ಫೆಬ್ರವರಿ 17ಕ್ಕೆ ವಿಧಾನನಸೌಧ ಮುತ್ತಿಗೆ ಎಚ್ಚರಿಕೆ
ಸರ್ಕಾರ ಕೇವಲ ಬಿಟ್ಟಿ ಭಾಗ್ಯಗಳನ್ನು ಘೋಷಣೆ ಮಾಡಿದರೆ ಸಾಲದು ದೇಶದ ಬೆನ್ನಲುಬಾದ ರೈತನ ಸಂಕಷ್ಟಕ್ಕೆ ಸ್ಪಂದಿಸಿ ಬೆಳೆ ಪರಿಹಾರ, ಸಹಾಯ ಧನ, ಕೃಷಿ ಚಟುವಟಿಕೆಗಳಿಗೆ ನೀರಾವರಿ ಒದಗಿಸುವಲ್ಲಿ ಮುಂದಾಗಬೇಕು ಎಂದು ರೈತ ಸಂಘದ ರೈತ ಬಣ ಯುವ ಘಟಕ ರಾಜ್ಯಾಧ್ಯಕ್ಷ ಚಂದ್ರಶೇಖರ್ ಬೋವಿ ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಬರಗಾಲ ಆವರಿಸಿದ್ದು ಜಿಲ್ಲೆಯ ರೈತರು ಬೆಳೆದ ಬೆಳೆಗಳಿಗೆ ಪರಿಹಾರ ಇನ್ನೂ ಸಿಕ್ಕಿಲ್ಲ, ಅಲ್ಲದೆ ಮೇವಿನ ಸಮಸ್ಯೆಗಳು ಇರುವಲ್ಲಿ ಗೋವುಗಳಿಗೆ ಮೇವನ್ನು ಒದಗಿಸುವ ಕಾರ್ಯವಾಗಬೇಕು. ಅಲ್ಲದೆ ರೈತರ ಬೆಳೆಗಳಿಗೆ ಪರಿಹಾರವಾಗಿ ಹೆಕ್ಟೇರ್ಗೆ ೨೫ ಸಾವಿರ ರು. ನೀಡಬೇಕು. ಇಲ್ಲದಿದ್ದಲ್ಲಿ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಫೆ.೧೭ ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಹೇಳಿದರು.ಕಳೆದ ಒಂದು ವರ್ಷದಿಂದ ಯಾವುದೇ ಅಭಿವೃದ್ದಿ ಕಾರ್ಯಗಳು ಜರುಗದೆ ಕೇವಲ ಬಿಟ್ಟಿ ಭಾಗ್ಯಗಳನ್ನು ನೀಡಿ ಸಾರ್ವಜನಿಕವಾಗಿ ಆಸ್ಪತ್ರೆಗಳು, ಶಾಲೆಗಳ ಅಭಿವೃದ್ಧಿಯನ್ನೇ ಮರೆತಿದೆ. ಆದ್ದರಿಂದ ಬಡವರು, ಮಧ್ಯಮ ವರ್ಗದವರು ಖಾಸಗಿ ವಲಯಗಳನ್ನು ಅವಲಂಭಿಸಿ ಲಕ್ಷಾಂತರ ರು. ವೆಚ್ಚ ಮಾಡುವಂತಾಗಿದೆ. ಕೃಷಿ ಕಾರ್ಯದ ಬಗ್ಗೆ ಅಸಡ್ಡೆ ತೋರಿ ಶೇಕಡ ೭೫ ರಷ್ಟು ಮಂದಿ ಉಳುವುದನ್ನೇ ಬಿಟ್ಟಿದ್ದಾರೆ. ರಾಜ್ಯದ ರೈತರ ಹಿತಾಸಕ್ತಿಯನ್ನೇ ಮರೆತ ಪಕ್ಷ ಹಾಗೂ ಸರ್ಕಾರಕ್ಕೆ ಜನರು ಲೋಕಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಹಾಸನ ಜಿಲ್ಲಾಧ್ಯಕ್ಷ ದಯಾನಂದ, ಮಹಿಳಾ ಘಟಕ ಅಧ್ಯಕ್ಷೆ ನಾಗವೇಣಿ, ತಾಲೂಕು ಅಧ್ಯಕ್ಷ ಶಿವಕುಮಾರ್, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯಮ್ಮ, ಸಿದ್ದೇಶ್, ಕಿರಣ್ಗೌಡ ಉಪಸ್ಥಿತರಿದ್ದರು.