ನೇರ ಕೂರಿಗೆ ಭತ್ತ ಬಿತ್ತನೆ ಪದ್ಧತಿ ರೈತರಿಗೆ ವರದಾನ

KannadaprabhaNewsNetwork |  
Published : May 28, 2025, 12:24 AM IST
26ಜೆಎಲ್ಆರ್ಚಿತ್ರ1: ಜಗಳೂರು ತಾಲೂಕಿನ ಮೆದಗಿನಕೆರೆ ಗ್ರಾಮದಲ್ಲಿ ಕೂರಿಗೆ ಭತ್ತ ಬಿತ್ತನೆ ಬಗ್ಗೆ ಕೃಷಿ ಬೇಸಾಯ ತಜ್ಞ ಬಿ.ಒ.ಮಲ್ಲಿಕಾರ್ಜುನ್, ತೋಟಗಾರಿಕಾ ತಜ್ಞ ಡಾ.ಎಂ.ಜಿ.ಬಸವನಗೌಡ ರೈತರಿಗೆ ತರಬೇತಿ ನೀಡಿ, ಬಿತ್ತನೆ ಬೀಜಗಳನ್ನು ವಿತರಿಸಿದರು. | Kannada Prabha

ಸಾರಾಂಶ

ಬರಪೀಡಿತ ಜಗಳೂರು ತಾಲೂಕಿಲ್ಲೀಗ ವರ್ಷದಿಂದ ವರ್ಷಕ್ಕೆ ಮಳೆ ಪ್ರಮಾಣ ಹೆಚ್ಚಾಗುತ್ತಿದೆ. ಇಲ್ಲಿನ ರೈತರು ರಾಗಿ ಬೆಳೆ ಮಾದರಿಯಲ್ಲಿ ಕೂರಿಗೆ ಭತ್ತ ಬಿತ್ತನೆ ಮಾಡಿದರೆ ರೈತರಿಗೆ ವರದಾನವಾಗಲಿದೆ ಎಂದು ಕೆವಿಕೆ ಬೇಸಾಯ ತಜ್ಞ ಬಿ.ಒ. ಮಲ್ಲಿಕಾರ್ಜುನ್ ಹೇಳಿದ್ದಾರೆ.

- ಮೇದಗಿನಕೆರೆ ಗ್ರಾಮದ ಕಾರ್ಯಕ್ರಮದಲ್ಲಿ ಕೆವಿಕೆ ಬೇಸಾಯ ತಜ್ಞ ಬಿ.ಒ.ಮಲ್ಲಿಕಾರ್ಜುನ್

- - -

- ಹೊಸ ತಳಿಯಾದ ಆರ್‌ಎನ್ಆರ್-15048 ಬಿತ್ತನೆ ಸೂಕ್ತ

- ಪೆಂಡಮಿತಿಲಿನ್ ಕಳೆನಾಶಕ ಪ್ರತಿ ಎಕರೆಗೆ 700 ಮಿ.ಲೀ. ಬಳಸಬೇಕು

- - -

ಕನ್ನಡಪ್ರಭ ವಾರ್ತೆ ಜಗಳೂರು

ಬರಪೀಡಿತ ಜಗಳೂರು ತಾಲೂಕಿಲ್ಲೀಗ ವರ್ಷದಿಂದ ವರ್ಷಕ್ಕೆ ಮಳೆ ಪ್ರಮಾಣ ಹೆಚ್ಚಾಗುತ್ತಿದೆ. ಇಲ್ಲಿನ ರೈತರು ರಾಗಿ ಬೆಳೆ ಮಾದರಿಯಲ್ಲಿ ಕೂರಿಗೆ ಭತ್ತ ಬಿತ್ತನೆ ಮಾಡಿದರೆ ರೈತರಿಗೆ ವರದಾನವಾಗಲಿದೆ ಎಂದು ಕೆವಿಕೆ ಬೇಸಾಯ ತಜ್ಞ ಬಿ.ಒ. ಮಲ್ಲಿಕಾರ್ಜುನ್ ಹೇಳಿದರು.

ಮೇದಗಿನಕೆರೆ ಗ್ರಾಮದಲ್ಲಿ ದಾವಣಗೆರೆಯ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರ ಹಾಗೂ ಬಿದರಕೆರೆ ತರಳಬಾಳು ಅಮೃತ ರೈತ ಉತ್ಪಾದಕ ಕಂಪನಿ ಸಹಯೋಗದಲ್ಲಿ ಸೋಮವಾರ ನೇರ ಕೂರಿಗೆ ಭತ್ತ ಬಿತ್ತನೆ ಮುಂಚೂಣಿ ಪ್ರಾತ್ಯಕ್ಷಿಕೆ ತರಬೇತಿ ಕಾರ್ಯಕ್ರಮದಲ್ಲಿ ಅವರು 22 ರೈತರಿಗೆ ಉಚಿತ ಭತ್ತ ಬಿತ್ತನೆ ಬೀಜ ವಿತರಿಸಿ ಮಾತನಾಡಿದರು.

ಪ್ರಮುಖವಾದ ಆಹಾರ ಬೆಳೆ ಈ ಬೆಳೆಯನ್ನು ಮಳೆಯಾಶ್ರಿತ ಪ್ರದೇಶಗಳಾದ ಜಗಳೂರು ತಾಲೂಕಿನಲ್ಲಿ ಬೆಳೆಯಬಹುದು ಎಂದು ತೋರಿಸಿಕೊಡಲಾಗಿದೆ. 1 ಎಕರೆ ಪ್ರದೇಶಕ್ಕೆ 10 ಕೆಜಿ ಬಿತ್ತನೆ ಬೀಜ ಬೇಕಾಗುತ್ತದೆ. ನವೀನ ತಳಿಯಾದ ಆರ್‌ಎನ್ಆರ್-15048 ಬಿತ್ತನೆ ಮಾಡುವುದು ಸೂಕ್ತ. ಸಂಯುಕ್ತ ಕೂರಿಗೆಯ ಮುಖಾಂತರ ಗೊಬ್ಬರ ಮತ್ತು ಬೀಜವನ್ನು ಬಿತ್ತನೆ ಮಾಡಬೇಕು. ಬಿತ್ತನೆ ಮಾಡಿದ ಎರಡು ದಿನಗಳ ಒಳಗೆ ಉದಯೋನ್ಮುಖ ಕಳೆನಾಶಕವಾದ ಪೆಂಡಮಿತಿಲಿನ್ 700 ಮಿ.ಲೀ. ಪ್ರತಿ ಎಕರೆಗೆ ಬಳಸಬೇಕು ಎಂದು ಸಲಹೆ ನೀಡಿದರು.

ಮೋಹಕ ಬಲೆಗಳು ಮುಖ್ಯ:

ಬಿತ್ತನೆಯಾದ 20 ದಿವಸಗಳ ನಂತರ ಮತ್ತೊಮ್ಮೆ ಕಳೆನಾಶಕವಾದ ಬಿಸ್ ಪೈರಿ ಬ್ಯಾಕ್ ಸೋಡಿಯಂ 100 ಎಂಎಲ್ ಪ್ರತಿ ಎಕರೆಗೆ ಜೊತೆಗೆ ಮೆಟ್ಸಲ್ಫ್ರನ್ 20 ಡ್ಯೂಪಿ ಗ್ರಾಂ ಎಕರೆಗೆ ಬಳಸಬೇಕು. ಸಮಗ್ರ ಕಳೆ ನಿರ್ವಹಣೆ ಪದ್ಧತಿಗಳಾದ ಸೈಕಲ್ ಲೀಡರ್ ಮತ್ತು ಎತ್ತಿನ ಬೇಸಾಯ ಮಾಡುವುದರಿಂದ ಹೆಚ್ಚಿನ ಇಳುವರಿಯನ್ನು ಪಡೆಯಬಹುದು. ಕಾಂಡಕೊರಕದಲ್ಲಿ ನಿರ್ವಹಣೆಗಾಗಿ ನಾಟಿ ಮತ್ತು ಬಿತ್ತನೆಯಾದ 20 ದಿವಸಗಳ ನಂತರ ಪ್ರತಿ ಎಕರೆಗೆ 4ರಂತೆ ಮೋಹಕ ಬಲೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ದ್ವಿದಳ ಧಾನ್ಯ ಬೆಳೆಯಿರಿ:

ತೋಟಗಾರಿಕಾ ತಜ್ಞ ಡಾ. ಎಂ.ಜಿ. ಬಸವನಗೌಡ ಮಾತನಾಡಿ, ಇತ್ತೀಚಿಗೆ ಅಡಕೆ ಬೆಳೆಗೆ ಕೆಂಪು ಮತ್ತು ಬಿಳಿ ನುಸಿ ಹೆಚ್ಚಾಗುತ್ತಿದೆ. ಅದಕ್ಕೆ ಕಾರಣ ಅತಿಯಾದ ಅಡಕೆ ಬೆಳೆ ವ್ಯಾಪ್ತಿ ವಿಸ್ತಾರಗೊಳ್ಳುತ್ತಿರುವುದಾಗಿದೆ. ರೈತರು ಇಳುವರಿ ಹೆಚ್ಚಿಸಲು ಅಡಕೆ ತೋಟಗಳಲ್ಲಿ ದ್ವಿದಳ ಧಾನ್ಯ ಬೆಳೆಯಬೇಕು. ಈರುಳ್ಳಿ ಬೆಳೆಯುವ ರೈತರು ಬಾಗಲಕೋಟೆ ತೋಟಗಾರಿಕಾ ವಿ.ವಿ. ಸಂಶೋಧಿಸಿರುವ ಭೀಮಾ ಸೂಪರ್ ತಳಿ ಬಿತ್ತನೆ ಮಾಡಿದರೆ ರೋಗಬಾಧೆ ನಿಯಂತ್ರಿಸುತ್ತದೆ ಎಂದರು.

ಗೃಹ ವಿಜ್ಞಾನಿ ಡಾ. ಸುಪ್ರಿಯಾ ಪಾಟೀಲ್, ಬಿದರಕೆರೆ ಎಫ್‌ಪಿಒ ಅಧ್ಯಕ್ಷ ಎಂ.ಎಚ್. ಮಂಜುನಾಥ್, ಉಪಾಧ್ಯಕ್ಷ ಎಸ್.ಎಂ. ಸೋಮನಗೌಡ, ನಿರ್ದೇಶಕರಾದ ಗುತ್ತಿದುರ್ಗ ಬಸವನಗೌಡ ಸೇರಿದಂತೆ ಇತರರು ಪಾಲ್ಗೊಂಡಿದ್ದರು. ಮೆದುಗಿನಕೆರೆ, ಸಾಗಲಕಟ್ಟೆ, ಬಿಳಿಚೋಡು, ಗೊತ್ತಿದುರ್ಗ, ಕೊರಟಿಗೆರೆ ಬಿಸ್ತುವಳ್ಳಿ, ರಸ್ತೆ ಮಾಕುಂಟೆ ರೈತರು ತರಬೇತಿಯಲ್ಲಿ ಭಾಗವಹಿಸಿ ಉಚಿತವಾಗಿ ಭತ್ತದ ಬಿತ್ತನೆ ಬೀಜದ ಪ್ಯಾಕೇಟ್ ಪಡೆದರು.

- - -

-26ಜೆಎಲ್ಆರ್‌1:

ಜಗಳೂರು ತಾಲೂಕಿನ ಮೆದಗಿನಕೆರೆ ಗ್ರಾಮದಲ್ಲಿ ಕೂರಿಗೆ ಭತ್ತ ಬಿತ್ತನೆ ಬಗ್ಗೆ ಕೃಷಿ ಬೇಸಾಯ ತಜ್ಞ ಬಿ.ಒ. ಮಲ್ಲಿಕಾರ್ಜುನ್, ತೋಟಗಾರಿಕಾ ತಜ್ಞ ಡಾ. ಎಂ.ಜಿ. ಬಸವನಗೌಡ ರೈತರಿಗೆ ತರಬೇತಿ, ಸಲಹೆ ನೀಡಿ ಬಿತ್ತನೆ ಬೀಜಗಳನ್ನು ವಿತರಿಸಿದರು.

PREV

Recommended Stories

ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನೆ
ಪ್ಲಾನಿಂಗ್‌ ಆ್ಯಂಡ್ ಆರ್ಕಿಟೆಕ್ಚರ್‌ ಸ್ಕೂಲ್‌ ಆರಂಭಕ್ಕೆ ಸಿದ್ಧತೆ: ಡಿಕೆಶಿ