ತವನ್ನು ತೆರವು ಮಾಡಿ, ಸಾರ್ವಜನಿಕರ ತೆರಿಗೆ ಹಣವನ್ನು ವ್ಯರ್ಥ ಮಾಡಲಾಗುತ್ತಿದೆ. ಅದೇ ಅನುದಾನ ವಿವಿಧ ಭಾಗಗಳಲ್ಲಿ ರಸ್ತೆ, ಚರಂಡಿ ಸೇರಿದಂತೆ ಇತರೆ ಅಭಿವೃದ್ಧಿ ಕಾರ್ಯಕ್ಕೆ ಬಳಸಬಹುದಿತ್ತು ಎಂದು ಹೇಳಿದರು.
- - -
- - -
- - -
ದಾವಣಗೆರೆಯಲ್ಲಿ ಬುಧವಾರ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೊಗ್ಗಳ್ಳಿ ವೀರೇಶ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.