ಹಾವೇರಿ: ಬೇಸಿಗೆ ಅವಧಿಯಲ್ಲಿ ಯಾವುದೇ ಗ್ರಾಮಗಳಲ್ಲಿ ಜನರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ನೀರು ಪೂರೈಸುವ ಹೊಣೆಗಾರಿಕೆ ಆಯಾ ಗ್ರಾಪಂಗಳ ಆದ್ಯ ಕರ್ತವ್ಯ. ಕುಡಿಯುವ ನೀರು ಪೂರೈಕೆಯಲ್ಲಿ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಕ್ಷಯ್ ಶ್ರೀಧರ್ ಎಚ್ಚರಿಸಿದರು.
ಮನರೇಗಾ: ಮನರೇಗಾ ಯೋಜನೆಯಡಿ ಮುಂದಿನ ಆರು ತಿಂಗಳು ಅವಧಿಗೆ ಸಮಗ್ರ ಕ್ರಿಯಾ ಯೋಜನೆ ಅನುಮೋದಿಸಿಕೊಳ್ಳಲಾಗಿದೆ. ೧೬೨ ಕೂಸಿನ ಮನೆ (ಶಿಶು ಪಾಲನಾ ಕೇಂದ್ರ)ಗಳನ್ನು ಗುರುತಿಸಿ ಸ್ಥಾಪಿಸಲಾಗಿದೆ. ಮುಂದಿನ ಸಾಲಿನಲ್ಲಿ ಜಿಲ್ಲೆಯಿಂದ ಪ್ರಮುಖವಾಗಿ ಐದು ಅಂಶಗಳಡಿ ಸಮಗ್ರವಾಗಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಶಾಲಾ ಶೌಚಾಲಯ, ಶಾಲಾ ಕಾಂಪೌಂಡ್ ನಿರ್ಮಾಣ ಮತ್ತು ಆಟದ ಮೈದಾನದ ಅಭಿವೃದ್ಧಿಪಡಿಸುವುದು, ವೈಯಕ್ತಿಕ ದನದ ದೊಡ್ಡಿ ನಿರ್ಮಾಣ, ಸ್ಮಶಾನ ಅಭಿವೃದ್ಧಿ ಹಾಗೂ ನಿರುಗಾಲುವೆ ಹೂಳೆತ್ತುವುದು ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಹಾಗೂ ಈ ಯೋಜನೆಯಡಿ ಮಹಿಳಾ ಕೂಲಿ ಕಾರ್ಮಿಕರಿಗೆ ಹೆಚ್ಚು ಕೆಲಸ ನೀಡುವ ಮೂಲಕ ಮಹಿಳಾ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.
ಗ್ಯಾರಂಟಿ ಯೋಜನೆಗಳು: ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಾದ ಅನ್ನ ಭಾಗ್ಯ, ಗೃಹ ಜ್ಯೋತಿ, ಗೃಹ ಲಕ್ಷ್ಮಿ, ಯುವ ನಿಧಿ, ಶಕ್ತಿ ಯೋಜನೆಗಳ ಅನುಷ್ಠಾನದಲ್ಲಿ ಅಗತ್ಯ ಮಾಹಿತಿ ಮತ್ತು ಸಹಕಾರವನ್ನು ನೀಡಿ ಯೋಜನೆಗಳನ್ನು ಯಶಸ್ವಿಗೊಳಿಸಲು ಕ್ರಮವಹಿಸಬೇಕು. ಡಿಜಿಟಲ್ ವಿಧಾನದ ಮೂಲಕ ತೆರಿಗೆ ವಸೂಲಾತಿ ಕೈಗೊಳ್ಳಬೇಕು. ತೆರಿಗೆದಾರರ ಮನವೊಲಿಸಿ ಬಾಕಿ ತೆರಿಗೆ ವಸೂಲಾತಿಗೆ ಕ್ರಮವಹಿಸುವುದರೊಂದಿಗೆ ಆಸ್ತಿಗಳ ದಾಖಲೀಕರಣ ಮಾಡುವಂತೆ ಸೂಚನೆ ನೀಡಿದರು.ತಾಲೂಕು ಮತ್ತು ಗ್ರಾಪಂ ಕಾರ್ಯಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಇ-ಹಾಜರಾತಿ ತಂತ್ರಾಂಶದ ಮೂಲಕ ಹಾಜರಾತಿ ದಾಖಲಿಸುವುದು ಕಡ್ಡಾಯವಾಗಿದೆ. ಸರ್ಕಾರ ಈಗಾಗಲೇ ನಿರ್ದೇಶಿಸಿದಂತೆ ಇ-ಹಾಜರಾತಿ ಮೂಲಕವೇ ವೇತನ ಸಂದಾಯ ಮಾಡಲಾಗುವುದು. ಇನ್ನು ಮುಂದೆ ಕಡ್ಡಾಯವಾಗಿ ಎಲ್ಲ ಸಿಬ್ಬಂದಿ ಇ-ಹಾಜರಾತಿ ಮೂಲಕವೇ ಹಾಜರಾತಿ ನೀಡಬೇಕು ಎಂದರು.